ಚುನಾವಣಾಧಿಕಾರಿಗಳಿಗೆ ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನೀಡಿದ ಸೂಚನೆಗಳೇನು?, ಇಲ್ಲಿದೆ ವಿವರ
ಹಾಸನ, ಏಪ್ರಿಲ್, 04: ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಸೂಚನೆ ನೀಡಿದ್ದಾರೆ. ಹಾಗೆಯೇ ಚುನಾವಣಾ ಪ್ರಚಾರಗಳಲ್ಲಿ 18 ವರ್ಷದ ಒಳಗಿರುವ ಮಕ್ಕಗಳನ್ನು ಬಳಸಿಕೊಳ್ಳಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಎಲ್ಲಾ ಕ್ಷೇತ್ರದ ಚುನಾವಣಾಧಿಕಾರಿಗಳು, ತಹಶೀಲ್ದಾರ್, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ನೀತಿ ಸಂಹಿತೆ ಸಂಪೂರ್ಣ ಜಾರಿ ಆಗಬೇಕು
ಚೆಕ್ ಪೋಸ್ಟ್ನಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಬ್ಬರೂ ಕೆಲಸ ಮಾಡಬೇಕು. ಪ್ರತಿದಿನ ಪಾಳಿವಾರು ಹಾಜರಾತಿ ನಿರ್ವಹಣೆ ಮಾಡಬೇಕು. ಅಲ್ಲದೇ ಎಫ್.ಎಸ್.ಟಿ ತಂಡಗಳು ಸಂಪೂರ್ಣವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ವರದಿ ನೀಡಬೇಕು. ಈ ಮೂಲಕ ನೀತಿ ಸಂಹಿತೆ ಸಂಪೂರ್ಣ ಜಾರಿ ಆಗಬೇಕು. ಮತ್ತು ಬಾಕಿ ಇರುವ ನಮೂನೆಗಳನ್ನು ವಿಲೇವಾರಿ ಮಾಡಬೇಕು ಸೂಚನೆ ನೀಡಿದರು.
ಎಲ್ಲಾ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆ ಪರಿಶೀಲನೆ ಮಾಡಿ, ಎಲ್ಲಾ ಸುಸ್ಥಿತಿಯಲ್ಲಿ ಇರುವುದನ್ನು ಖಾತರಿ ಪಡಿಸಿಕೊಳ್ಳಿ. ನಂತರ ದುರಸ್ತಿ ಕಾಮಾಗಾರಿ ಪ್ರಾರಂಭ ಮಾಡಿರುವ ಬಗ್ಗೆ ವರದಿ ನೀಡಿ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಮತಗಟ್ಟೆ ದುರಸ್ತಿಗೆ ತಾಲೂಕುವಾರು ಅನುದಾನ ಬಿಡುಗಡೆ ಮಾಡಿದ್ದು, ತಾಲೂಕು ಪಂಚಾಯತಿಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕ ಮಾಡಿ ಆದಷ್ಟು ಬೇಗ ಕಿಟಕಿ, ಬಾಗಿಲುಗಳನ್ನು ದುರಸ್ತಿ ಮಾಡಿಸಿ ಎಂದರು.
ಏಪ್ರಿಲ್ 4ರಂದು ಮೊದಲ ಹಂತದ ರಾಂಡಮೈಜೇಷನ್ ನಡೆದಿದ್ದು, ಅದಕ್ಕೆ ಮುನ್ನ ಸ್ಟ್ರಾಂಗ್ ರೂಂ ಸಂಪೂರ್ಣ ಸಿದ್ದವಾಗಿರುವುದನ್ನು ಖಾತರಿಪಡಿಸಿ, ಅಗ್ನಿ ಶಾಮಕ ಇಲಾಖೆಯಿಂದ ಸುರಕ್ಷತಾ ಬಗ್ಗೆ ದೃಢೀಕರಣ ಪತ್ರ ಪಡೆಯಿರಿ ಎಂದು ತಿಳಿಸಿದರು. ಇನ್ನು ಚುನಾವಣೆಗೆ ಬಳಸಲಾಗುತ್ತಿರುವ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಚೆಕ್ ಪೋಸ್ಟ್ಗಳಿಗೆ ಕಂಟೈನರ್ಗಳು ಬರಲಿದ್ದು, ಅವುಗಳನ್ನು ಸೂಕ್ತ ಜಾಗದಲ್ಲಿ ಇರಿಸಲು ವ್ಯವಸ್ಥೆ ಮಾಡಿ, ಸಿ.ಸಿ ಕ್ಯಾಮರಾ ಅಳವಡಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
18 ವರ್ಷದೊಳಗಿನ ಮಕ್ಕಳನ್ನ ಬಳಸಿಕೊಳ್ಳುವಂತಿಲ್ಲ
2023ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ 18 ವರ್ಷಕ್ಕಿಂತ ಕೆಳಗಿರುವ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಮಕ್ಕಳ ಹಕ್ಕುಗಳ ಒಡಂಡಿಕೆಯ ಕಲಂ 32 ಮತ್ತು 36ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರದಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ.
ಅದರಂತೆಯೇ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಾರ್ಯಗಳಲ್ಲಿ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇದಿಸಿದೆ. ಆದಾಗ್ಯೂ ಮಕ್ಕಳನ್ನು ಚುನಾವಣಾಕಾರ್ಯದಲ್ಲಿ ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೊಜನಾ ಸೊಸೈಟಿ ಅಧ್ಯಕ್ಷರಾದ ಅರ್ಚನಾ ಎಂ.ಎಸ್. ತಿಳಿಸಿದ್ದಾರೆ.












Click it and Unblock the Notifications