ಶ್ರವಣಬೆಳಗೊಳದಲ್ಲಿ ವೆಂಕಯ್ಯ ನಾಯ್ಡು, ಬಾಹುಬಲಿಗೆ ರಾಜ್ಯಾಭಿಷೇಕ
ಬೆಂಗಳೂರು, ಫೆಬ್ರವರಿ 10 : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ, ವೈರಾಗ್ಯಮೂರ್ತಿ ಬಾಹುಬಲಿಗೆ ನಡೆಯಲಿರುವ ರಾಜ್ಯಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ರವಣಬೆಳಗೊಳ ತಲುಪಿದ್ದು, ಚಾವುಂಡರಾಯ ಸಭಾಮಂಟಪದಲ್ಲಿ ರಾಜ್ಯಾಭಿಷೇಕ ಕಾರ್ಯಕ್ರಮ ನೆರವೇರಿಸಿದರು. ಅಲ್ಲಿ ಕಳೆದ 3 ದಿನಗಳಿಂದ ಪಂಚಕಲ್ಯಾಣ, ಗರ್ಭಕಲ್ಯಾಣ, ಜನ್ಮಕಲ್ಯಾಣ ಮಹೋತ್ಸವ ನಡೆದಿವೆ.
In Pics: ಬಾಹುಬಲಿ ಮಹಾಮಜ್ಜನಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ
ವೆಂಕಯ್ಯ ನಾಯ್ಡು ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಥಳೀಯ ಶಾಸಕ ಎ ಮಂಜು ಮತ್ತಿತರರು ಮೈಸೂರು ಟೋಪಿ ತೊಡಿಸಿ ಬರಮಾಡಿಕೊಂಡರು. ನಂತರ ವೆಂಕಯ್ಯ ನಾಯ್ಡು ಅವರು ಉತ್ಸವ ಮೂರ್ತಿಗೆ ರಾಜ್ಯಾಭಿಷೇಕ ಮಾಡಿ ಆಶೀರ್ವಾದ ಪಡೆದುಕೊಂಡರು. ನಂತರ ಗೊಮ್ಮಟೇಶ್ವರ ಬಾಹುಬಲಿ ಕುರಿತು ಬರೆಯಲಾಗಿರುವ 108 ಪುಸ್ತಗಳನ್ನು ಅವರು ಬಿಡುಗಡೆ ಮಾಡಿದರು.
ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವೆಂಕಯ್ಯ ನಾಯ್ಡು ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಕೇಂದ್ರ ಸಂಸದೀಯ ವ್ಯವಹಾರ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಎಚ್ಎಎಲ್ ವಿಮಾನದಲ್ಲಿ ಹೂಗುಚ್ಛ ನೀಡಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯಲಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಫೆಬ್ರವರಿ 17ರಿಂದ ಫೆಬ್ರವರಿ 25ರವರೆಗೆ ಸಾಂಗೋಪಾಂಗವಾಗಿ ನಡೆಯಲಿದ್ದು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಭಾರೀ ಸಿದ್ಧತೆಗಳು ನಡೆದಿವೆ. ಫೆಬ್ರವರಿ 7ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಹಾಮಸ್ತಕಾಭಿಷೇಕ ಉತ್ಸವಕ್ಕೆ ಚಾಲನೆ ನೀಡಿದ್ದರು.
Performing the Rajyabhisheka Ceremony during the 88th Mahamastakabhisheka Mahotsav of Bahubali, in Karnataka's Shravana Belagola today. #Shravanabelagola pic.twitter.com/OrU52NbHqi
— VicePresidentOfIndia (@VPSecretariat) February 10, 2018
ಫೆಬ್ರವರಿ 17ರಂದು 57 ಅಡಿ ಎತ್ತರವಿರುವ, 24 ತೀರ್ಥಂಕರರಲ್ಲಿ ಮೊದಲನೆಯ ತೀರ್ಥಂಕರನಾದ ಗೊಮ್ಮಟೇಶ್ವರ ಭವ್ಯಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ ನಡೆಯಲಿದೆ. ವೈರಾಗ್ಯದಿಂದ ಸಕಲವೆಲ್ಲವನ್ನೂ ತ್ಯಾಗ ಮಾಡಿದ ಗೊಮ್ಮಟೇಶ್ವರನನ್ನು ನೋಡಲು ದೇಶವಿದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ನೆರೆಯಲಿದೆ.