ಪೆಡ್ಲರ್ಗಳು ಗಡಿಪಾರು, ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
ಹಾಸನ, ಜೂನ್ 27: ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯುವ ಸಮೂಹ ಮಾದಕ ದ್ರವ್ಯದ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಜೊತೆಗೆ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆ ಹಚ್ಚಬೇಕು. ಚಾಳಿ ಬಿದ್ದ ಪೆಡ್ಲರ್ಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಕಠಿಣ ಕ್ರಮಗಳ ಮೂಲಕ ಡ್ರಗ್ ಹಾವಳಿಯನ್ನು ತಡೆಯಬೇಕು ಎಂದು ಸೂಚಿಸಿದ್ದಾರೆ.

ಡ್ರಗ್ ಮಾಫಿಯಾದ ಮೇಲೆ ನಿರಂತರ ನಿಗಾ ಇಡುವುದು, ಮಾರಾಟ ಜಾಲದ ಚಲನ ವಲನಗಳ ಮೇಲೆ ತೀವ್ರ ನಿಗಾ ಇಡಬೇಕು. ಇದಕ್ಕಾಗಿ ಪ್ರತ್ಯೇಕವಾದ ವಿಶೇಷ ತಂಡ ರಚಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಪೊಲೀಸರು ಡ್ರಗ್ ಮಾಫಿಯಾದವರ ಮೇಲೆ ಕೇವಲ ಕೇಸು ದಾಖಲಿಸಿದರಷ್ಟೆ ಸಾಲದು. ನ್ಯಾಯಾಲಯಗಳಲ್ಲಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದೂ ಕೂಡ ಪೊಲೀಸರ ಹೊಣೆಗಾರಿಕೆ ಎಂದರು.
ಇನ್ನು ಕೇಸು ದಾಖಲಾದ ಪ್ರಮಾಣ ಮತ್ತು ಶಿಕ್ಷೆಯ ಪ್ರಮಾಣ ಎರಡನ್ನೂ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಪ್ರತಿ ಠಾಣೆಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ಶಿಕ್ಷೆಯ ಪ್ರಮಾಣವನ್ನೂ ಪರಿಶೀಲಿಸಿ ಠಾಣಾಧಿಕಾರಿಗಳಿಂದ ವರದಿ ಕೇಳಬೇಕು ಎನ್ನುವ ಸೂಚನೆ ನೀಡಿದ್ದಾರೆ.
ಹಾಸನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸಂಭ್ರಮ
ಈವರೆಗೂ ಬೆಂಗಳೂರು ಕೇಂದ್ರದಲ್ಲಿ ನಡೆಸುತ್ತಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಈ ಭಾರಿ ಹಾಸನದಲ್ಲಿ ಆಯೋಜನೆ ಮಾಡಲಾಗಿತ್ತು. ನಗರದ ಹಳೇ ತಾಲೂಕು ಕಚೇರಿಯ ಪಕ್ಕದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಶಿವಲಿಂಗೇಗೌಡ, ಸ್ವರೂಪ್ ಪ್ರಕಾಶ್, ಬಾಲಕೃಷ್ಣ, ಸುರೇಶ್, ಮಂಜು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿದರು. ಸಮುದಾಯಕ್ಕೆ ಹಾಗೂ ಕೆಂಪೇಗೌಡರಿಗೆ ಕೊಟ್ಟ ಗೌರವದ ಬಗ್ಗೆಯೂ ಪ್ರಸ್ತಾಪ ಮಾಡಿದರು. ಜೊತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಭರವಸೆ ನೀಡಿದರು.












Click it and Unblock the Notifications