ಯಾವ ಸಿಂಗಾಪುರನೂ ಇಲ್ಲ.. ಬಂಡೆಯಂತಹ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಶಿವಲಿಂಗೇಗೌಡ
ಹಾಸನ, ಜುಲೈ, 26: ಸರ್ಕಾರ ಬೀಳಿಸುವುದಕ್ಕೆ ಸಿಂಗಾಪುರದಲ್ಲಿ ಭಾರೀ ಕುತಂತ್ರ ಮಾಡುತ್ತಿದ್ದಾರೆ ಎನ್ನುವ ವಿಚಾರ ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರಕ್ಕೆ ಹಾಸನ ಜಿಲ್ಲೆಯ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಕೆ.ಎಂ.ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ನೋಡಿ ಯಾವ ಸಿಂಗಾಪುರನೂ ಇಲ್ಲ.. ಏನು ಇಲ್ಲ. ಕತ್ತು ಹಿಡಿದು ದೂಕಿದರೂ ಯಾರೂ ಎಲ್ಲಿಗೂ ಹೋಗುವುದಿಲ್ಲ ಎಂದಿದ್ದಾರೆ.
135 ಜನ ಗೆದ್ದಿದ್ದು, ಸಮಸ್ಯೆಗಳಿಗೆ ಪರಿಹಾರ ಮಾತ್ರ ಕೇಳುತ್ತೇವೆ. ಇದನ್ನು ಬಿಟ್ಟರೆ ಯಾರದ್ದೂ ಚಕಾರವಿಲ್ಲ. ಮಂತ್ರಿ ಮಾಡಲಿಲ್ಲ ಎಂಬ ಕಾರಣದಿಂದ ಬಿ.ಕೆ.ಹರಿಪ್ರಸಾದ್ ತಮ್ಮ ಕಷ್ಟವನ್ನು ಸಮಾಜದ ಎದುರು ತೋಡಿಕೊಂಡಿದ್ದಾರೆ ಅಷ್ಟೇ. ಅವರು ಮುಖ್ಯಮಂತ್ರಿ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂದು ಹೇಳಿರುವುದು ಬೇರೆ ರಾಜ್ಯದ ಬಗ್ಗೆ ಎಂದರು.

ಅವರೇನು ಸಿದ್ದರಾಮಯ್ಯ ಅವರನ್ನು ಇಳಿಸುವುದು ಗೊತ್ತು ಎಂದಿದ್ದಾರಾ.? ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿನ ಬಂಡೆಯಂತಹ ಸರ್ಕಾರವನ್ನು ಯಾರೂ ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಅವರ ಅವಧಿ ಇರುವವರೆಗೂ ಅವರನ್ನು ಟಚ್ ಮಾಡುವುದಕ್ಕೂ ಆಗುವುದಿಲ್ಲ ಎಂದರು.
ಅಲ್ಲದೆ ಐದು ಗ್ಯಾರಂಟಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದೀರಿ. ಆದರೆ ನಾವು ಗ್ಯಾರಂಟಿ ಕೊಟ್ಟು, ಬಜೆಟ್ ಅನ್ನೂ ಮಂಡನೆ ಮಾಡಲಿಲ್ವಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ದ ಹರಿಹಾಯ್ದರು. ಹಾಗೆಯೇ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಸಿದ್ದರಾಮಯ್ಯನವರಿಗೆ ಒಳ ಒಪ್ಪಂದ ಮಾಡಿಕೊಂಡು ಏನಾದ್ರೂ ಮಾಡಿಕೊಂಡರೆ ಅದು ನಮಗೆ ಗೊತ್ತಿಲ್ಲ ಎಂದರು.












Click it and Unblock the Notifications