ಶ್ರವಣಬೆಳಗೊಳದಲ್ಲಿ ಆ.11ರಿಂದ ಜೈನ ಮಹಿಳಾ ಸಮ್ಮೇಳನ
ಶ್ರವಣಬೆಳಗೊಳ, ಆಗಸ್ಟ್ 03 : ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಇದೇ ಆಗಸ್ಟ್ 11ರಿಂದ 13ರವರೆಗೆ ಜರುಗಲಿರುವ ರಾಷ್ಟ್ರ ಮಟ್ಟದ ಜೈನ ಮಹಿಳಾ ಸಮ್ಮೇಳನದ ಸ್ವಾಗತ ಕಚೇರಿಯನ್ನು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಗುರುವಾರ ಉದ್ಘಾಟಿಸಿದರು.
ದಿಗಂಬರ ಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸುತ್ತಿರುವ ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನ ಯಶಸ್ವಿಯಾಗಲಿ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿದರು.

ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ 2018ರ ಫೆಬ್ರವರಿಯಲ್ಲಿ ನಡೆಯಲಿದ್ದು, ವಿಶ್ವದಾದ್ಯಂತ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಭರದಿಂದ ಕಾಮಗಾರಿಗಳು ಕೂಡ ಸಾಗಿವೆ.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೈಸೂರಿನ ಶೀಲಾ ಅನಂತರಾಜ್, ಮಾಜಿ ಅಧ್ಯಕ್ಷೆ ಕೇಸರಿ ರತ್ನರಾಜ್, ಕಾರ್ಯದರ್ಶಿ ಲತಾ, ಸಹ ಕಾರ್ಯದರ್ಶಿ ಕಲ್ಪನಾ ಉದಯಕುಮಾರ್, ಖಜಾಂಚಿ ನಿರ್ಮಲಾ ಭರತರಾಜ್, ಶ್ರವಣಬೆಳಗೊಳ ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್, ಸುಪ್ರಭಾ ಮುಂತಾದವರು ಉಪಸ್ಥಿತರಿದ್ದರು.

ವೀರೇಂದ್ರ ಹೆಗ್ಗಡೆ ಭೇಟಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಪೂಜ್ಯ ಆಚಾರ್ಯಶ್ರೀ ಶ್ರೀ 108 ವರ್ಧಮಾನಸಾಗರ ಮಹಾರಾಜರು ಹಾಗೂ ಮುನಿ ವೃಂದದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು ಕೂಡ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.












Click it and Unblock the Notifications