ಅ.28, 29ರಂದು ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಜೈನ ಯುವ ಸಮ್ಮೇಳನ
ಹಾಸನ ಅಕ್ಟೋಬರ್ 27: ಶ್ರವಣಬೆಳಗೊಳದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಅಕ್ಟೋಬರ್ 28 ಮತ್ತು 29ರಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶ್ರವಣಬೆಳಗೊಳದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಜೈನ ಯುವ ಸಮ್ಮೇಳನ ಆಯೋಜಿಸಲಾಗಿದೆ.
ದಿಗಂಬರ ಜೈನ ವ್ಯವಸ್ಥಾಪಕ ಸಮಿತಿಯು ಈ ಸಮ್ಮೇಳನ ಆಯೋಜಿಸಿದೆ. ಅ.28 ರಂದು ಬೆಳಗ್ಗೆ 9.30 ಗಂಟೆಗೆ ಆಚಾರ್ಯ ಶ್ರೀ ಮತ್ತು ಮುನಿಶ್ರೀಗಳ ಸಾನ್ನಿಧ್ಯದಲ್ಲಿ, ಚಾವುಂಡರಾಯ ಸಭಾ ಮಂಟಪದಲ್ಲಿ ಮಂಗಲ ಕಲಶ ಸ್ಥಾಪನೆ ನೆರವೇರಲಿದೆ. 10 ಗಂಟೆಗೆ ಭವ್ಯ ಮೆರವಣಿಗೆ ಪ್ರಾರಂಭಗೊಂಡು 10.45ಕ್ಕೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಸಭಾ ಮಂಟಪಕ್ಕೆ ಆಗಮಿಸಲಿದೆ.

ರಾಷ್ಟ್ರೀಯ ಜೈನ ಯುವ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ ಶುಭನುಡಿ ನುಡಿಯಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಲೇಖಕರಾದ ಉಜ್ವಲ್ ಪಾಟ್ನಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಮೂಡಬಿದರೆ ಕ್ಷೇತ್ರದ ಶಾಸಕ ಕೆ. ಅಭಯಚಂದ್ರ ಜೈನ್, ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಶ್ರೀಕಂಠೇಗೌಡ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.30 ರಿಂದ 5.30 ರವರೆಗೆ ಪ್ರಥಮ ಗೋಷ್ಠಿ ಏರ್ಪಡಿಸಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಬಂಧ ಮಂಡನೆಯನ್ನು ವೃತ್ತಿ ಮಾರ್ಗದರ್ಶನ-ರಿತೇಶ್ ಜೈನ್, ಆಡಳಿತಾತ್ಮಕ ಸೇವೆಗಳು ಮತ್ತು ಯುವಜನತೆ-ನಿತಿನ್ ನಂದಗಾಂವ್ಕರ್, ಭಾವನೆಗಳ ಪರಿಣಾಮ ಏನಾಗಬಹುದು ಎಂಬ ವಿಷಯವನ್ನು ಎಸ್.ಪಿ. ಭಾರಿಲ್ಲಾ, ಆಂಗ್ಲ ಭಾಷೆಯಲ್ಲಿ ಕ್ಷಮೆಯಶಕ್ತಿ-ಸೌರಭ್ ಶಾಸ್ತ್ರಿ ಅವರು ಮಂಡಿಸಲಿದ್ದಾರೆ.
ವಂದನಾರ್ಪಣೆಯನ್ನು ದಿಲೀಪ್ ಮೆಹತಾ, ನಿರೂಪಣೆಯನ್ನು ರಾಜೇಂದ್ರ ಜೈನ್ 'ಮಹಾವೀರ', ಸನಾವದ್ ಮಾಡಲಿದ್ದಾರೆ.
ಸಂಜೆ 6 ರಿಂದ ರಾತ್ರಿ 9.30ರವರೆಗೆ ಯುವ ಪ್ರತಿಭೆಗಳ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಅಭಯ್ ಪಾಟೀಲ್ ಭಾಗವಹಿಸಲಿದ್ದಾರೆ.
ಅ.29 ರಂದು ಬೆಳಗ್ಗೆ 7 ರಿಂದ 9 ಗಂಟೆವರೆಗೆ ವಿಂಧ್ಯಗಿರಿ ಪ್ರದಕ್ಷಿಣೆ, ಸಂಸ್ಕೃತಿಯ ರಕ್ಷಣೆಗಾಗಿ ಜಾಥಾವನ್ನು ಏರ್ಪಡಿಸಿದೆ. ಪ್ರಥಮ ಗೋಷ್ಠಿಯನ್ನು ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಸಭಾ ಮಂಟಪದಲ್ಲಿ ನಡೆಯುತ್ತದೆ. ಇನ್ಫೋಸಿಸ್ ಟೆಕ್ನಾಲಜಿಸ್ ಎಂ.ಡಿ-ಚೇರ್ ಮನ್ ಸಿದ್ಧಾರ್ಥ ಸೇಠಿ ಅಧ್ಯಕ್ಷತೆ ವಹಿಸುವರು. ದ್ವಿತೀಯ ಗೋಷ್ಠಿಯು ಮಧ್ಯಾಹ್ನ 2.30ರಿಂದ 3.30 ರವರೆಗೆ ನಡೆಯಲಿದೆ.
ರಾಷ್ಟ್ರೀಯ ಜೈನ ಯುವ ಸಮ್ಮೇಳನ ಸಮಾರೋಪ ಸಮಾರಂಭವು ಮಧ್ಯಾಹ್ನ 3.30 ರಿಂದ 5.30 ರವರೆಗೆ ನಡೆಯುತ್ತದೆ. ಸಂಸದ ಪ್ರತಾಪಸಿಂಹ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ರಾಜು ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಮತ್ತಿತರರು ಭಾಗವಹಿಸಲಿದ್ದಾರೆ.
ಆಚಾರ್ಯ ಶ್ರೀಗಳು ಆಶೀರ್ವಚನ ನೀಡುವರು, ರಾತ್ರಿ 7 ರಿಂದ 9.30 ಗಂಟೆವರೆಗೆ ಯಶಸ್ಸಿನ ಕಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications