ಮುಸ್ಲಿಂಮರಿಗೆ ವ್ಯಾಪಾರ ನಿರ್ಬಂಧ ಬಿಜೆಪಿ ಅಜೆಂಡ; ಡಿಕೆಶಿ

ಹಾಸನ, ಏಪ್ರಿಲ್ 06; "ಮುಸ್ಲಿಂಮರ ವ್ಯಾಪಾರ ವಹಿವಾಟು ನಿರ್ಬಂಧ ಇದು ಬಿಜೆಪಿ ಅಜೆಂಡಾ. ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಮುಂದಾಗಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದರು.

ಬುಧವಾರ ಹಾಸನದಲ್ಲಿ ಮಾತಾನಾಡಿದ ಅವರು, "ಮೊನ್ನೆ ಹಲಾಲ್ ಕಟ್ ವಿಚಾರವಾಗಿ ದಾಳಿ ಮಾಡಿದರು. ರಾಜ್ಯದಲ್ಲಿ ಕುರಿ, ಕೋಳಿ ಸಾಕುವವರು ರೈತರು. ಇವುಗಳನ್ನು ನಿಗದಿತ ಸಮಯದಲ್ಲಿ ಕಟಾವು ಮಾಡದಿದ್ದರೆ ರೈತರಿಗೆ ಅವುಗಳ ಮೇವಿನ ಹೊರೆ ಬೀಳಲಿದೆ" ಎಂದರು.

"ಕೋವಿಡ್ ಸಮಯದಲ್ಲಿ ಅಲ್ಪಸಂಖ್ಯಾತರೇ ರೈತರಿಂದ ಮಾವು ಖರೀದಿ ಮಾಡಿದ್ದರು. ಈಗ ಅವರ ವ್ಯಾಪಾರ ನಿಷೇಧ ಮಾಡಿದರೆ ನಷ್ಟ ಆಗುವುದು ರೈತರಿಗೆ. ಆಗ ಮಾವಿನ ಬೆಲೆಯೂ ಏರಿಕೆಯಾಗುತ್ತದೆ. ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸಹಾಯ ಮಾಡಲಿಲ್ಲ. ಪರಿಹಾರ ನೀಡಲು ಆನ್‌ಲೈನ್‌ ಮೂಲಕ ಅರ್ಜಿ ಕರೆದರು. ಯಾರೂ ಕೂಡ ಅರ್ಜಿ ಹಾಕಲು ಸಾಧ್ಯವಾಗದೆ ಪರಿಹಾರ ಪಡೆಯಲಿಲ್ಲ" ಎಂದು ಹೇಳಿದರು.

Muslim Mango Traders Face Boycott Its BJP Agenda Says DK Shivakumar

"ರೈತರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ. ಬಿಜೆಪಿಯವರು ಮತ ಧ್ರುವೀಕರಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವವರನ್ನು ಶಿಕ್ಷಿಸುತ್ತಿಲ್ಲ. ಇದರಿಂದ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಭಾವಿಸಿದ್ದಾರೆ. ಮಾವಿನ ವಿವಾದದಿಂದ ರೈತರಿಗೆ ನಷ್ಟವಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ" ಎಂದು ಡಿ. ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಕಾಲದಲ್ಲಿ ಶಾದಿಭಾಗ್ಯ ತಂದು ಒಂದು ಸಮುದಾಯ ಓಲೈಸಿ ಸಮಾಜ ಒಡೆದರು ಎಂಬ ಸಿ. ಟಿ. ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ ನಾನು. ಅವರು ಮೇಧಾವಿಗಳು, ನಾವು ನಮ್ಮ ಕಾರ್ಯಕ್ರಮ ರೂಪಿಸಿದ್ದೇವೆ. ಅವರು ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಮಾಡಲಿ. ಅದನ್ನು ಜನರಿಗೆ ತಲುಪಿಸಿ ನಂತರ ಮಾತನಾಡಲಿ" ಎಂದರು.

ಎಲ್ಲ ಪಕ್ಷಗಳು ಒಂದೊಂದು ಸಮುದಾಯ ಓಲೈಸುತ್ತಿವೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಿ, "ನಾನು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗ ಅಧಿಕಾರಕ್ಕೆ ಬಂದಂತೆ. ನಾವು ಪುಟಾಣಿ ಮಕ್ಕಳಿಗೆ ಬಿಸಿಯೂಟ ಯೋಜನೆ ತಂದೆವು. ಹೈನುಗಾರಿಕೆ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟೆವು" ಎಂದು ವಿವರಿಸಿದರು.

"ಪರಿಶಿಷ್ಟರ ಜನಸಂಖ್ಯೆ ಆಧಾರದ ಮೇಲೆ ಅನುದಾನ ಕೊಟ್ಟೆವು. ಯುಪಿಎ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆ ತಂದಿತ್ತು. ಆದರೆ ಬಿಜೆಪಿ ಅವರು ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ, ಆರ್ಟಿಕಲ್ 370 ಯಂತಹ ಕಾನೂನು ತರುತ್ತಿದ್ದಾರೆಯೇ ಹೊರತು, ಜನರ ಆದಾಯ ಹೆಚ್ಚಿಸಲು, ರೈತರ ಬೆಂಬಲ ಬೆಲೆಗೆ, ಇಂಧನ ಬೆಲೆ ನಿಯಂತ್ರಣ ಮಾಡಲು, ಯುವಕರಿಗೆ ಉದ್ಯೋಗ ನೀಡಲು ಯಾವುದಾದರೂ ಕಾರ್ಯಕ್ರಮ ಮಾಡಿದ್ದಾರೆಯೇ?" ಎಂದು ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.

ಚುನಾವಣೆ ಬಳಿಕ ಮೈತ್ರಿ; "ನಾವು ನಮ್ಮ ಕಾಲ ಮೇಲೆ, ಸ್ವಂತ ಬಲದ ಸರ್ಕಾರ ರಚನೆ ಮಾಡುತ್ತೇವೆ. ಜನ ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ" ಎಂದು ಹೇಳಿದ ಡಿ. ಕೆ. ಶಿವಕುಮಾರ್ ಚುನಾವಣೋತ್ತರ ಮೈತ್ರಿಯನ್ನು ತಳ್ಳಿ ಹಾಕಿದರು.

"ಹಾಸನದಲ್ಲಿ ನಮಗೆ ದೊಡ್ಡ ನಾಯಕರುಗಳೇ ಬರಬೇಕು ಎಂಬ ನಿರೀಕ್ಷೆ ಇಲ್ಲ. 5-10 ಮತಗಳಿಂದ 2-3 ಸಾವಿರ ಮತಗಳನ್ನು ತರುವ ಕಾರ್ಯಕರ್ತರು ಪಕ್ಷ ಸೇರಿದರೆ ಸಾಕು. ನಮ್ಮ ಪಕ್ಷ ಸೇರಲು ಸುಮಾರು ಅರ್ಜಿಗಳು ಬಂದಿವೆ. ಈ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇವೆ. ಪಕ್ಷದ ಸ್ಥಳೀಯ ಕಾರ್ಯಕರ್ತರ ಜತೆ ಅವರು ಬೆರೆಯಬೇಕು. ಈ ಅರ್ಜಿ ಸ್ವೀಕರಿಸಲು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಇದೆ. ಯಾರೆಲ್ಲ ಅರ್ಜಿ ಹಾಕಿದ್ದಾರೆ ಎಂಬುದು ಗೌಪ್ಯವಾದ ವಿಚಾರ. ಅದನ್ನು ಬಹಿರಂಗಪಡಿಸುವುದಿಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಬೆಲೆ ಏರಿಕೆ; "ನಿಮ್ಮ ಕೈಯಲ್ಲಿ ಈ ದೇಶ, ರಾಜ್ಯವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಹೆಚ್ಚಾಗಿದೆ. ನೀವು ಅಧಿಕಾರ ಬಿಟ್ಟು ವಿಶ್ರಾತಿ ತೆಗೆದುಕೊಳ್ಳಿ. ಇದು ಜನ ಆಯ್ಕೆ ಮಾಡಿದ ಸರ್ಕಾರವಲ್ಲ" ಎಂದು ಡಿ. ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ನನ್ನ ಯಾವುದೇ ಬಣ ಇಲ್ಲ. ನನ್ನದು ಕಾಂಗ್ರೆಸ್ ಬಣ ಅಷ್ಟೇ. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಪಕ್ಷದ ಕಾರ್ಯಕರ್ತನಾಗಿದ್ದೇನೆ. ನೀವು ಬಣ ಮಾಡುತ್ತಿದ್ದೀರೋ ಅಥವಾ ಬಣ್ಣ ಹಚ್ಚುತ್ತಿದ್ದೀರೋ ಗೊತ್ತಿಲ್ಲ" ಎಂದರು.

ಅಭ್ಯರ್ಥಿ ಆಯ್ಕೆ ಬಗ್ಗೆ ಮಾತಾನಾಡಿ, "ನಾವು ನಮ್ಮ ನಾಯಕರ ಜತೆ ಚರ್ಚಿಸಿದ್ದು, ಈ ತಿಂಗಳಲ್ಲಿ ವಿಭಾಗವಾರು ಮಟ್ಟದಲ್ಲಿ ಎಲ್ಲ ಜಿಲ್ಲಾ ನಾಯಕರನ್ನು ಕರೆಸಿ ಸಭೆ ಮಾಡುತ್ತಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಬಳಿ ಇರುವ ವರದಿ ಬಗ್ಗೆಯೂ ಚರ್ಚಿಸುತ್ತೇವೆ. ಅಭ್ಯರ್ಥಿ ಆಯ್ಕೆ ವೇಳೆ ಗೆಲುವೇ ಮಾನದಂಡ ಆಗಲಿದೆ" ಎಂದು ಹೇಳಿದರು.

"ಅವಧಿಗೂ ಮುನ್ನ ಚುನಾವಣೆ ಬಗ್ಗೆ ಬಿಜೆಪಿಯವರನ್ನು ಕೇಳಿದರೆ ಉತ್ತಮ. ನಾವಂತೂ ನಾಳೆ ಚುನಾವಣೆ ಮಾಡಿದರೂ ಎದುರಿಸಲು ಸಿದ್ಧ. ಅದಕ್ಕಾಗಿಯೇ ಹಗಲು ರಾತ್ರಿ ಸಂಚರಿಸುತ್ತಿದ್ದೇವೆ" ಎಂದರು.

ಮೈಕ್ ಆದೇಶ; ಮಸೀದಿಗಳಲ್ಲಿ ಮೈಕ್ ಶಬ್ಧ ಕುರಿತ ಸರ್ಕಾರದ ಸುತ್ತೋಲೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ಸುಪ್ರೀಂಕೋರ್ಟ್ ಈಗ ಮಾಡಿರುವ ಕಾನೂನಿನಂತೆ ನಡೆದುಕೊಳ್ಳಲಿ. ಮೊನ್ನೆ ಯಾರೋ ತಲೆಕೆಟ್ಟವನು ಹಲಾಲ್ ಕಟ್ ಬೇಡ, ಪ್ರಾಣಿ ತಲೆಗೆ ಹೊಡೆದು, ಮೂರ್ಚೆಗೊಳಿಸಿ ವಧೆ ಮಾಡಬೇಕು ಎಂದ. ಪೊಲೀಸರು ಮಾಲಿನ್ಯ ನಿಯಂತ್ರಣ ಮಾಪನ ಮಾಡುವ ಯಾವ ಸಾಧನ ಇಟ್ಟುಕೊಂಡು ಪರಿಶೀಲನೆ ನಡೆಸುತ್ತಾರೆ?. ಅವೈಜ್ಞಾನಿಕ ಕಾನೂನುಗಳನ್ನೇ ಬಿಜೆಪಿ ಸರ್ಕಾರ ಮಾಡುತ್ತಿದೆ. ವಾಸ್ತವವಾಗಿ ಸಾಧ್ಯವಾಗುವ ಕಾನೂನು ಮಾಡುತ್ತಿಲ್ಲ" ಎಂದು ದೂರಿದರು.

ಡಿಜಿಟಲ್ ಸದಸ್ಯತ್ವ; ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನದ ಬಗ್ಗೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಇದುವರೆಗೂ ರಾಜ್ಯದಲ್ಲಿ 63 ಲಕ್ಷ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಪ್ರತಿ ಬೂತ್‌ನಲ್ಲಿ ನೋಂದಾಣಿದಾರರ ನೇಮಕ ಮಾಡಿ ಮತದಾರರ ಪಟ್ಟಿ ತೆಗೆದುಕೊಂಡು ಮನೆ ಮನೆಗೂ ಹೋಗಿ ನೋಂದಣಿ ಮಾಡಲಾಗುತ್ತಿದೆ. ಹಾಸನದಲ್ಲಿ 2,35,000 ಸದಸ್ಯತ್ವ ನೋಂದಣಿ ಆಗಿದೆ" ಎಂದು ಮಾಹಿತಿ ನೀಡಿದರು.

"ಇನ್ನು 9 ದಿನ ಕಾಲಾವಕಾಶ ಇದ್ದು, ಎಲ್ಲರೂ ಉತ್ಸಾಹದಿಂದ ಸದಸ್ಯತ್ವ ನೋಂದಣಿ ಮಾಡಿ, ಸುಮಾರು 70 ಲಕ್ಷ ಗಡಿ ಮುಟ್ಟುವ ವಿಶ್ವಾಸವಿದೆ. ಇಡೀ ರಾಜ್ಯದಲ್ಲಿ ಜನ ಬಿಜೆಪಿ ಹಾಗೂ ದಳದಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್ ಸದಸ್ಯರಾಗುತ್ತಿದ್ದು, ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ" ಎಂದರು.

"ಪಂಚರಾಜ್ಯ ಚುನಾವಣೆಯಲ್ಲಿ ನಾವು ಪಂಜಾಬ್ ರಾಜ್ಯವನ್ನು ನಮ್ಮ ತಪ್ಪಿನಿಂದ ಸೋತಿದ್ದೇವೆ. ಬಿಜೆಪಿಯವರು ಇಲ್ಲಿಯೂ ಗೆಲ್ಲುವುದಾಗಿ ಬೀಗುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಫಲಿತಾಂಶ ನಂತರವೂ 30 ಲಕ್ಷ ಸದಸ್ಯರು ನೋಂದಣಿ ಆಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಅವರೆಲ್ಲ ಸದಸ್ಯರಾಗುತ್ತಿರುವುದು ಸ್ಪಷ್ಟವಾಗಿದೆ" ಎಂದು ಹೇಳಿದರು.

"ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ರಾಗಿ, ಜೋಳ, ತೊಗರಿ ಸೇರಿದಂತೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಬದಲಿಗೆ ಸರ್ಕಾರ ಖರೀದಿಗೆ ಮಿತಿ ಏರಿದೆ. ನಮ್ಮ ರಾಜ್ಯದವರೇ ಕೃಷಿ ಸಚಿವರಾಗಿದ್ದರೂ, ಅನ್ಯಾಯ ಮುಂದುವರಿದಿದೆ. ರೈತರು ನೆಮ್ಮದಿಯಾಗಿಲ್ಲ, ಕೈಗಾರಿಕೆಗಳಿಗೆ ಬಂಡವಾಳ ಬರುತ್ತಿಲ್ಲ. ವ್ಯಾಪಾರಸ್ಥರಿಗೂ ತೊಂದರೆ ಆಗಿದೆ" ಎಂದರು.

"ಪ್ರತಿ ಜಿಲ್ಲೆಯಲ್ಲಿ ಕೋಮುವಾದ ಹರಡುತ್ತಿದ್ದಾರೆ. ಶಿವಮೊಗ್ಗಕ್ಕೆ ಹೋಗಿದ್ದೆ. ಯಡಿಯೂರಪ್ಪನವರು ವಿಮಾನ ನಿಲ್ದಾಣ ಮಾಡಿಸುತ್ತಿದ್ದು, ಈ ವಾತಾವರಣ ಇದ್ದರೆ ಯಾರು ಬಂಡವಾಳ ಹೂಡಲು ಬರುತ್ತಾರೆ?. ಎಲ್ಲ ಕಡೆ 144 ಸೆಕ್ಷನ್ ಹಾಕಿದರೆ ಯಾರು ವ್ಯಾಪಾರ ಮಾಡುತ್ತಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ನಮ್ಮ ಮಾನವ ಸಂಪನ್ಮೂಲ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದೆ" ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+