ಸಿಎಂ ಯಡಿಯೂರಪ್ಪ ಬದಲಾವಣೆ, ಕನಸಿನ ಮಾತು: ಶಾಸಕ ಪ್ರೀತಂಗೌಡ
ಹಾಸನ, ಮೇ 26: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿ.ಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಉತ್ತರ ಕರ್ನಾಟಕದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಮೇಲೆ ಕೋವಿಡ್ ನಿಯಂತ್ರಿಸಲು ವಿಫಲ, ವಿಕ್ಷಗಳಿಂದ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪ ಹಾಗೂ ವಯಸ್ಸಾದ ಕಾರಣಕ್ಕೆ ಸಿಎಂ ಬದಲಾವಣೆಯ ಚರ್ಚೆಗಳು ಪಕ್ಷದ ಮುಖಂಡರಲ್ಲೆ ಗುನುಗುತ್ತಿವೆ. ಸಿಎಂ ಯಡಿಯೂರಪ್ಪಗೆ ಕೋವಿಡ್ ನಿಯಂತ್ರಣದ ಜೊತೆಗೆ ಕುರ್ಚಿ ಉಳಿಸಕೊಳ್ಳಲು ಹರಸಾಹಸ ಪಡಬೇಕಿದೆ.
ಸಿಎಂ ಬದಲಾವಣೆ ವಿಚಾರದ ಕುರಿತು ಬುಧವಾರ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಮಾತನಾಡಿ, ""ಆಕಾಶದಲ್ಲಿ ಸೂರ್ಯ- ಚಂದ್ರರಿರುವಷ್ಟೇ ಸತ್ಯ ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಬೇಕಾದರೆ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಹಾಸನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರುವ ವಿಚಾರ ಮತ್ತು ಮುಖ್ಯಮಂತ್ರಿ ಬದಲಾಯಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂಗೌಡ, ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ. ನಾಯಕತ್ವ ಬದಲಾವಣೆ ಕಪೋಲಕಲ್ಪಿತವಾಗಿದೆ. ಕೊರೊನಾ ಕಾಲದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಜನ ಆಕ್ರೋಶಗೊಳ್ಳುತ್ತಾರೆ ಎಂದರು.
20 ಶಾಸಕರು ದೆಹಲಿಗೆ ಹೋಗಿರುವುದು ಸುಳ್ಳು, 20 ಜನ ಅಲ್ಲ 40 ಜನ ದೆಹಲಿಗೆ ಹೋದರೂ, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಆಗುವುದಿಲ್ಲ. ಮುಂಬರುವ ಚುನಾವಣೆ ಕೂಡ ಬಿಎಸ್ವೈ ನಾಯಕತ್ವದಲ್ಲೇ ನಡೆದು ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ನವರು ಬಿಜೆಪಿಯ ನಾಯಕತ್ವ ಬದಲಾವಣೆ ಬಗ್ಗೆ ಕನಸಲ್ಲೂ ಯೋಚನೆ ಮಾಡಬಾರದು. ಈ ಅವಧಿಯಲ್ಲಿ ಅಂತೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಾವೆಲ್ಲರೂ ಅವರ ಪರವಾಗಿ ಇರುತ್ತೇವೆ. ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಹಾಗಿದ್ದರೆ ಶಾಸಕರಾದ ನಮಗೆ ತಿಳಿಯುತ್ತಿತ್ತು ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ.












Click it and Unblock the Notifications