ಎಚ್ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ
ಬೆಂಗಳೂರು, ಫೆಬ್ರವರಿ 13: ನನ್ನ ಹಾಗೂ ನನ್ನ ಕುಟುಂಬದವರನ್ನು ಕೊಲೆ ಮಾಡಿ ಎಂದು ಕುಮಾರಸ್ವಾಮಿ ಮತ್ತು ರೇವಣ್ಣ ಅವರೇ ಬೆಂಬಲ ನೀಡಿ ಗೂಂಡಾ ಕಾರ್ಯಕರ್ತರನ್ನು ನಮ್ಮ ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಗೆ ನುಗ್ಗಿದ ಗೂಂಡಾ ಕಾರ್ಯಕರ್ತರಿಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಅವರೇ ನಿರ್ದೇಶಕ ಕೊಟ್ಟಿದ್ದರು, ಅವರನ್ನು ಕೊಲ್ಲಿ ಮುಂದಾಗುವುದು ನಾವು ನೋಡಿಕೊಳ್ಳುತ್ತೇವೆ ಎಂದು, ಇದನ್ನು ಅಲ್ಲಿಗೆ ಬಂದಿದ್ದ ಗೂಂಡಾ ಕಾರ್ಯಕರ್ತರು ಮಾತನಾಡಿಕೊಂಡಿದ್ದಾರೆ ಎಂದು ಅತ್ಯಂತ ಗಂಭೀರ ಆರೋಪವನ್ನು ಪ್ರೀತಂ ಗೌಡ ಮಾಡಿದ್ದಾರೆ.
ಗೂಂಡಾ ಕಾರ್ಯಕರ್ತರ ನಮ್ಮ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅವರಿಗೆ ಅಡ್ಡ ಬಂದ ನಮ್ಮ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ, ಆ ಗೂಂಡಾ ಕಾರ್ಯಕರ್ತರು ಯಾರು, ಅವರಿಗೆ ಕರೆ ಬಂದಿದ್ದು ಎಲ್ಲಿಂದ ಎಲ್ಲವೂ ತನಿಖೆ ಆಗಲೇ ಬೇಕು ಎಂದು ಅವರು ಒತ್ತಾಯ ಮಾಡಿದರು.
ಇಂತಹಾ ಎಷ್ಟೇ ದಾಳಿಗಳು ನನ್ನ ಮೇಲೆ ನಡೆದರೂ ಸಹ ಅದನ್ನು ಎದುರಿಸುವ ಧೈರ್ಯ ಆ ದೇವರು ಮತ್ತು ಬಿಜೆಪಿ ಪಕ್ಷ ನನಗೆ ಕೊಟ್ಟಿದೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ಬಿಜೆಪಿಯ ಇತರ ನಾಯಕರೂ ಸಹ ಈ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಯಡಿಯೂರಪ್ಪ ಮಾತನಾಡಿ, ಇದು ಗೂಂಡಾ ಸರ್ಕಾರ, ನಾನು ಹಾಸನಕ್ಕೆ ತೆರಳಿ ಈ ಘಟನೆ ವಿರುದ್ಧ ಪ್ರತಿಭಟನಾ ಸಭೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.
ಆರ್.ಅಶೋಕ್ ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ. ಶಾಸಕರ ಮನೆಯ ಮೇಲೆ ದಾಳಿ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಶ್ರೀರಾಮುಲು ಅವರು ಸಹ ಈ ಘಟನೆಯನ್ನು ಖಂಡಿಸಿದ್ದಾರೆ.












Click it and Unblock the Notifications