ಹಿಜಾಬ್ ವಿವಾದ: ಅಂತಿಮ ತೀರ್ಪು ಬರುವವರೆಗೂ ಕಾಯಬೇಕು; ಮಾಜಿ ಸಿಎಂ ಎಚ್ಡಿಕೆ
ಹಾಸನ, ಫೆಬ್ರವರಿ 11: ಹಿಜಾಬ್ ವಿವಾದದ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ಸಮಾಧಾನದಿಂದ ಇರಬೇಕು ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಾಗರಹಳ್ಳಿ ಗ್ರಾಮದ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾನಾಡಿದ ಅವರು, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯಕ್ಕೆ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂದರು. ಇನ್ನು ಇಂದು ಯಾವ ಟಿವಿ ಹಾಕಿದರೂ ಹಿಜಾಬ್- ಕೇಸರಿ ಶಾಲು ವಿವಾದ ಬರುತ್ತಿದೆ. ಈ ವಿವಾದ ಕೇವಲ ಸರ್ಕಾರಿ ಶಾಲೆಯಲ್ಲಿ ಮಾತ್ರ ನಡೆಯುತ್ತಿದೆ ಎಂದರು.
ಶಾಲು ಹಾಕಿಸಿದವರು ಯಾರು? ಈ ವಿವಾದ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ ಇಲ್ಲ. ಬರೀ ಸರ್ಕಾರಿ ಕಾಲೇಜುಗಳಲ್ಲಿ ನಡೆಯುತ್ತಿದೆ. ಖಾಸಗಿ ಕಾಲೇಜಿಗೆ ಹೋಗುವವರು ನಮ್ಮಂಥವರ, ಸಚಿವರು, ಶಾಸಕರು, ಶ್ರೀಮಂತರ ಮಕ್ಕಳು ಮಾತ್ರ ಹೋಗೋದು. ಸರ್ಕಾರಿ ಕಾಲೇಜುಗಳಿಗೆ ಹೋಗೋದು ಒಂದೊಂದು ರೂಪಾಯಿಗೂ ಕಷ್ಟ ಪಡುವ ಬಡವರ ಮಕ್ಕಳು ಎಂದು ಹೇಳಿದರು.

ಪ್ರಾಣ ಕಳೆದುಕೊಳ್ಳುವರು ಈ ಬಡವರ ಮಕ್ಕಳು
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಗಲಾಟೆಯಲ್ಲಿ ಯಾರಿಗಾದರೂ ಹೆಚ್ಚು-ಕಮ್ಮಿ ಆದರೆ ಪ್ರಾಣ ಕಳೆದುಕೊಳ್ಳುವರು ಈ ಬಡವರ ಮಕ್ಕಳು. ನಮ್ಮಂತಹ ನಾಯಕರು, ಮಂತ್ರಿಗಳು ಮಕ್ಕಳಿಗೆ ಹಿಜಬ್ ಕೇಸರಿ ಶಾಲು ಹಾಕಿ ಕಳಿಸುತ್ತಿದ್ದೇವೆ. ಸರ್ಕಾರಿ ಶಾಲೆ ಕಾಲೇಜಿಗೆ ಹೋಗುತ್ತಿರುವುದು ಬಡವರ ಮಕ್ಕಳು. ಗಲಾಟೆ, ಕಲ್ಲು ತೂರಾಟ ದೃಶ್ಯ ಪೊಲೀಸರು ವಿಡಿಯೋ ಮಾಡಿಸುತ್ತಾರೆ. ಟಿವಿಯಲ್ಲಿ ಅವರ ಮುಖಗಳನ್ನು ನೋಡಿ ವಿಡಿಯೋದಲ್ಲಿರುವ ಮಕ್ಕಳ ಮೇಲೆ ಕೇಸ್ ಹಾಕಿಸುತ್ತಾರೆ. ನಾಳೆ ಬಡವರ ಮಕ್ಕಳು ಹತ್ತಾರು ವರ್ಷ ಕೋರ್ಟ್ಗೆ ಅಲೆಯಬೇಕು ಎಂದು ಹಿಜಾಬ್- ಕೇಸರಿ ಶಾಲು ವಿವಾದದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು.

ಧರ್ಮದ ಹೆಸರಲ್ಲಿ ಹೊಡೆದಾಡಿಸಿ ಅಧಿಕಾರಿ ಹಿಡಿಯುವ ಕೆಲಸ
ಕುವೆಂಪು ಅವರು ಹೇಳಿರುವಂತೆ ಸರ್ವ ಜನಾಂಗದ ಶಾಂತಿಯ ತೋಟದ ರೀತಿಯಲ್ಲಿ ಬದುಕುಬೇಕಿದೆ. ನಾವೆಲ್ಲರೂ ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿರುವುದು. ದಿನ ಬೆಳಿಗ್ಗೆ ಎದ್ದರೆ ದೇವರಿಗೆ ಕೈಮುಗಿದು ನಮ್ಮ ಕೈಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡಿಸು ಅಂತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಆದರೆ ಈಗ ಧರ್ಮದ ಹೆಸರಲ್ಲಿ ಹೊಡೆದಾಡಿಸಿ ಅಧಿಕಾರಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಬೆಳಗಾದರೆ ಯುವಕರನ್ನು ಎತ್ತಿ ಕಟ್ಟಿ ಗಲಾಟೆ ಮಾಡಿಸುತ್ತಿದ್ದಾರೆ. ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗಳ ತಲೆಗೆ ಪೆಟ್ಟು ಬಿದ್ದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಬದುಕು ಮುಖ್ಯ. ಈ ವಿವಾದ ಬಗ್ಗೆ ಕಿವಿಗೊಡದೆ ವಿದ್ಯಾಭ್ಯಾಸದ ಕಡೆ ಗಮನಕೊಡಿ ಎಂದು ವಿದ್ಯಾರ್ಥಿಗಳಿಗೆ ಮನವಿ ಎಚ್ಡಿಕೆ ಮಾಡಿದರು.
ಕಾರ್ಯಕ್ರಮದ ಬಳಿಕ ಹಿಜಾಬ್- ಕೇಸರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿವಾದದ ಅಂತಿಮ ತೀರ್ಪು ಬರುವವರೆಗೆ ಸಮಾಧಾನ ಇರಬೇಕು, ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಸಮವಸ್ತ್ರ ಮಾತ್ರ ಧರಿಸಬೇಕು ಎಂದು ಹೇಳಿದೆ. ಧರ್ಮಗುರುಗಳು, ಸಂಘಟನೆಗಳು, ಪಕ್ಷಗಳು ಮಕ್ಕಳ ಮೇಲೆ ಯಾವುದೇ ಪ್ರಭಾವ ಬೀರದೆ ಶಾಲೆಗೆ ಕಳುಹಿಸಬೇಕು. ಕೋರ್ಟ್ನ ಅಂತಿಮ ತೀರ್ಪು ಬರುವವರೆಗೂ ಸಮಾಧಾನದಿಂದ ಇರಬೇಕು. ಇನ್ನು ಸರ್ಕಾರ ಏನು ಆದೇಶ ಮಾಡಿದೆಯೋ ಅದನ್ನು ಮಕ್ಕಳು ಪಾಲೀಸಬೇಕು, ಪೋಷಕರು ಮಕ್ಕಳಿಗೆ ಬುದ್ದಿ ಹೇಳಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪರಸ್ಪರ ಮಾತಾನಾಡದ ಮಾಜಿ ಸಿಎಂ, ಶಾಸಕರು
ಇನ್ನು ವೇದಿಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಿವಲಿಂಗೇಗೌಡ ವೇದಿಕೆ ಮೇಲೆ ಅಕ್ಕಪಕ್ಕ ಕುಳಿತಿದ್ದರೂ ಎಚ್.ಡಿ. ಕುಮಾರಸ್ವಾಮಿ ಶಾಸಕರತ್ತ ತಿರುಗಿ ನೋಡಲೇ ಇಲ್ಲ. ಕೆಲಕಾಲ ಬೇರೆಡೆ ನೋಡುತ್ತಾ ಕುಮಾರಸ್ವಾಮಿ ಕುಳಿತಿದ್ದರು. ಇದರಿಂದ ಇಬ್ಬರ ನಡುವೆ ಮುನಿಸು ಮುಂದುವರೆದ್ದೀಯಾ ಅನ್ನುವ ಅನುಮಾನ ಪಕ್ಷದ ಕಾರ್ಯಕರ್ತರಲ್ಲಿ ಕಾಡತೊಡಗಿತ್ತು.

ವೇದಿಕೆ ಮೇಲೆ ನಿಂಬೆಹಣ್ಣು ಉರುಳಿ ಬಿಟ್ಟ ರೇವಣ್ಣ!
ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ವೇದಿಕೆ ಮೇಲಿಂದ ಅಭಿಮಾನಿಗಳತ್ತ ನಿಂಬೆಹಣ್ಣು ಉರುಳಿಸಿದ್ದಾರೆ.
ಮೊದಲಿಗೆ ಅರಸೀಕೆರೆ ಶಾಸಕ ಕೆ. ಶಿವಲಿಂಗೇಗೌಡ ಅವರು ಎಚ್.ಡಿ. ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ತಮಾಷೆ ಮಾಡಿದರು. ಬಳಿಕ ಅಭಿಮಾನಿಗಳು ನಿಂಬೆಹಣ್ಣು ನೀಡುವಂತೆ ರೇವಣ್ಣ ಅವರಲ್ಲಿ ಮನವಿ ಮಾಡಿದ್ದಾರೆ. ರೇವಣ್ಣ ವೇದಿಕೆ ಮೇಲಿಂದ ಬೇಸಿನ್ನಲ್ಲಿದ್ದ ಎಲ್ಲಾ ನಿಂಬೆ ಹಣ್ಣುಗಳನ್ನು ಒಂದೊಂದಾಗಿ ಅಭಿಮಾನಿಗಳತ್ತ ಉರುಳಿಸಿದ್ದಾರೆ. ರೇವಣ್ಣ ಉರುಳಿಸಿದ ನಿಂಬೆ ಹಣ್ಣುಗಳನ್ನು ಅಭಿಮಾನಿಗಳು ಒಂದೊಂದಾಗಿಯೇ ಆಯ್ದುಕೊಂಡಿದ್ದಾರೆ. ಈ ತಮಾಷೆಯ ಗಳಿಗೆಯಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯೂ ಭಾಗಿಯಾಗಿದ್ದರು.












Click it and Unblock the Notifications