ಎಚ್.ಡಿ.ರೇವಣ್ಣ ಬಲ ಕುಗ್ಗಿಸಲು ಯಡಿಯೂರಪ್ಪ ಹೊಸ ಹೆಜ್ಜೆ!
Recommended Video
ಬೆಂಗಳೂರು, ಆಗಸ್ಟ್ 30 : ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಹಾಲು ಒಕ್ಕೂಟಗಳನ್ನು ಪ್ರತ್ಯೇಕಿಸಲು ಕರ್ನಾಟಕ ಸರಕಾರ ತೀರ್ಮಾನಿಸಿದೆ. ಇದರಿಂದಾಗಿ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣಗೆ ತೀವ್ರ ಹಿನ್ನಡೆ ಉಂಟಾಗಲಿದೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ ಕಟ್ಟಿಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ಹೆಜ್ಜೆ ಇಟ್ಟಿದ್ದಾರೆ.
ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ಪ್ರತ್ಯೇಕಿಸುವ ಕುರಿತು ಯಡಿಯೂರಪ್ಪ ಸಚಿವ ಸಿ. ಟಿ. ರವಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚನೆ ಮಾಡಲಾಗುತ್ತದೆ.
ಶನಿವಾರ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಸರ್ಕಾರ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. ಇದು ಎರಡು ಪಕ್ಷಗಳ ನಡುವಿನ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುವ ಸಾಧ್ಯತೆ ಇದೆ.

ಎಚ್. ಡಿ. ರೇವಣ್ಣ ಪ್ರಭಾವ
ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ 15 ವರ್ಷಗಳ ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದರು. ಹಾಸನ ಹಾಲು ಒಕ್ಕೂಟದ ಮೇಲೆ ಅವರು ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಈಗ ಚಿಕ್ಕಮಗಳೂರನ್ನು ಹಾಸನ ಒಕ್ಕೂಟದಿಂದ ಪ್ರತ್ಯೇಕಿಸಲು ಸರ್ಕಾರ ಮುಂದಾಗಿದೆ.

ಕೆಎಂಎಫ್ಗೆ ಹೆಚ್ಚಿನ ಆದಾಯ
ಕೆಎಂಎಫ್ಗೆ ಹಾಸನ ಹಾಲು ಒಕ್ಕೂಟದಿಂದ ಹೆಚ್ಚಿನ ಲಾಭ ಬರುತ್ತಿದೆ. ಇದರಿಂದಾಗಿ ಹಾಸನದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲು ಮೈತ್ರಿ ಸರ್ಕಾರ ಮುಂದಾಗಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ 500 ಕೋಟಿ ರೂ. ಅನುದಾನವನ್ನು ಡೈರಿ ನಿರ್ಮಾಣಕ್ಕೆ ಮಂಜೂರು ಮಾಡಲು ಒಪ್ಪಿಗೆ ಕೊಟ್ಟಿತ್ತು.

ಬಿಜೆಪಿ ನಾಯಕರಿಗೆ ಮಣೆ
ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ಪ್ರತ್ಯೇಕಿಸಿದರೆ ಚಿಕ್ಕಮಗಳೂರು ಪ್ರತ್ಯೇಕ ವಿಭಾಗವಾಗಲಿದೆ. ಆಗ ಸಿ. ಟಿ. ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಪ್ರಭಾವ ಹಾಲು ಒಕ್ಕೂಟದಲ್ಲಿ ಹೆಚ್ಚಲಿದೆ.

ಎಚ್. ಡಿ. ರೇವಣ್ಣ ಅಧ್ಯಕ್ಷ ಆಕಾಂಕ್ಷಿ
ಮಾಜಿ ಸಚಿವ ಎಚ್. ಡಿ. ರೇವಣ್ಣ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಮತ್ತೊಂದು ಕಡೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಯಡಿಯೂರಪ್ಪ ಬಯಸಿದ್ದಾರೆ. ಇದರ ಭಾಗವಾಗಿಯೇ ಒಕ್ಕೂಟ ಪ್ರತ್ಯೇಕಿಸುವ ಹೆಜ್ಜೆ ಇಡಲಾಗಿದೆ.












Click it and Unblock the Notifications