ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಭಿನ್ನ ಕಾರಣ ಬಿಚ್ಚಿಟ್ಟ ರೇವಣ್ಣ
ಹಾಸನ, ಡಿಸೆಂಬರ್ 11: ಉಪಚುನಾವಣೆಯಲ್ಲಿ ಜೆಡಿಎಸ್ ಮುಗ್ಗರಿಸಿದೆ. ಹದಿನೈದು ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರವನ್ನು ಜೆಡಿಎಸ್ ಗೆದ್ದಿಲ್ಲ. ಪಕ್ಷವು ಆತ್ಮವಿಮರ್ಶೆಯಲ್ಲಿ ತೊಡಗಿದೆ. ಇತ್ತ ಪಕ್ಷದ ಮುಖಂಡ ಎಚ್.ಡಿ.ರೇವಣ್ಣ ಅವರು ಜೆಡಿಎಸ್ ಸೋಲಿಗೆ ಭಿನ್ನ ಕಾರಣವೊಂದನ್ನು ಪತ್ತೆ ಹಚ್ಚಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೋಲಾಗಲು ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಕಾರಣವಂತೆ. ಹೀಗೆಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ.
'ಕಾಂಗ್ರೆಸ್-ಬಿಜೆಪಿ ಪಕ್ಷಗಳು ಉಪಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಹಣದ ಹೊಳೆ ಹರಿಸಿದ ಕಾರಣ ಜೆಡಿಎಸ್ ಪಕ್ಷಕ್ಕೆ ಸೋಲಾಗಿದೆ' ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಪ್ರತಿ ಕ್ಷೇತ್ರಕ್ಕೆ 60ಕೋಟಿ ಹಣ ಮತದಾರರಿಗೆ ಹಂಚಿದ್ದಾರೆ, 15 ಕ್ಷೇತ್ರಕ್ಕೆ ಸರಿ ಸುಮಾರು 750 ಕೋಟಿ ಹಣವನ್ನು ಬಿಜೆಪಿ ಹಂಚಿಕೆ. ಬಿಜೆಪಿಯ ಮಂತ್ರಿಗಳೇ 15 ಕ್ಷೇತ್ರಗಳಲ್ಲಿ ಹಣ ಹಂಚಿದ್ದಾರೆ ಎಂದು ರೇವಣ್ಣ ಆರೋಪ ಮಾಡಿದ್ದಾರೆ.
ಉಪಚುನಾವಣೆ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ತಿರುವಿಗೆ ಕಾರಣವಾಗಲಿದೆ ಎಂದು ಭವಿಷ್ಯ ಹೇಳಿದ ರೇವಣ್ಣ, ಜೆಡಿಎಸ್ ಪಕ್ಷವು ಸೋಲಿನ ಧೂಳಿನಿಂದ ಎದ್ದು ಬಂದು 2023 ರಲ್ಲಿ ಅಧಿಕಾರ ಹಿಡಿಯಲಿದೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸಹ ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದ್ದ ಪರಿಣಾಮ ಜೆಡಿಎಸ್ ಗೆ ಸೋಲಾಯಿತು. ಈ ಉಪಚುನಾವಣೆಯಲ್ಲಿ ಸಹ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ನಮಗೆ ಸೋಲಾಗಿದೆ ಎಂದು ರೇವಣ್ಣ ಹೇಳಿದರು.
20-20 ಸರ್ಕಾರ ರಚನೆ ಮಾಡಿ ಬಿಜೆಪಿ ಗೆ ಅವಕಾಶ ಕೊಡದೇ ಹೋಗಿದ್ದಿದ್ದರೆ ರಾಜ್ಯದಲ್ಲಿ ಬಿಜೆಪಿ ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಆಗ ನಡೆದ ಆರು ಉಪಚುನಾವಣೆಗಳಲ್ಲಿ ನಾವೇ ಗೆದ್ದಿದ್ದೆವು, ನಲವತ್ತು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ಒಡ್ಡಿದ್ದೆವು ಎಂದು ರೇವಣ್ಣ ನೆನಪಿಸಿಕೊಂಡರು.
ಯಡಿಯೂರಪ್ಪ ಸುವರ್ಣ ಕರ್ನಾಟಕ ಅಭಿವೃದ್ಧಿಗೆ ಬೆಂಬಲ ಕೇಳಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಬೆಂಬಲ ಇದ್ದೇ ಇದೆ ಎಂದು ರೇವಣ್ಣ ಹೇಳಿದ್ದಾರೆ.
ಅಂದು ಹಾಸನ, ಮಂಡ್ಯಕ್ಕೆ ನಾವು ಅನುದಾನ ನೀಡಿದಾಗ, ಮಂಡ್ಯ-ಹಾಸನ ಬಜೆಟ್ ಎಂದು ಗೇಲಿ ಮಾಡಿದ್ದರು. ಆದರೆ ಈಗ ಈ ಜಿಲ್ಲೆಗಳಿಗೆ ನಾವೇ ಅನುದಾನ ತಂದೆವು ಎಂದು ಬೀಗುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications