ಚನ್ನರಾಯಪಟ್ಟಣದಲ್ಲಿ ರುಂಡ ಕಡಿದು ಜೆಡಿಎಸ್ ಕಾರ್ಯಕರ್ತನ ಕೊಲೆ
ಹಾಸನ, ಆಗಸ್ಟ್ 29: ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಜೆಡಿಎಸ್ ಕಾರ್ಯಕರ್ತ ನವೀನ್ (27) ಎಂಬವರ ರುಂಡವನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಕೊಲೆಗಡುಕರು ರುಂಡವನ್ನು ಕೊಂಡೊಯ್ದಿದ್ದು, ರುಂಡ ಸಿಗದೆ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದು ಕೂತಿದ್ದಾರೆ.
ದಂಡಿಗನಹಳ್ಳಿಯ ಎ.ಕಾಳೇನಹಳ್ಳಿ ಬಳಿಯ ಕಬ್ಬಿನ ಗದ್ದೆಯಲ್ಲಿ ಸೋಮವಾರ ಹಾಡಹಗಲೇ ನವೀನ್ ರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಗದ್ದೆ ಶ್ರೀನಾಥ್ ಎಂಬವರಿಗೆ ಸೇರಿದ್ದು ಕಬ್ಬಿನ ಗದ್ದೆಯಲ್ಲಿ ರುಂಡವಿಲ್ಲದ ಶವ ಪತ್ತೆಯಾಗಿದೆ.

ಸೋಮವಾರ ಮುಂಜಾನೆ ನವೀನ್ ಬೈಕಿನಲ್ಲಿ ಗದ್ದೆಗೆ ತೆರಳಿದ್ದರು. ಆದರೆ ಯಾವತ್ತೂ ಗದ್ದೆಗೆ ತೆರಳುವ ನವೀನ್ ಬೆಳಿಗ್ಗೆ ತಿಂಡಿಗೆ ಮನಗೆ ವಾಪಸಾಗುತ್ತಿದ್ದರು. ಆದರೆ ನಿನ್ನೆ ಮಾತ್ರ ಗಂಟೆ 11 ಕಳೆದರೂ ತಿಂಡಿ ತಿನ್ನಲು ಮನೆಗೆ ಬಂದಿರಲಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಕೊನೆಗೆ ತಾಯಿ ಮತ್ತು ಸ್ನೇಹಿತರು ಹುಡುಕಿಕೊಂಡು ಗದ್ದೆಗೆ ಬಂದಾಗ, ಗದ್ದೆಯಲ್ಲಿ ರುಂಡವಿಲ್ಲದ ಶವ ಪತ್ತೆಯಾಗಿದೆ. ಕೊನೆಗೆ ಸ್ನೇಹಿತರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಕುಡುಗೋಲು, ಒಂದು ಜತೆ ಚಪ್ಪಲಿ, ನವೀನ್ಗೆ ಸೇರಿದ ಬೈಕ್, ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಪೊಲೀಸರು ನಿನ್ನೆಯಿಂದಲೂ ರುಂಡಕ್ಕಾಗಿ ಹುಡುಕಾಡುತ್ತಿದ್ದು ರುಂಡ ಇನ್ನೂ ಸಿಕ್ಕಿಲ್ಲ.
ಇನ್ನು ಸಾವಿಗೀಡಾದ ಯುವಕ ಜೆಡಿಎಸ್ ಕಾರ್ಯಕರ್ತನಾಗಿರುವ ಹಿನ್ನಲೆಯಲ್ಲಿ ಅವರ ಮನೆಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.












Click it and Unblock the Notifications