ಪ್ರೀತಂಗೌಡ ಪಂಥಾಹ್ವಾನವೇ ದಾಳ: ಹಾಸನದಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪರ್ಧೆ?
ಹಾಸನದ ಟಿಕೆಟ್ ಯಾರಿಗೆ ಎಂದು ಅಂತಿಮವಾಗದೇ ಇದ್ದರೂ, ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಗುರುವಾರದಿಂದ ಅಧಿಕೃತವಾಗಿ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ.
ಹಾಸನ, ಫೆಬ್ರವರಿ 24: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹಾಸನದ ಟಿಕೆಟ್ ಯಾರಿಗೆ ಎಂದು ಅಂತಿಮವಾಗದೇ ಇದ್ದರೂ, ಭವಾನಿ ರೇವಣ್ಣ ಗುರುವಾರದಿಂದ ಅಧಿಕೃತವಾಗಿ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಜೆಡಿಎಸ್ ಟಿಕೆಟ್ ಯಾರಿಗೆ ಎನ್ನುವ ಗೊಂದಲದ ಮಧ್ಯೆ ಪಕ್ಷದಿಂದ ಭರ್ಜರಿ ಪ್ರಚಾರ ಆರಂಭವಾಗಿದೆ.
ಗುರುವಾರ ಬೆಳ್ಳಗ್ಗೆಯಿಂದಲೇ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ರೇವಣ್ಣ ದಂಪತಿ, ಮಧ್ಯಾಹ್ನ ದೊಡ್ಡಪುರದಲ್ಲಿ ಪೂಜೆ ನೆರವೇರಿಸಿ ಹಾಸನದ ಗ್ರಾಮೀಣ ಭಾಗದಲ್ಲಿ ಪ್ರಚಾರ ಆರಂಭಿಸಿದ್ದರು. ಪಕ್ಷ ಸಂಘಟನೆಯ ದೃಷ್ಟಿಯಿಂದ ಪ್ರವಾಸ ಆರಂಭಿಸಿದ್ದೇವೆ, ಟಿಕೆಟ್ ಇನ್ನೂ ಯಾರಿಗೆಂದು ಅಂತಿಮವಾಗಿಲ್ಲ ಎಂದು ಪಕ್ಷದ ಮುಖಂಡರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ರೇವಣ್ಣ ಕುಟುಂಬ ಕ್ಷೇತ್ರದಲ್ಲಿ ಇಂದಿನಿಂದ ಅಧಿಕೃತ ಪ್ರಚಾರ ಆರಂಭಿಸಿದ್ದು, ಹರದನಹಳ್ಳಿಯ ದೇವೇಶ್ವರ, ಮಾವಿನಕೆರೆಯ ರಂಗನಾಥಸ್ವಾಮಿ ಹಾಗೂ ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಮಧ್ಯಾಹ್ನದ ಬಳಿಕ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಪುರ ಗ್ರಾಮದಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.
ಗುರುವಾರದಿಂದ ಮೂರು ದಿನಗಳ ಕಾಲ ಕ್ಷೇತ್ರದ ಗ್ರಾಮೀಣ ಭಾಗದ ಗ್ರಾಮಗಳಿಗೆ ಭೇಟಿ ನೀಡಿ, ನಮ್ಮ ಅಭಿವೃದ್ದಿ ಕಾರ್ಯ ಹಾಗೂ ಅಭ್ಯರ್ಥಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಎಚ್.ಡಿ ರೇವಣ್ಣ ತಿಳಿಸಿದ್ದಾರೆ.
ಭವಾನಿ ರೇವಣ್ಣ ಅವರ ಅವಶ್ಯಕತೆ ಹಾಸನ ಕ್ಷೇತ್ರಕ್ಕಿಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯ ನಂತರವೂ ಭವಾನಿ ರೇವಣ್ಣ ಅವರ ಕ್ಷೇತ್ರ ಪ್ರವಾಸ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ಕೊಡಿ ಎಂದು ರೇವಣ್ಣ ಕುಟುಂಬ ಕುಮಾರಸ್ವಾಮಿಯವರ ಬೆನ್ನು ಬಿದ್ದಿದೆ. ಅಂತಿಮವಾಗಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗದೇ ಇದ್ದಲ್ಲಿ ರೇವಣ್ಣನೇ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಇಂದಿನಿಂದ ಹಾಸನದಲ್ಲಿ ಪ್ರಚಾರ ಕೈಗೊಂಡಿರುವ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪಕ್ಷ ಸಂಘಟನೆ ದೃಷ್ಟಿಯಿಂದ ರೇವಣ್ಣ, ಲೋಕಸಭಾ ಸದಸ್ಯರು ಹಾಗೂ ಭವಾನಿ ಪ್ರಚಾರ ಆರಂಭಿಸಿದ್ದಾರೆ. ಅಂತಿಮವಾಗಿ ಟಿಕೆಟ್ ಯಾರಿಗೆ ಅಂತಾ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಹಾಸನದ ಶಾಸಕ ಪ್ರೀತಂಗೌಡ ಅವರ ಪಂಥಾಹ್ವಾನವನ್ನೇ ದಾಳವಾಗಿ ಬಳಸಿಕೊಂಡಿರುವ ರೇವಣ್ಣ, ನಮ್ಮ ಕುಟುಂಬದ ವಿರುದ್ಧವಾಗಿ ವೈಯಕ್ತಿಕವಾಗಿ ಟೀಕೆ ಮಾಡಿದ್ದಲ್ಲದೇ, ಪಂಥಾಹ್ವಾನ ನೀಡಿದ್ದಾರೆ. ಒಂದು ವೇಳೆ ನಮಗೆ ಟಿಕೆಟ್ ಸಿಗದೇ ಇದ್ದಲ್ಲಿ, ನಾವೇ ಆತನಿಗೆ ಹೆದರಿದಂತಾಗುತ್ತದೆ. ಹಾಗಾಗಿಯೇ ಶತಾಯಗತಾಯ ನಮ್ಮ ಕುಟುಂಬಕ್ಕೆ ಟಿಕೆಟ್ ಬೇಕೇ ಬೇಕು ಎಂದು ರೇವಣ್ಣ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಹಾಸನ ಟಿಕೆಟ್ ಗೊಂದಲ ಮುಂದುರೆದಿದ್ದು, ಮಾರ್ಚ್ ಮೊದಲ ವಾರದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ, ಆ ವೇಳೆಗೆ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.












Click it and Unblock the Notifications