ಜಪ್ತಿಯಾದ ಹಣದ ರಹಸ್ಯ ಯಡಿಯೂರಪ್ಪಗೆ ಗೊತ್ತು: ಎಚ್ಡಿಕೆ
ಹಾಸನ, ಅಕ್ಟೋಬರ್ 24: ವಿಧಾನಸೌಧದ ಬಳಿ ಇತ್ತೀಚೆಗೆ ಜಪ್ತಿಯಾದ ಸುಮಾರು 1.97 ಕೋಟಿ ರೂಪಾಯಿ ಯಾರಿಗೆ ಸೇರಿದೆ ಎಂಬ ರಹಸ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ಹೊಸ ಆರೋಪ ಮಾಡಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ಮಾತನಾಡಿದ ಅವರು, ಜಪ್ತಿಯಾದ 1.97 ಕೋಟಿ ಹಣದ ಮೂಲವೇನು? ಎಲ್ಲಿಂದ ಬಂತು? ಎಲ್ಲಿಗೆ ತಲುಪಬೇಕಾಗಿತ್ತು ಎಂಬುದರ ಬಗ್ಗೆ ಯಡಿಯೂರಪ್ಪನವರಿಗೆ ಸ್ಪಷ್ಟವಾದ ಮಾಹಿತಿ ಇದೆ.[ವಿಧಾನಸೌಧದಲ್ಲೇ ಕೋಟಿ ಕೋಟಿ ಹಣದ ಕರ್ಮಕಾಂಡ!]
ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರೆ ಹಣ ಯಾರದ್ದು ಎನ್ನುವುದು ತಿಳಿಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಈ ರೀತಿ ಅವ್ಯವಹಾರ ಪ್ರಕರಣಗಳ ಮಾಹಿತಿ ಬಹಿರಂಗ ಮಾಡುವುದರಿಂದ ನಾನೇನು ಸಾಧಿಸಬೇಕಿಲ್ಲ. ಬದಲಿಗೆ ನನಗೆ ನಷ್ಟ ಆಗುತ್ತಿದೆ. ನನ್ನ ಮೇಲೆ ಕೇಸ್ ಹಾಕಲಾಗಿದೆ ಎಂದರು.
ಮೂಲಗಳ ಪ್ರಕಾರ ಶೇಷಾದ್ರಿಪುರಂನಲ್ಲಿರುವ ಅಪಾರ್ಟ್ಮೆಂಟ್ ನಿಂದ ಹಣ ತರಲಾಗುತಿತ್ತು. ಆ ಅಪಾರ್ಟ್ಮೆಂಟಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಮಗನಿದ್ದಾನೆ ಎಂದು ವಕೀಲ ಸಿದ್ಧಾರ್ಥ್ ವಿಚಾರಣೆ ವೇಳೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನೆಯಲ್ಲಿ ಪೊಲೀಸರು ಜಪ್ತಿಯಾದ ಹಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗ ರಾಜಕಾರಣಿಯ ಪುತ್ರನ ವಿಚಾರಣೆ ನಡೆಸುವ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ತನಿಖಾಧಿಕಾರಿಗಳು ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.