ಕಾಂಗ್ರೆಸ್ ಸೇರಿದ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್!
ಹಾಸನ, ಮಾರ್ಚ್ 28 : ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಸೇರಿದರು. ಹಾಸನದ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಏಪ್ರಿಲ್ 18ರಂದು ಮತದಾನ ನಡೆಯಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಯೋಗಾ ರಮೇಶ್ ಅವರು ಕಾಂಗ್ರೆಸ್ ಸೇರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮಾರ್ಚ್ 19ರಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಯೋಗಾ ರಮೇಶ್ ಅವರು ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಸಿದ್ದರು. ಮಾಜಿ ಸಚಿವ ಎ.ಮಂಜು ಅವರು ಬಿಜೆಪಿ ಸೇರಿದ ಬಳಿಕ ಯೋಗಾ ರಮೇಶ್ ಅವರು ಅಸಮಾಧಾನಗೊಂಡಿದ್ದರು.
ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಎ.ಮಂಜು ಅವರು ಬಿಜೆಪಿ ಸೇರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗ ಎ.ಮಂಜು, ಯೋಗಾ ರಮೇಶ್ ಅವರು ಪಕ್ಷ ಬದಲಾಯಿಸಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ
ಮಾಜಿ ಸಚಿವ ಎ.ಮಂಜು ಅವರು ಬಿಜೆಪಿ ಸೇರಿದ ಬಳಿಕ ಯೋಗಾ ರಮೇಶ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು. ಆದ್ದರಿಂದ, ಅವರು ಬಿಜೆಪಿ ತೊರೆದು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಪಕ್ಷ ಸಂಘಟನೆ ಮಾಡಿದ್ದೇನೆ
'ಜಿಲ್ಲೆಯಲ್ಲಿ ಬಿಜೆಪಿ ಏನೇನೂ ಇಲ್ಲದೇ ಇದ್ದಾಗ ಪಕ್ಷ ಸಂಘಟನೆ ಮಾಡಿದ್ದೇನೆ. ಬೇರೆ ಪಕ್ಷದಿಂದ ಯಾರೂ ಬರಬಾರದು ಎಂದು ಹೇಳಲಾರೆ. ಜಿಲ್ಲಾ ಘಟಕದ ಅಭಿಪ್ರಾಯವನ್ನು ಕೇಳದೆ ಎ.ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ತುಂಬಾ ನೋವಾಗಿದೆ' ಎಂದು ಯೋಗಾ ರಮೇಶ್ ಹೇಳಿದ್ದರು.

ಚುನಾವಣೆಯಲ್ಲಿ ಸೋತಿದ್ದರು
ಯೋಗಾ ರಮೇಶ್ ಅವರು ಅರಕಲಗೂಡು ತಾಲೂಕಿನ ಹೊನ್ನವಳ್ಳಿಯವರು. 2013ರ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.

ಎ.ಮಂಜು ನಂಬುವುದು ಹೇಗೆ?
'ಎಚ್.ಡಿ.ದೇವೇಗೌಡರು ಹಾಸನದ ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸುತ್ತೇನೆ ಎಂದು ಎ.ಮಂಜು ಹೇಳಿದ್ದಾರೆ ಅವರನ್ನು ನಂಬುವುದು ಹೇಗೆ?. ಎ.ಮಂಜು ಪಕ್ಷ ಸೇರ್ಪಡೆ ಬಗ್ಗೆ ಜಿಲ್ಲೆಯ ನಾಯಕರು ಕಾರ್ಯಕರ್ತರ ಜೊತೆ ಚರ್ಚಿಸಿಲ್ಲ' ಎಂದು ಯೋಗಾ ರಮೇಶ್ ಆರೋಪಿಸಿದ್ದರು.












Click it and Unblock the Notifications