Hasanamba darshan: ಮೊದಲ ದಿನವೇ ಹಾಸನಾಂಬ ದರ್ಶನಕ್ಕೆ ಮುಂದಾದ ನೂರಾರು ಕೈ ಕಾರ್ಯಕರ್ತರು, ಮುಂದಾಗಿದ್ದೇನು?
ಹಾಸನ, ನವೆಂಬರ್, 02:ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬ ದೇಗುಲದ ಬಾಗಿಲು ಇಂದು ಓಪನ್ ಆಗಿದೆ. ಹಾಸನಾಂಬ ಜಾತ್ರೆ ನವೆಂಬರ್ 15ರವರೆಗೂ ನಡೆಯಲಿದ್ದು, ಇಂದು ಮೊದಲನೇ ದಿನ ಆದ್ದರಿಂದ ಸಾರ್ವಜನರಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೂ ಕಾಂಗ್ರೆಸ್ ಮುಖಂಡರು ನಮಗೆ ಇವತ್ತೇ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಇಂದೇ ಹಾಸನಾಂಬ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನೇ ತಳ್ಳಿ ಒಳ ನುಗ್ಗಿ ದರ್ಶನಕ್ಕೆ ಹೋಗಿದ್ದಾರೆ. ಇನ್ನು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲಾಗದೆ ಸುಮ್ಮನೆ ಹಿಂದೆ ಸರಿದ ಘಟನೆ ಜರುಗಿದೆ.

ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಿತು. ಗರ್ಭಗುಡಿಯ ಬಾಗಿಲು ತೆರೆದ ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಹದಿಮೂರು ದಿನಗಳು ಮಾತ್ರ 24*7 ಭಕ್ತರಿಗೆ ತಾಯಿ ಹಾಸನಾಂಬೆ ದರ್ಶನ ಕರುಣಿಸಲಿದ್ದಾಳೆ. ಈ ಬಾರಿ ಜಾತ್ರಾ ಮಹೋತ್ಸವ ವಿಶೇಷತೆಯಿಂದ ಕೂಡಿದ್ದು, ಹೆಲಿಟೂರಿಸಂ, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ಚಾಪರ್ ನಲ್ಲಿ ಹಾರಾಟ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಪ್ರತಿವರ್ಷ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜೊತೆಗೆ ಅಧಿದೇವತೆ ಬೇಡಿಕೊಂಡು ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸದಿಂದ ಜಿಲ್ಲೆ, ರಾಜ್ಯ ಅಲ್ಲದೆ, ಅನೇಕ ಕಡೆಗಳಿಂದ ಲಕ್ಷಾಂತರ ಭಕ್ತರಿದ್ದಾರೆ.
ಆಶ್ವೀಜ ಮಾಸದ ಮೊದಲ ಗುರುವಾರ, ದೇವಾಲಯದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆದಿದೆ. ಮೈಸೂರು ಅರಸು ವಂಶಸ್ಥರು ಗೊನೆ ಇರುವ ಬಾಳೆಕಂಬ ಕಡಿದ ಬಳಿಕ ಕಳೆದ ಒಂದು ವರ್ಷದಿಂದ ಮುಚ್ಚಿದ್ದ ದೇವಿಯ ಗರ್ಭಗುಡಿಯ ಬಾಗಿಲು ಶಾಸ್ತ್ರೋಕ್ತವಾಗಿ ತೆರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಥಳೀಯ ಶಾಸಕ ಎಚ್.ಪಿ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಗಣ್ಯರು ಗರ್ಭಗುಡಿ ಬಾಗಿಲು ತೆರೆಯುವ ವೇಳೆ ಹಾಜರಿದ್ದರು. ಇನ್ನು ಜಾತ್ರಾ ಮಹೋತ್ಸವಕ್ಕೆ ಬಲಿಪಾಡ್ಯಮಿ ಮಾರನೇ ದಿನ ಶಾಸ್ತ್ರೋಕ್ತವಾಗಿ ತೆರೆ ಬೀಳಲಿದೆ.












Click it and Unblock the Notifications