ಮೊದಲ ಬಾರಿಗೆ ಬೇಲೂರು ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ರದ್ದು
ಬೇಲೂರು,
ಮಾರ್ಚ್ 18: ಇದು ಹಬ್ಬ, ಜಾತ್ರೆ, ರಥೋತ್ಸವಗಳ ಕಾಲವಾಗಿರುವುದರಿಂದ ಜನ ಒಂದೆಡೆ ಸೇರುವುದು ಕೂಡ ಹೆಚ್ಚಾಗಿರುತ್ತದೆ. ಇದೀಗ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆ, ರಥೋತ್ಸವಗಳನ್ನೆಲ್ಲ ರದ್ದು ಮಾಡಲು ಸರ್ಕಾರ ಆದೇಶಿಸಿದೆ. ಹೀಗಾಗಿ 900 ವರ್ಷಗಳಿಂದ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವಕ್ಕೆ ವಿಘ್ನವುಂಟಾಗಿದೆ. id="toptextpromo"> id='are-slot-1' class='oiad oi-axt oiadv'>ಈ
ಬಾರಿ ಶ್ರೀ ಚನ್ನಕೇಶವ ಸ್ವಾಮಿಯ ಜಾತ್ರೆ ಮಾ.28ರಿಂದ ಆರಂಭವಾಗಿ ಏ.10ರವರೆಗೆ ನಡೆಯಬೇಕಾಗಿತ್ತು. ಈ ಜಾತ್ರೆಗೆ ಪ್ರತಿ ವರ್ಷವೂ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಾರೆ. ಆದರೆ ಜಾತ್ರೆಯನ್ನು ಈ ಬಾರಿ ಕೊರೊನಾ ನಿಯಂತ್ರಿಸುವ ಸಲುವಾಗಿ ರದ್ದುಗೊಳಿಸಲಾಗಿದೆ. ಅಲ್ಲದೆ ಕೆಲವೊಂದು ವಿಧಿ ವಿಧಾನಗಳನ್ನಷ್ಟೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. id='are-slot-2' class='oiad oi-axt oiadv'>
ಸಾರ್ವಜನಿಕರ ನಿರ್ಬಂಧದೊಂದಿಗೆ ಪೂಜಾ ಕೈಂಕರ್ಯ
ಜಾತ್ರೆ ರದ್ದುಗೊಳಿಸಿರುವ ಸಂಬಂಧ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಕಾರ್ಯನಿರ್ವಹಣಾ ಅಧಿಕಾರಿ ವಿದ್ಯುಲತಾ ಮಾತನಾಡಿ, ದೇಶವ್ಯಾಪ್ತಿ ಕೊರಾನಾ ವೈರಸ್ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದಿವ್ಯರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದ್ದು, ರಥೋತ್ಸವದ ಸಂಬಂಧ ಕೆಲವೊಂದು ಧಾರ್ಮಿಕ ಉತ್ಸವಗಳನ್ನು ಯಾವುದೇ ಅಡಚಣೆ ಇಲ್ಲದೆ, ಸಾರ್ವಜನಿಕರಿಗೆ ನಿಷೇಧ ಹೇರಿ ದೇವಾಲಯದ ಪ್ರಾಂಗಣದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆಸುವಂತೆ ಆದೇಶಿಸಲಾಗಿದೆ. ದಾಸೋಹದ ವ್ಯವಸ್ಥೆಯನ್ನೂ ಸಂಪೂರ್ಣ ನಿಷೇಧಿಸಲಾಗಿದ್ದು, ಜಾತ್ರೋತ್ಸವದಂದು ನೀಡಲಾಗುತ್ತಿದ್ದ ಪ್ರಸಾದವನ್ನು ಕೂಡ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

900 ವರ್ಷಗಳಲ್ಲಿ ಮೊದಲ ಬಾರಿಗೆ ರಥೋತ್ಸವ ರದ್ದು
ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ ಹಾಗೂ ಶ್ರೀನಿವಾಸ ಭಟ್ ಅವರು ಹೇಳುವಂತೆ ಇದುವರೆಗೆ ರಥೋತ್ಸವವು ರದ್ದುಗೊಂಡ ಇತಿಹಾಸವೇ ಇಲ್ಲವಂತೆ. ಇದೇ ಮೊದಲ ಬಾರಿಗೆ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ದೇವಾಲಯದಲ್ಲಿ ಉತ್ಸವದ ಅಂಗವಾಗಿ ಪೂಜಾ ಕೈಂಕರ್ಯಗಳಿಗೆ ಯಾವುದೇ ನಿರ್ಬಂಧವಿಲ್ಲ. ಯುಗಾದಿ ಹಬ್ಬದ ದಿನದಂದು ಶ್ರೀ ಚನ್ನಕೇಶವನ ಚಿನ್ನಾಭರಣ, ನವರತ್ನಗಳಿಂದ ಅಲಂಕರಿಸಿ ಪೂಜಿಸಲಾಗುವುದು. ಯಾಗಶಾಲೆ, ಬಲಿಪ್ರಧಾನ, ಸ್ವಾಮಿಯ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಗುವುದು. ಆದರೆ ಸಾರ್ವಜನಿಕರಿಗೆ ಈ ವೇಳೆ ಅವಕಾಶವಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವ ಚನ್ನಕೇಶವ ಸ್ವಾಮಿ ದೇಗುಲ
ಕೊರೊನಾ ವೈರಸ್ ಹರಡುವಿಕೆ ತಡೆಯುವ ಸಲುವಾಗಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರವಾಸಿ ತಾಣಗಳು, ದೇಗುಲಗಳಿಗೆ ತೆರಳದಂತೆ ಸೂಚಿಸುತ್ತಿದ್ದರೂ ಕೆಲವು ಪ್ರವಾಸಿಗರು ತೆರಳುತ್ತಿರುವುದು ಕಂಡು ಬರುತ್ತಿದೆ. ಪ್ರತಿನಿತ್ಯ ಚೆನ್ನಕೇಶವಸ್ವಾಮಿ ದೇವಾಲಯವನ್ನು ನೋಡಲು ಸಾವಿರಾರು ಮಂದಿ ಬರುತ್ತಿದ್ದರು. ಆದರೆ ಇದೀಗ ಭಕ್ತರು ಸೇರಿದಂತೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಕೆಲವರು ದೇಗುಲಕ್ಕೆ ಬಂದು ಒಳ ಬಿಡುವಂತೆ ಗೋಗರೆಯುವುದು ಕಂಡು ಬರುತ್ತಿದೆ.

ವಾಪಸ್ ಕಳುಹಿಸುವುದೇ ದೊಡ್ಡ ಸಮಸ್ಯೆ
ಹೀಗೆ ಒಳಬಿಡಲು ಕೇಳಿಕೊಂಡವರಿಗೆ ಪ್ರತಿಯೊಬ್ಬರಿಗೂ ಕಾರಣಗಳನ್ನು ಹೇಳಿ ವಾಪಸ್ ಕಳುಹಿಸುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ಸದ್ಯ ದೇವಾಲಯದ ರಾಜಗೋಪುರ ಬಾಗಿಲು ಅರ್ಧ ಮುಚ್ಚಿದ್ದು ಯಾರನ್ನೂ ಒಳಬಿಡುತ್ತಿಲ್ಲ. ಆ ಮೂಲಕ ಕೊರೊನಾದ ಬಗ್ಗೆ ಮುಂಜಾಗ್ರತೆ ವಹಿಸಲಾಗಿದೆ. ಈಗಾಗಲೇ ವಿಷಯ ತಿಳಿದ ಬಹಳಷ್ಟು ಮಂದಿ ಇತ್ತ ಬರುತ್ತಿಲ್ಲವಾದ್ದರಿಂದ ದೇಗುಲದ ಸುತ್ತಮುತ್ತ ಜನರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡುಬರುತ್ತಿದೆ. ದೇವರಿಗೆ ಎಲ್ಲ ರೀತಿಯ ಪೂಜಾ ಕೈಂಕರ್ಯ ನಡೆಯುತ್ತಿದ್ದು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.












Click it and Unblock the Notifications