ಹಾಸನ: ಒಂದೇ ದಿನ 15 ಮಂದಿಗೆ ಕಚ್ಚಿದ ನಾಯಿ, ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಹಾಸನ, ಅಕ್ಟೋಬರ್ 24: ತಮ್ಮ ಕೆಲಸಗಳಿಗೆ ಹೊರಟಿದ್ದ ಸುಮಾರು ಹದಿನೈದು ಜನರ ಮೇಲೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿ 15 ಜನರಿಗೆ ಗಾಯವಾಗಿರುವ ಘಟನೆ ಹಾಸನ ನಗರದ ಕುವೆಂಪು ನಗರದಲ್ಲಿ ನಡೆದಿದೆ.
ತಮ್ಮ ಪಾಡಿಗೆ ತಮ್ಮ ಕೆಲಸಗಳಿಗೆ ಹೋಗುತ್ತಿದ್ದವರ ಮೇಲೆ ಮುಖಾ ಮೂತಿ ನೋಡದೆ ಎರಗಿರುವ ಹುಚ್ಚುನಾಯಿ ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿದೆ. ನಾಯಿಯಿಂದ ಕಚ್ಚಿಸಿಕೊಂಡ ನತದೃಷ್ಟರು ಚಿಕಿತ್ಸೆಗಾಗಿ ಒಬ್ಬೊಬ್ಬರಂತೆ ಆಸ್ಪತ್ರೆ ಕಡೆ ಮುಖ ಮಾಡಿದ್ದು ನಾಯಿ ಹಾವಳಿ ತಪ್ಪಿಸದ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅನಾಥ ಮಹಿಳೆಗೆ ಬೆಂಗಳೂರಿನಲ್ಲಿ ಕೊರೊನಾ ಗಿಂತಲೂ ಘೋರ ಸಾವು
ಹಾಸನದ 5ನೇ ವಾರ್ಡಿನ ಕುವೆಂಪು ನಗರದಲ್ಲಿ ಬೆಳಿಗ್ಗೆ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಬೀದಿ ನಾಯಿಯೊಂದು ಏಕಾಏಕಿ ಎರಗಿ ಎಲ್ಲಿಬೇಕೆಂದರಲ್ಲಿ ಕಚ್ಚಿ ಸುಮಾರು 15 ಜನರನ್ನ ಗಾಯಗೊಳಿಸಿದ್ದು ಎಲ್ಲರೂ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಟೆಲ್, ಆಸ್ಪತ್ರೆ, ಪಾರ್ಕ್, ರಸ್ತೆ ಬದಿ ಈ ರೀತಿ ಅನೇಕ ಕಡೆ ದಾಳಿ ನಡೆಸಿದೆ. ಇಷ್ಟೊಂದು ಜನರಿಗೆ ಗಾಯ ಮಾಡಿದ ನಂತರ ಆ ನಾಯಿಗೆ ಹುಚ್ಚು ಹಿಡಿದಿದೆ ಎಂಬುದು ತಿಳಿದು ಬಂದಿದೆ. ಈ ಹುಚ್ಚು ನಾಯಿಯನ್ನು ಸುಮ್ಮನೆ ಬಿಟ್ಟರೆ ಇನ್ನೂ ಹೆಚ್ಚು ಜನರಿಗೆ ಕಚ್ಚಬಹುದೆಂಬ ಉದ್ದೇಶದಿಂದ ಸಾರ್ವಜನಿಕರೇ ನಾಯಿಯನ್ನು ಕೊಂದು ಹಾಕಿದ್ದಾರೆ.
''ಇನ್ನು ಹಾಸನದಲ್ಲಿ ಬೀದಿ ನಾಯಿ ಹಾವಳಿ ಇಂದು ನೆನ್ನೆಯದಲ್ಲ ಕಳೆದ ತಿಂಗಳಷ್ಟೇ ಶಾಲಾ ಶಿಕ್ಷಕಿ ಮೇಲೆ ಕೂಡ ಬೀದಿ ನಾಯಿಯೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಸಂಬಂಧ ಅನೇಕ ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ರೂ ಏನೂ ಪ್ರಯೋಜನವಾಗಿಲ್ಲ. ಹಾಸನ ನಗರದಲ್ಲೇ ಸಾವಿರಾರು ನಾಯಿಗಳಿದ್ದು ಒಬ್ಬೊಂಟಿಯಾಗಿ ನಡೆದಾಡೋಕೆ ಜನರು ಭಯ ಪಡುತ್ತಿದ್ದಾರೆ. ಮಕ್ಕಳು ರಸ್ತೆಯಲ್ಲಿ ಆಟ ವಾಡಲು ಬಿಡಲು ಪೋಷಕರಲ್ಲೂ ಕೂಡ ಆತಂಕ ವ್ಯಕ್ತವಾಗಿದೆ. ದೊಡ್ಡ ಅಪಾಯಗಳು ನಡೆಯೋದ್ರ ಒಳಗಾಗಿ ಕೂಡಲೆ ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕು,'' ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ನಾಯಿಗಳ ಸಂತಾಣಹರಣಕ್ಕೆ ಮೀಸಲಿಟ್ಟ ಹಣ ಎಲ್ಲಿ ಹೋಗಿದೆ?
ಈ ಬಗ್ಗೆ ಸ್ಥಳೀಯರಾದ ಪ್ರಸನ್ನ ಮಾತಾನಾಡಿ, ''ನಗರಸಭೆಯಲ್ಲಿ ನಾಯಿಗಳ ಸಂತಾಣಹರಣ ಮಾಡೋಕೆ ಬಜೆಟ್ ಮೀಸಲಿಟ್ಟಿರುತ್ತಾರೆ, ಆ ಹಣ ಎಲ್ಲೋತ್ತು ಗೊತ್ತಿಲ್ಲ, ಕಳೆದ ಎರಡು ದಿನ ನಿರಂತರವಾಗಿ ಬೀದಿ ನಾಯಿ ಹಲ್ಲೆ ಮಾಡಿದೆ, ಜನರ ಮೇಲೆ ಏಕಾಎಕಿ ಹಲ್ಲೆ ಮುಂದುವರೆದಿದೆ, ನಗರಸಭೆ ಯವರು ಕೂಡಲೇ ಕ್ರಮ ಕೈಗೊಳ್ಳಬೇಕು,'' ಎಂದು ಆಗ್ರಹ ಮಾಡಿದ್ದಾರೆ.
ವಿಡಿಯೋ; ಚಿತ್ರದುರ್ಗ ಜಿಲ್ಲಾಸ್ಪತ್ರೆ ವಾರ್ಡ್ನಲ್ಲಿ ನಾಯಿ ಸಂಚಾರ
ಇನ್ನು ಗಾಯಗೊಂಡ ದತ್ತಾತ್ರೇಯ ಮಾತಾನಾಡಿ, ''ನಾನು ಕೆಲಸಕ್ಕೆ ಹೋಗ್ತಿದೆ ಹಿಂದೆಯಿಂದ ಬಂದು ನಾಯಿ ಹಲ್ಲೆ ಮಾಡಿತ್ತು, ನನ್ನ ಎದುರಿಗೆ ಬಂದು ಬೇರೆಯವರಿಗೂ ಹಲ್ಲೆ ಮಾಡಿತ್ತು, ಓಡಿಸಿದ್ರು ಬಿಡಲಿಲ್ಲ ಕಚ್ಚಿತ್ತು, ನಗರಸಭೆ ಎಚ್ಚೆತ್ತು ಕೊಳ್ಳಬೇಕು ಇಲ್ಲದಿದ್ದರೆ ಕಷ್ಟವಾಗುತ್ತದೆ, ನಾವು ಆ ನಾಯಿಯನ್ನು ಕೊಂದು ಹಾಕಿದ್ದೇವೆ. ಇದೊಂದು ನಾಯಿಯ ಕಾಟ ಅಲ್ಲ, ಸಿಕ್ಕಾಪಟ್ಟೆ ನಾಯಿ ಕಾಟ ಹೆಚ್ಚಾಗಿದೆ. ಹಾಗಾಗಿ ಕೂಡಲೆ ನಾಯಿಗಳ ಕಾಟಕ್ಕ ಕಡಿವಾಣ ಹಾಕಬೇಕು,'' ಎಂದರು.
ಇನ್ನು ಬೀದಿನಾಯಿಗಳ ಕಾಟಕ್ಕೆ ಹಾಸನ ನಗರದ ಹೊಯ್ಸಳ ಬಡಾವಣೆಯಲ್ಲಿ ನಾಯಿವೊಂದು ಬೈಕ್ಗೆ ಅಡ್ಡ ಬಂದು ಬೈಕಿನಿಂದ ದಂಪತಿಗಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟನಲ್ಲಿ ನಗರ ಪ್ರದೇಶಗಳಲ್ಲಿ ದಿನೇ ದಿನೇ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಮಸ್ಯೆ ನಿಯಂತ್ರಿಸಲು ಸರ್ಕಾರದಿಂದ ಅನುದಾನ ಕೂಡ ಬರುತ್ತಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಾಳನ್ನ ಕೇಳಿದ್ರೆ ನಮಗೂ ಅನೇಕ ಕಾನೂನು ತೊಡಕುಗಳಿವೆ ಎಂದು ಹೇಳುತ್ತಿದ್ದು ಸಮಸ್ಯೆ ಮತ್ತಷ್ಟು ಬಿಗಡಾಯಿಸೋದ್ರಲ್ಲಿ ಅನುಮಾನವೇ ಇಲ್ಲ..
(ಒನ್ಇಂಡಿಯಾ ಸುದ್ದಿ)