ಶ್ರವಣಬೆಳಗೊಳ : ಬ್ಯಾಟರಿ ಚಾಲಿತ ವಾಹನ ಸೇವೆ ಆರಂಭ
ಹಾಸನ, ಜನವರಿ 17 : ಮಹಾಮಸ್ತಕಾಭಿಷೇಕಕ್ಕೆ ಶ್ರವಣಬೆಳಗೊಳದಲ್ಲಿ ಸಿದ್ಧತೆಗಳು ಚುರುಕುಗೊಂಡಿವೆ. ಪ್ರವಾಸಿಗರಿಗೆ ಅನುಕೂಲವಾಗಲು ವಿವಿಧ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬ್ಯಾಟರಿ ಚಾಲಿತ ವಾಹನಗಳ ಸೇವೆ ಚಾಲನೆ ನೀಡಲಾಗಿದೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಬ್ಯಾಟರಿ ಚಾಲಿತ ವಾಹನಗಳ ಸೇವೆಗೆ ಮಂಗಳವಾರ ಚಾಲನೆ ನೀಡಿದ್ದಾರೆ. 10ಬ್ಯಾಟರಿ ಚಾಲಿತ ವಾಹನಗಳು ಶ್ರವಣಬೆಳಗೊಳಕ್ಕೆ ಆಗಮಿಸಿವೆ. ಇನ್ನೂ 20 ವಾಹನಗಳು ಶೀಘ್ರದಲ್ಲಿಯೇ ಬರಲಿವೆ.
ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಪ್ರವಾಸಿಗರು ವಾಸ್ತವ್ಯ ಹೂಡಲು ಉಪ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಉಪ ನಗರಗಳ ಭೇಟಿಗೆ ಅನುಕೂಲವಾಗಲು ಈ ವಾಹನಗಳನ್ನು ಬಳಕೆ ಮಾಡಲಾಗುತ್ತದೆ.

ವೃದ್ಧರು, ಅಂಗವಿಕಲರು ಉಪ ನಗರಗಳಿಂದ ಹತ್ತಿರವಿರುವ ಬಸ್ ನಿಲ್ದಾಣ, ಬಸದಿಗಳಿಗೆ ಭೇಟಿ ನೀಡಲು ಈ ವಾಹನಗಳನ್ನು ಬಳಸಬಹುದಾಗಿದೆ. ಈ ವಾಹನಗಳನ್ನು 6 ಗಂಟೆ ಚಾರ್ಜ್ ಮಾಡಿದರೆ 70 ಕಿ.ಮೀ. ಸಂಚಾರ ನಡೆಸಲಿವೆ. 8 ಮಂದಿ ಇದರಲ್ಲಿ ಪ್ರಯಾಣಿಸಬಹುದಾಗಿದೆ.
ಮಹಾಮಸ್ತಕಾಭಿಷೇಕಕ್ಕೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ರೈಲು ಮತ್ತು ಬಸ್ಸಿನಲ್ಲಿ ಆಗಮಿಸುವ ಜನರಿಗೆ ಮೂರು ಕಿ.ಮೀ.ದೂರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಂದ ಶ್ರವಣಬೆಳಗೊಳಕ್ಕೆ ಆಗಮಿಸಲು ಸಾರಿಗೆ ಇಲಾಖೆಯಿಂದ 170 ಕೆಎಸ್ಆರ್ಟಿಸಿ ಹಾಗೂ 60 ಮಿನಿ ಬಸ್ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಫೆಬ್ರವರಿ 7 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಫೆ.26ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು 40 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications