ವಿಮಾನ ನಿಲ್ದಾಣ; ಹಾಸನ ಜಿಲ್ಲೆಯ ಜನರಿಗೆ ಸಿಹಿಸುದ್ದಿ
ಹಾಸನ, ಡಿಸೆಂಬರ್ 09 : ಹಾಸನ ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಹಲವಾರು ಅಡೆತಡೆಗಳು ಎದುರಾಗಿವೆ. ಈಗ ಕಾಮಗಾರಿಗೆ ಚಾಲನೆ ಸಿಗಲಿದ್ದು, ಕಾಮಗಾರಿಗೆ ಇರುವ ತೊಡಕುಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾನ ಕುರಿತಂತೆ ಕೆಎಸ್ಐಐಡಿಸಿ ಪ್ರತಿನಿಧಿ ಕ್ಯಾಪ್ಟನ್ ಶಮಂತ್ ಎನ್. ಮಾಹಿತಿ ನೀಡಿದರು. ವಿಮಾನ ಹಾರಾಟಕ್ಕೆ ಹಾಗೂ ಇಳಿಸಲು ಯಾವುದೇ ತೊಂದರೆ ಆಗದಂತೆ ಉದ್ದೇಶಿತ ನಿಲ್ದಾಣದ 3 ಕಿ.ಮೀ. ದೂರದಲ್ಲಿರುವ ವಿದ್ಯುತ್ ಲೈನ್ಗಳನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ವಿವರಿಸಿದರು.
2033ರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈಗಲೇ ವಿಮಾನ ನಿಲ್ದಾಣದ ಯೋಜನೆ ರೂಪಿಸಲಾಗಿದೆ. ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ವಿಮಾನ ಹಾರಾಟಕ್ಕೆ ಬೇಕಿರುವ ರನ್ವೇ ನಿರ್ಮಾಣ ಹಾಗೂ ಲೈನ್ ಕ್ಲಿಯರಿಂಗ್ ಚಟುವಟಿಕೆಗಳನ್ನು ಪೂರ್ಣಗೊಳಿಸಲಾಗುತ್ತದೆ.

ವಿದ್ಯುತ್ ನಿಗಮದ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ, "ಈಗಾಗಲೇ ಸಂಸ್ಥೆ ವತಿಯಿಂದ ಕಾರ್ಯಗಳನ್ನು ಆರಂಭಿಸಲಾಗಿದೆ. ವಿಮಾನ ನಿಲ್ದಾಣದ ಸಮೀಪ ಇದ್ದ 9 ಕಿಲೋಮೀಟರ್ ಉದ್ದದ ಹೈಟೆಕ್ಷನ್ ಲೈನ್ಗಳನ್ನು ಮಾರ್ಗವನ್ನು ಇದರಿಂದ 17 ಕಿ.ಮೀ. ಉದ್ದದ ಬದಲಿ ಮಾರ್ಗಕ್ಕೆ ಪರಿವರ್ತಿಸಲಾಗಿದೆ. 68 ಟವರ್ಗಳ ಪೈಕಿ 66ನ್ನು ನಿರ್ವಹಿಸಲಾಗಿದೆ. ರೈತರಿಗೆ ಬೆಳೆ ಪರಿಹಾರದ ವಿತರಣೆಗೆ 7.5 ಕೋಟಿ ರೂಪಾಯಿ ಅಗತ್ಯವಿದೆ. ಅದನ್ನು ಒದಗಿಸಬೇಕು" ಎಂದು ಮನವಿ ಮಾಡಿದರು.
ಹಾಸನ ನಗರದ ಹೊರವಲಯದ ಬೂವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. 2007ರಲ್ಲಿ 1,200 ಕೋಟಿ ರೂ.ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಲಾಯಿತು. ಆದರೆ, ಬಳಿಕ ಯಾವುದೇ ಕಾಮಗಾರಿಗಳು ನಡೆಯಲಿಲ್ಲ.
ವಿಮಾನ ನಿಲ್ದಾಣ, ವಿಮಾನ ದುರಸ್ತಿ ಹಾಗೂ ತರಬೇತಿ ಕೇಂದ್ರ, ಗಾಲ್ಫ್ ಆಟದ ಮೈದಾನ ಆರಂಭಿಸುವುದು ಯೋಜನೆಯಾಗಿತ್ತು. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಭರವಸೆ ಹಾಗೆಯೇ ಉಳಿಯಿತು.
ವಿಮಾನ ನಿಲ್ದಾಣದ ಕಾಮಗಾರಿಗೂ ಮೊದಲು ವಿದ್ಯುತ್ ಕಂಬ ಸ್ಥಳಾಂತರಿಸುವ ಗುತ್ತಿಗೆ ಪಡೆದಿದ್ದ ಟ್ರಾನ್ಸ್ಗ್ಲೋಬಲ್ ಫೆರೆಕ್ಸ್ ಇಂಡಿಯಾ ಲಿ. 2008ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಅದು ಪೂರ್ಣಗೊಳ್ಳದ ಕಾರಣ ಕಾಮಗಾರಿ ಆರಂಭವಾಗಲೇ ಇಲ್ಲ.












Click it and Unblock the Notifications