ಹಾಸನ:ನಿಧಿ ಆಸೆ ತೋರಿಸಿ 5 ಲಕ್ಷ ಹಣ ಪಂಗನಾಮ ಹಾಕಿದ ಕಳ್ಳ ಸ್ಚಾಮೀಜಿ
ಹಾಸನ, ಆಗಸ್ಟ್ 18 : ಕಳ್ಳ ಸ್ವಾಮೀಜಿಯೊಬ್ಬ ನಿಮ್ಮ ಜಮೀನಿನಲ್ಲಿರೋ ನಿಧಿ ತೆಗೆಯುತ್ತೇನೆಂದು ದಂಪತಿಗೆ ನಂಬಿಸಿ, ಐದು ಲಕ್ಷ ಹಣ ಪೀಕಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದೊಡ್ಡಮಗ್ಗೆ ಗ್ರಾಮದ ಮಂಜೇಗೌಡ ಹಾಗೂ ಲೀಲಾವತಿ ಎಂಬ ದಂಪತಿಗಳೇ ಮೋಸ ಹೋದವರು. ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ ಎಂಬಾತ ಮೊದಲು ನನಗೆ ದೇವರು ಬರುತ್ತದೆ, ನನಗೆ ದೈವ ಶಕ್ತಿ ಇದೆ ಎಂದು ನಂಬಿಸಿದ್ದಾನೆ, ನಂತರ ನಿಮ್ಮ ಜಮೀನಿನಲ್ಲಿ ನಿಧಿ ಇದೆ, ಚಿನ್ನದ ದೇವರ ವಿಗ್ರಹ ಇದೆ ಎಂದು ಹೇಳಿ ಪುಸಲಾಯಿಸಿದ್ದಾನೆ. ಕಳ್ಳ ಸ್ವಾಮಿ ಮಾತಿಗೆ ಮರುಳಾದ ಚಿನ್ನದ ಆಸೆಯಿಂದ ದಂಪತಿ ನಿಧಿಯನ್ನು ತೆಗೆಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ 1,294 ಕೋಟಿ ವಂಚನೆ: ಸಚಿವ ಸೋಮಶೇಖರ್
ಆದರೆ ನಿಧಿ ತೆಗೆಯಬೇಕಾದರೆ ಸಾಕಷ್ಟು ಪೂಜೆ ಹಾಗೂ ಮನೆಯ ಹೆಂಗಸಿನ ರಕ್ತದ ಅಭಿಷೇಕ ಮಾಡಬೇಕಾಗುತ್ತದೆ, ಅದಕ್ಕೆ ಐದು ಲಕ್ಷ ಹಣ ಖರ್ಚಾಗುತ್ತದೆ ಎಂದು ಕಳ್ಳಸ್ವಾಮಿ ಹೇಳಿ ನಂಬಿಸಿದ್ದಾನೆ. ಅದಕ್ಕೆ ಮಂಜೇಗೌಡ ಹಾಗೂ ಲೀಲಾವತಿ ಒಪ್ಪಿಕೊಂಡು ಪೂಜೆ ಮಾಡಿಸಿದ್ದಾರೆ.
ಕಳ್ಳಸ್ವಾಮಿ ಮಂಜೇಗೌಡ ಜಮೀನಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಮೊದಲೇ ಹೋಗಿ ಮೂರು ಕೆಜಿ ತೂಕದ ಚಿನ್ನ ಲೇಪಿತ ಬೆಳ್ಳಿಯ ವಿಗ್ರಹವನ್ನ ಹೂತಿಟ್ಟು ಬಂದಿರುತ್ತಾನೆ. ನಂತರ ದಂಪತಿಯನ್ನು ಆ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸಾಕಷ್ಟು ಪೂಜೆಮಾಡಿದ ನಂತರ ಚಿನ್ನಲೇಪಿತ ಬೆಳ್ಳಿ ವಿಗ್ರಹವನ್ನ ಹೊರಗೆ ತೆಗೆದಿದ್ದಾನೆ. ಹೊರಗೆ ತೆಗೆಯುತ್ತಿದ್ದಂತೆ ಮಂಜೇಗೌಡ ಪತ್ನಿ ಲೀಲಾವತಿ ಅವರ ಕೈ ಕೊಯ್ದು ರಕ್ತದ ಅಭಿಷೇಕ ಮಾಡುತ್ತಾನೆ ವಿಗ್ರಹವನ್ನು ಕೊಟ್ಟು ದುಡ್ಡು ಪಡೆದು ಪರಾರಿಯಾಗಿದ್ದಾನೆ.
ಕೈ ಕೊಯ್ಯುವ ವೇಳೆ ಕೈ ನರವನ್ನ ಕಟ್ ಆಗಿದ್ದರೂ ಏನೋ ಮಿಸ್ಸಾಗಿ ಆಗಿರಬಹುದೆಂದು ದಂಪತಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. ಘಟನೆ ನಡೆದು ಒಂದು ವಾರದ ಬಳಿಕ ಜುಯೆಲರಿ ಅಂಗಡಿಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಆ ವಿಗ್ರಹ ಚಿನ್ನದ್ದಲ್ಲ ಬೆಳ್ಳಿಯದ್ದು, ನಾವು ಮೋಸ ಹೋಗಿದ್ದೇವೆ ಎಂದು ಮನೆಯವರಿಗೆ ಗೊತ್ತಾಗಿದೆ.
ಕಳ್ಳ ಸ್ವಾಮೀಜಿ ದಂಪತಿಗೆ ಮೋಸ ಮಾಡಿ, ಐದು ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಮೋಸದ ಬಗ್ಗೆ ಜನರಿಗೆ ತಿಳಿದು ನಮ್ಮ ಬಗ್ಗೆ ನಗುತ್ತಾರೆ ಎಂಬ ಕಾರಣಕ್ಕೆ ಮಂಜೇಗೌಡ ದಂಪತಿ ಪೊಲೀಸ್ ಠಾಣೆಗೆ ಯಾವುದೇ ನೀಡಿರಲಿಲ್ಲ. ಆದರೆ ಈ ವಿಗ್ರಹ ತೆಗೆಯುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು ಮೋಸ ಮಾಡಿದ ಕಳ್ಳ ಸ್ವಾಮೀಜಿ ಮಂಜುನಾಥ್ ದೊಡ್ಡ ಹಳ್ಳಿ ಗ್ರಾಮದವನಾಗಿದ್ದು ವಿಡಿಯೋ ವೈರಲ್ ಆದ ಕೂಡಲೇ ತಲೆ ಮರೆಸಿಕೊಂಡಿದ್ದಾನೆ. ಈ ಕುರಿತು ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
Recommended Video