ವೈಶಾಲಿಯಲ್ಲಿ 2ನೇ ಪ್ರಾಕೃತ ವಿವಿ ಸ್ಥಾಪನೆಗೆ ಪ್ರಯತ್ನ : ಅನಂತ್ ಕುಮಾರ್
ಹಾಸನ, ನವೆಂಬರ್ 03 : 'ಎರಡನೇ ಪ್ರಾಕೃತ ವಿಶ್ವವಿದ್ಯಾಲಯವನ್ನು ಬಿಹಾರದ ವೈಶಾಲಿಯಲ್ಲಿ ಸ್ಥಾಪನೆ ಮಾಡುವಂತೆ ಬಿಹಾರ ಸರ್ಕಾರ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗಳಿಗೆ ಮನವಿ ಮಾಡಲಾಗುತ್ತದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಭರವಸೆ ನೀಡಿದರು.
ಶುಕ್ರವಾರ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಅವರು ಶ್ರವಣಬೆಳಗೊಳದಲ್ಲಿ ನಾಲ್ಕು ದಿನಗಳ 'ಅಂತರರಾಷ್ಟ್ರೀಯ ಪ್ರಾಕೃತ ಸಮ್ಮೇಳನ'ವನ್ನು ಉದ್ಘಾಟಿಸಿದರು. ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರ ಮಟ್ಟದ ದಿಗಂಬರ ಜೈನ ವ್ಯವಸ್ಥಾಪಕ ಸಮಿತಿ ಸಮ್ಮೇಳನವನ್ನು ಆಯೋಜಿಸಿದೆ.
ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?
ನಂತರ ಮಾತನಾಡಿದ ಸಚಿವರು, 'ಪ್ರಾಕೃತ ಭಾಷೆ ಮತ್ತು ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ತಳಹದಿ ಇದ್ದಂತೆ. ದೇಶದ ಪ್ರಥಮ ಪ್ರಾಕೃತ ವಿಶ್ವವಿದ್ಯಾಲಯ ಶ್ರವಣಬೆಳಗೊಳದಲ್ಲಿ ಸ್ಥಾಪನೆಯಾಗಿರುವುದು ಸಂತೋಷದ ವಿಷಯ. ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಕ್ಕೆ ಅಗತ್ಯ ಹಣಕಾಸಿನ ನೆರವು ನೀಡಲಿದೆ' ಎಂದರು.
ಶ್ರವಣಬೆಳಗೊಳ : ಮಸ್ತಕಾಭಿಷೇಕ ಪ್ರಚಾರಕ್ಕೆ ತಂತ್ರಜ್ಞಾನಗಳ ಬಳಕೆ
'ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರ ಜೊತೆ ಮಾತನಾಡುತ್ತೇನೆ. 2 ವಿಶ್ವವಿದ್ಯಾಲಯ ವೈಶಾಲಿಯಲ್ಲಿ ಸ್ಥಾಪನೆಯಾವುದು ಮುಖ್ಯ. ಆ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಜೊತೆ ಮಾತನಾಡುತ್ತೇನೆ' ಎಂದು ಅನಂತ್ ಕುಮಾರ್ ಭರವಸೆ ನೀಡಿದರು.
ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುವೆ : 'ಮಹಾ ಮಸ್ತಕಾಭಿಷೇಕದ ಕೆಲಸ ಕಾರ್ಯಗಳಿಗೆ ತಾವು ಮಠದ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಮಹಾ ಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಬೇಕಾದ ವ್ಯವಸ್ಥೆ ಒದಗಿಸಲು ಮಠದ ಪರವಾಗಿ ಕೇಂದ್ರ ಸರ್ಕಾರದ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತೇನೆ' ಎಂದು ಅನಂತ್ ಕುಮಾರ್ ಹೇಳಿದರು.
ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಕೀರ್ತಿಸ್ತಂಭ ಸ್ಥಾಪನೆ
'ಮಹಾ ಮಸ್ತಕಾಭಿಷೇಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಮಠದ ಪರವಾಗಿ ಆಹ್ವಾನ ಪತ್ರಿಕೆಯನ್ನು ಪ್ರಧಾನಿಯವರಿಗೆ ತಲುಪಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ' ಎಂದರು.
ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಫ್ರಾನ್ಸ್ ದೇಶದ ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರೊ. ನಳಿನಿ ಬಲ್ಬೀರ್ ಪ್ರಮುಖ ಭಾಷಣ ಮಾಡಿದರು. ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಅಧ್ಯಕ್ಷೆ ಸರಿತ ಎಂ.ಕೆ.ಜೈನ್, ಸೇರಿದಂತೆ ಹಲವು ಉಪಸ್ಥಿತರಿದ್ದರು.