Karnataka Elections: ಗದಗದ ಪ್ರಭಾವಿ ಕಾಂಗ್ರೆಸ್ ನಾಯಕ ಎಚ್ಕೆ ಪಾಟೀಲ್ ಕುರಿತು ತಿಳಿಯಿರಿ
ಗದಗ, ಮಾರ್ಚ್ 29: ಕರ್ನಾಟಕ ವಿಧಾನಸಭೆ ಚುನಾವಣೆಯ ( Karnataka Elections 2023 ) ದಿನಾಂಕಗಳು ಹೊರಬಿದ್ದಿವೆ. 2023ರ ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ( Elections Commission of India ) ಬುಧವಾರ ಮಾಹಿತಿ ನೀಡಿದೆ. ಚುನಾವಣಾ ಅಖಾಡದಲ್ಲಿ ರಾಜ್ಯದ ಮೂರು ಪ್ರಭಾವಿ ಪಕ್ಷಗಳಾದ ಬಿಜೆಪಿ ( BJP ), ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ಪೈಪೋಟಿ ನಡೆಸಿವೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ದಿನಾಂಕಗಳು ಪ್ರಕಟಗೊಂಡ ನಂತರ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಕಾಂಗ್ರೆಸ್ ಬಿಡುಗಡೆ ಗೊಳಿಸಿರುವ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳನ್ನು ಹೆಸರಿಸಿದೆ. ಅದರಲ್ಲಿ ಪ್ರಭಾವಿ ರಾಜಕಾರಣಗಳು ಹಲವರಿದ್ದಾರೆ. ಗದಗದ ಎಚ್ ಕೆ ಪಾಟೀಲ್ ಅವರು ಕಾಂಗ್ರೆಸ್ನ ಪ್ರಭಾವಿ ನಾಯಕರಲ್ಲಿ ಒಬ್ಬರು. ಅವರ ಹೆಸರು ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಎಚ್ ಕೆ ಪಾಟೀಲ್ ಅವರು ಮಾಜಿ ಸಹಕಾರಿ ಸಚಿವರಾಗಿದ್ದ ಕೆ ಎಚ್ ಪಾಟೀಲ್ ಅವರ ಪುತ್ರ ಹಾಗೂ ಗದಗದ ಮಾಜಿ ಶಾಸಕ ಡಿ ಆರ್ ಪಾಟೀಲ್ ಅವರ ಸಹೋದರ. ನಾಲ್ಕು ಬಾರಿ ಕಾಂಗ್ರೆಸ್ನಿಂದ ಎಂಎಲ್ಸಿ ಆಗಿ ಸೇವೆ ಸಲ್ಲಿಸಿರುವ ಎಚ್ ಕೆ ಪಾಟೀಲ್ 2008ರಲ್ಲಿ ಗದಗ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜೆಪಿಯ ಶ್ರೀಶೈಲಪ್ಪ ಬಿದರೂರ ಆಯ್ಕೆಯಾದರು. ನಂತರ ನಡೆದ 2013 ಹಾಗೂ 2018ರ ಚುನಾವಣೆಯಲ್ಲಿ ಎಚ್ ಕೆ ಪಾಟೀಲ್ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಎಚ್ ಕೆ ಪಾಟೀಲ್ ಸೇವೆ ಸಲ್ಲಿಸಿದ್ದಾರೆ. ಹುಲುಕೋಟೆ ಹುಲಿ ಎಂದೇ ಜನಪ್ರಿಯರಾಗಿರುವ ಎಚ್ ಕೆ ಪಾಟೀಲ್ ಅವರು ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಮುಂದಾಳತ್ವವನ್ನು ವಹಿಸಿದ್ದರು. ಇದಕ್ಕೆ ವ್ಯಾಪಕ ಪ್ರಶಂಸೆಯನ್ನೂ ಪಡೆದರು.
ಎಚ್ ಕೆ ಪಾಟೀಲ್ ಅವರು ಈ ಹಿಂದೆ ಜವಳಿ, ನೀರಾವರಿ, ಕೃಷಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಎಚ್ ಪಾಟೀಲ್ ಕಾರ್ಯನಿರ್ವಹಿಸಿದ್ದಾರೆ. ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು.
2016- 17ರ ಅವಧಿಯಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಪರಿಣಾಮಕಾರಿ ಬಳಕೆಗಾಗಿ ಕೇಂದ್ರದಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 24 ಏಪ್ರಿಲ್ 2017 ರಂದು ಲಕ್ನೋದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಅವರು ಬಿಜೆಪಿಯನ್ನು ನೇರವಾಗಿ ಎದುರಿಸಬೇಕಿದೆ. ಅನಿಲ್ ಮೆನಸಿನಕಾಯಿ, ರಾಜು ಕುರಡಗಿ, ವಿಜಯಕುಮಾರ ಗಡ್ಡಿ ಹಾಗೂ ನಾಗೇಶ್ ಹುಬ್ಬಳ್ಳಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದ ಮತದಾರ ವಿವರ ( 2018 ರಲ್ಲಿ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ )
| ಕ್ಷೇತ್ರದ ಒಟ್ಟು ಮತದಾರರು | 2,19,575 |
| ಪುರುಷ ಮತದಾರರು | 1,09,936 |
| ಮಹಿಳಾ ಮತದಾರರು | 1,09,616 |
| ಇತರರು | 23 |












Click it and Unblock the Notifications