ಗದಗ: ಏಕಕಾಲಕ್ಕೆ ಹೆಚ್ಚಾಯ್ತು ಬೀದಿ ನಾಯಿ - ಕಳ್ಳರ ಹಾವಳಿ!
ಗದಗ ಜಿಲ್ಲೆಯಲ್ಲಿ ಮನೆಗಳ್ಳರು ಹಾಗೂ ಬೀದಿ ನಾಯಿಗಳ ಹಾವಳಿಯು ಏಕಕಾಲಕ್ಕೆ ಹೆಚ್ಚಳವಾಗಿದ್ದು. ಇಲ್ಲಿನ ಜನ ಈ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಬೀದಿ ನಾಯಿಗಳ ಹಾವಳಿಯು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿದ್ದು. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈ ಎರಡೂ ಸಮಸ್ಯೆಗಳು ಹೆಚ್ಚಾಗಿವೆ. ಮನೆ ಕಳ್ಳತನ ಪ್ರಕರಣಗಳು ಹೊಸ ಮಾದರಿಯಲ್ಲಿ ನಡೆಯುತ್ತಿದ್ದು. ಜನ ಬೆಚ್ಚಿಬೀಳುತ್ತಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಗದಗ ಜಿಲ್ಲೆಯಲ್ಲಿ ಮನೆ ಕಳ್ಳತನ ಮಾಡುವವರ ಸಂಖ್ಯೆ ಹಾಗೂ ನಾಯಿಗಳ ಹಾವಳಿ ಏಕಕಾಲಕ್ಕೆ ಹೆಚ್ಚಳವಾಗಿದೆ. ಬೀದಿ ನಾಯಿಗಳ ದಾಳಿಯಿಂದಾಗಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೋಣ ತಾಲ್ಲೂಕಿನ ಗಾಡಗೋಳಿ ಎನ್ನುವ ಗ್ರಾಮದಲ್ಲಿ ನಡೆದಿದೆ. ಈ ದಾಳಿಯೊಂದಿಗೆ ಈ ಭಾಗದಲ್ಲಿ ನಾಯಿಗಳ ಹಾವಳಿ ಎಷ್ಟು ವಿಪರೀತವಾಗಿದೆ ಎನ್ನುವ ವಿಷಯ ಬಹಿರಂಗವಾಗಿದೆ. ಕಳೆದ ಎರಡು ಮೂರು ತಿಂಗಳಿನಿಂದಲೂ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಸ್ಥಳೀಯ ಆಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಜನರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯ ರೋಣ ತಾಲ್ಲೂಕು ಸೇರಿದಂತೆ ವಿವಿಧ ಭಾಗದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ. ಇಲ್ಲಿನ ಗಾಡಗೋಳಿ ಗ್ರಾಮದಲ್ಲಿ ಜನ್ನತಬೀ (45) ಎನ್ನುವವರ ಮೇಲೆ ನಾಯಿಗಳು ದಾಳಿ ನಡೆಸಿವೆ. ಇಲ್ಲಿನ ಗಾಡಗೋಳಿ ಗ್ರಾಮದ ಹೊಳೆ ಆಲೂರ ರಸ್ತೆ ಭಾಗದಲ್ಲಿ ಈ ಘಟನೆ ನಡೆದಿದೆ. ಮನೆಯಿಂದ ಹೊರಗೆ ಅಂಗಡಿಗೆಂದು ಬಂದಿದ್ದವರ ಮೇಲೆ ಏಕಾಏಕಿ ನಾಯಿಗಳ ಗುಂಪು ದಾಳಿ ಮಾಡಿವೆ.
ನಾಯಿಗಳು ಏಕಾಏಕಿ ದಾಳಿ ಮಾಡಿದ ಗಾಬರಿಗೆ ಮಹಿಳೆ ಕಿರುಚಿಕೊಂಡಿದ್ದಾರೆ. ನಾಯಿಗಳ ದಾಳಿಯ ಸಮಯದಲ್ಲಿ ಅವರು ಜಾರಿ ಕೆಳಗೆ ಬಿದ್ದಿದ್ದು ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಅವರ ರೋಣ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಾಯಿಗಳು ಗಂಭೀರವಾಗಿ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಾಯಿಗಳ ನಿಯಂತ್ರಣಕ್ಕೆ ಆಗ್ರಹ: ಗದಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು. ನಾಯಿಗಳನ್ನು ಹಿಡಿಯುವುದಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಭಾಗದಲ್ಲಿ ನಾಯಿಗಳು ಸಣ್ಣ ಮಕ್ಕಳು ಹಾಗೂ ವಯಸ್ಸದವರ ಮೇಲೂ ದಾಳಿ ಮಾಡುತ್ತಿದ್ದು ನಾಯಿಗಳನ್ನು ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆಕಳ್ಳತನವೂ ಹೆಚ್ಚಳ: ಒಂದು ಕಡೆ ನಾಯಿಗಳ ಹಾವಳಿ ಹೆಚ್ಚಾಗಿದ್ದರೆ ಇನ್ನೊಂದು ಕಡೆ ಮನೆ ಕಳ್ಳರ ಹಾವಳಿ ಗದಗ ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ಮನೆ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಮನೆ ಕಳ್ಳರು ಬೀಗ ಹಾಕಿರುವ ಮನೆಗಳನ್ನೇ ನೋಡಿಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ. ಮನೆ ಕಳ್ಳತನಕ್ಕೆ ಕಡಿವಾಣ ಹಾಕುವುದಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು. ಈ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.












Click it and Unblock the Notifications