ಬಿಜೆಪಿಗೆ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಸೇರ್ಪಡೆ
ಹುಬ್ಬಳ್ಳಿ, ಮಾ.23: ಶ್ರೀರಾಮಸೇನೆ, ರಾಷ್ಟೀಯ ಹಿಂದೂ ಸೇನೆಯ ಮುಖ್ಯಸ್ಠರಾದ ಪ್ರಮೋದ ಮುತಾಲಿಕ್ ಅವರು ಭಾನುವಾರ ಮಧ್ಯಾಹ್ನ ಅಧಿಕೃತವಾಗಿ ಬಿ.ಜೆ.ಪಿಗೆ ಸೇರ್ಪಡೆಗೊಂಡಿದ್ದಾರೆ. ಬಿ.ಜೆ.ಪಿಯ ಚುನಾವಣಾ ಪ್ರಚಾರ ಕಚೇರಿಯಲ್ಲಿ ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.
ಧಾರವಾಡ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಉಳಿದಂತೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ ಮತ್ತು ಚಿಕ್ಕಮಗಳೂರಿನಿಂದ ಶ್ರೀರಾಮಸೇನೆಯ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರು.ಆದರೆ, ಈಗ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಶ್ರೀರಾಮಸೇನೆ ಅಭ್ಯರ್ಥಿಗಳು ಹಾಗೂ ಸ್ವತಃ ಪ್ರಮೋದ್ ಮುತಾಲಿಕ್ ಅವರು ಕಣಕ್ಕಿಳಿಯುವುದು ಅನುಮಾನವಾಗಿದೆ.
ದಕ್ಷಿಣ ರಾಜ್ಯಗಳ ಭಜರಂಗದಳದ ಮಾಜಿ ಸಂಚಾಲಕ, ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಷ್ಟ್ರಮಟ್ಟದ ನಾಯಕರ ನಿರ್ದೇಶನದಂತೆ ರಾಜ್ಯದ ಎಲ್ಲಾ ನಾಯಕರು ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತಾರೆ. ಮುಂಬರುವ ಚುನಾವಣೆಗೆ ನನ್ನನ್ನು ತುಂಬು ಮನಸ್ಸಿನಿಂದ ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಘೋಷಿಸಿದ್ದಾರೆ. ಪ್ರಮೋದ್ ಮುತಾಲಿಕ್ ಅವರ ಬಗ್ಗೆ ವಿವರ ಹಾಗೂ ಬಿಜೆಪಿ ಸೇರ್ಪಡೆ ಚಿತ್ರಗಳು ಮುಂದಿವೆ ನೋಡಿ.. [ಪ್ರಮೋದ ಮುತಾಲಿಕ್ ಬಿ.ಜೆ.ಪಿ ಸೇರ್ಪಡೆ ಗ್ಯಾಲರಿ ನೋಡಿ]

ಮುತಾಲಿಕ್ ಸೇರ್ಪಡೆಗೆ ಕಾಂಗ್ರೆಸ್ ವಿರೋಧ
2009ರಲ್ಲಿ ಮಂಗಳೂರಿನ ಪಬ್ ದಾಳಿ ಪ್ರಕರಣದಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಆರೋಪ ಹೊತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿ ಹೇಗೆ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಮುಂದೆ ನಿರೀಕ್ಷಿಸಿ...

ಹಿಂದೂಪರ ಸಂಘಟನೆ ನಾಯಕ ಮುತಾಲಿಕ್
ಬೆಳಗಾವಿಯ ಹುಕ್ಕೇರಿಯಲ್ಲಿ ಮರಾಠಿ ಕುಟುಂಬದಲ್ಲಿ ಜನಸಿದ ಪ್ರಮೋದ್ ಮುತಾಲಿಕ್ ಅವರು 1975ರಲ್ಲಿ ಆರೆಸ್ಸೆಸ್ ಸೇರಿಕೊಂಡ ಪ್ರಮೋದ್ ಮುತಾಲಿಕ್ ಅವರು ನಂತರ ಶಿವಸೇನೆಗೆ 2005ರಲ್ಲಿ ಸೇರ್ಪಡೆಯಾದರು ಆದರೆ, 2006ರಲ್ಲಿ ಶಿವಸೇನೆ ತೊರೆದರು. ಆಗ ಮಾತ್ರ ಬಿಜೆಪಿ ಜತೆ ನೇರ ಸಂಪರ್ಕ ಹೊಂದಿದ್ದರು. ಬೆಳಗಾವಿಯ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಶಿವಸೇನೆ ನಿರ್ಣಯವನ್ನು ಖಂಡಿಸಿ ಶಿವಸೇನೆ ತೊರೆದರು.

ಮುತಾಲಿಕ್ ಮೇಲೆ ಹಲವಾರು ಕೇಸ್ ಗಳಿವೆ
* ರಾಷ್ಟ್ರೀಯ ಹಿಂದೂ ಸೇನಾ, ಶ್ರೀರಾಮ ಸೇನಾ ಸಂಸ್ಥಾಪಕ, ಬಜರಂಗ ದಳದ ದಕ್ಷಿಣ ಭಾಗದ ಸಂಚಾಲಕ.
* ಕರ್ನಾಟಕದ 11 ರಾಜ್ಯ ಸೇರಿದಂತೆ ವಿವಿಧೆಡೆ ಸುಮಾರು 45 ಪ್ರಕರಣಗಳನ್ನು ಮೈಮೇಲೆ ಹಾಕಿಕೊಂಡಿರುವ ಪ್ರಮೋದ್ ಅವರು ನಾಥೂರಾಮ್ ಗೋಡ್ಸೆ ಅವರ ಅಪ್ಪಟ ಅನುಯಾಯಿ.
* ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ನೋಡುವ ಕನಸು ಹೊತ್ತು ಈಗ ಬಿಜೆಪಿ ಸೇರ್ಪಡೆ

ಮುತಾಲಿಕ್ ಸೇರ್ಪಡೆ ಬಿಜೆಪಿಗೇನು ಲಾಭ
ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ಧಾರವಾಡ, ಚಿಕ್ಕಮಗಳೂರು, ಕಾರವಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀರಾಮ ಸೇನೆ ಸಂಘಟನೆ ಸಕ್ರಿಯವಾಗಿದೆ. ಮುತಾಲಿಕ್ ಅವರನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ರಾಜ್ಯದ ಸುಮಾರು 58 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂತ್ವದ ಆಧಾರದ ಮೇಲೆ ಮತ್ತೊಮ್ಮೆ ಮತದಾರರನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ
|
ಮುತಾಲಿಕ್ ಸೇರ್ಪಡೆ ಬಿಜೆಪಿ ಟ್ವೀಟ್
ಮುತಾಲಿಕ್ ಸೇರ್ಪಡೆ ಬಿಜೆಪಿ ಕರ್ನಾಟಕ ಅಧಿಕೃತ(@bjpkarnataka) ಟ್ವೀಟ್ ಖಾತೆಯಿಂದ ಟ್ವೀಟ್ ಹಾಗೂ ಪ್ರಹ್ಲಾದ್ ಜೋಶಿ ಅವರ ಫೇಸ್ ಬುಕ್ ಖಾತೆಯಲ್ಲಿ ಘೋಷಿಸಲಾಗಿದೆ.












Click it and Unblock the Notifications