ಹುಬ್ಬಳ್ಳಿ: ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ 10ಸಾವಿರ ಮಂದಿ
ಹುಬ್ಬಳ್ಳಿ,ಫೆಬ್ರವರಿ,13: ಶ್ರೀ ಪತಂಜಲಿ ಯೋಗ ಸಮಿತಿಯ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ರಥಸಪ್ತಮಿ ಅಂಗವಾಗಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಭಾನುವಾರ ಫೆಬ್ರವರಿ 14 ರಂದು ಬೆಳಗ್ಗೆ 6 ಕ್ಕೆ ಸೂರ್ಯನಮಸ್ಕಾರ ಮಾಡಲಿದ್ದಾರೆ.
ಸೂರ್ಯ ನಮಸ್ಕಾರದಲ್ಲಿ ಬಲಾಢ್ಯ ಭಾರತಕ್ಕೆ ಮತ್ತು ಸಾಮಾಜಿಕ ಸಾಮರಸ್ಯ ಉದ್ದೇಶ ಹೊಂದಿರುವ ಶ್ರೀ ಪತಂಜಲಿ ಯೋಗ ಸಮಿತಿಯ ತುಮಕೂರಿನ ಚನ್ನಬಸಪ್ಪ, ಸಚಿವ ವಿನಯ ಕುಲಕರ್ಣಿ, ಅಕ್ಕಮಹಾದೇವಿ ಗಣಾಚಾರಿ, ಗಾಯಿತ್ರಿ ಜೋಶಿ, ನಾಗರಾಜ ನಾಗರಹಳ್ಳಿ ಸೇರಿದಂತೆ ಸಾವಿರಾರು ಜನರು ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ರಥಸಪ್ತಮಿ ವಿಶೇಷ :
ಸೂರ್ಯದೇವನು ರಥಸಪ್ತಮಿ ದಿನದಂದು ತನ್ನ ಏಳು ಕುದುರೆಗಳ ರಥವನ್ನೇರಿ ಉತ್ತರ ಗೋಳಾರ್ಧದ ಈಶಾನ್ಯ ದಿಕ್ಕಿನ ಕಡಗೆ ಚಲಿಸುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇದನ್ನೇ ವಸಂತ ಮಾಸದ ಆಗಮನ ಮತ್ತು ಸಂಕ್ರಮಣ ಕಾಲವೆನ್ನಲಾಗುತ್ತದೆ. ಅಲ್ಲದೇ ರಥ ಸಪ್ತಮಿಯ ದಿನವನ್ನು ಸೂರ್ಯನ ಜನ್ಮದಿನವಾಗಿ ಆಚರಿಸಲಾಗುತ್ತದೆ. [ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ]
ಸುಮಾರು 12 ಆಸನಗಳನ್ಹು ಒಳಗೊಂಡಿರುವ ಸೂರ್ಯ ನಮಸ್ಕಾರವು ಒಮ್ಮೆ ಮಾಡಿದರೆ 288 ಆಸನಗಳನ್ನು ಮಾಡಿದಷ್ಟು ಫಲ ಮತ್ತು ಶಕ್ತಿಯನ್ನು ನೀಡಲಿದೆ. ಆದ್ದರಿಂದ ಪ್ರತಿದಿನ ಕನಿಷ್ಠ ಐದು ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಆರೋಗ್ಯ ಉತ್ತಮ ರೀತಿಯಲ್ಲಿರುತ್ತದೆ. ಸರ್ವಾಂಗಗಳಿಗೂ ವ್ಯಾಯಾಮ ಸಿಗುವ ಏಕೈಕ ಆಸನವೆಂದರೆ ಅದು ಸೂರ್ಯನಮಸ್ಕಾರ ಎಂದು ಪ್ರಕಟಣೆ ತಿಳಿಸಿದೆ.