Siddeshwara Swamiji: ಧಾರವಾಡಕ್ಕೂ, ಸಿದ್ದೇಶ್ವರ ಶ್ರೀಗಳಿಗೂ ಅವಿನಾಭಾವ ಸಂಬಂಧ, ಹೇಗೆ?; ಇಲ್ಲಿದೆ ವಿವರ
ಧಾರವಾಡ, ಜನವರಿ, 03: ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಹೊಂದಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸೋಮವಾರ (ಜನವರಿ 02) ಅಸ್ತಂಗತರಾಗಿದ್ದಾರೆ. ಶ್ರೀಗಳಿಗೂ ಹಾಗೂ ಧಾರವಾಡಕ್ಕೂ ಅವಿನಾಭಾವ ಸಂಬಂಧವಿತ್ತು. ಧಾರವಾಡ ಎಂದರೆ ಅವರಿಗೆ ವಿಶೇಷ ಪ್ರೀತಿ. ಈ ಕಾರಣಕ್ಕಾಗಿಯೇ ಶ್ರೀಗಳು ಧಾರವಾಡದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳುಗಳ ಕಾಲ ನಡೆಸಿದ ಪ್ರವಚನ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಪ್ರತಿನಿತ್ಯ ಪಾಲ್ಗೊಳ್ಳುತ್ತಿದ್ದರು.
2017ರಲ್ಲಿ ಶ್ರೀಗಳು ಧಾರವಾಡದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳ ಕಾಲ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ಪ್ರವಚನ ಕೇಳಲು ಕೇವಲ ನಗರ ಪ್ರದೇಶ ಜನರು ಮಾತ್ರವಲ್ಲದೇ, ಗ್ರಾಮಾಂತರ ಭಾಗಗಳಿಂದಲೂ ಲಕ್ಷಾಂತರ ಜನ ಪಾಲ್ಗೊಂಡು ಸಿದ್ದೇಶ್ವರ ಶ್ರೀಗಳ ಮಾತುಗಳನ್ನು ಆಲಿಸಿದ್ದರು. ಅಂತಹ ಮಹಾನ್ ಸಂತ ಇನ್ನಿಲ್ಲವಾಗಿದ್ದು ಇಡೀ ಸಂತ ಕುಲಕ್ಕೆ ತುಂಬಲಾರದ ನಷ್ಟವಾದಂತಾಗಿದೆ.
Siddeshwara Swamiji : ವೈಕುಂಠ ಏಕಾದಶಿಯ ದಿನ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನದ ವಿವರ
ಧಾರವಾಡದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಶ್ರೀಗಳು ಅತ್ಯಂತ ಪ್ರೀತಿಯಿಂದ ಪಾಲ್ಗೊಳ್ಳುತ್ತಿದ್ದರು. ಸಿದ್ದೇಶ್ವರ ಶ್ರೀಗಳು ಬರುತ್ತಾರೆ ಎಂದರೆ ಆ ಸಭಾಭವನ, ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಜನರಿಂದ ಕಿಕ್ಕಿರಿದು ತುಂಬುತ್ತಿತ್ತು. ಆದರೆ ಸೋಮವಾರ ಶ್ರೀಗಳು ಪರಮಾತ್ಮನೆಡೆಗೆ ಪ್ರಯಾಣ ಬೆಳೆಸಿದ್ದು, ಅವರ ಇಡೀ ಭಕ್ತ ಸಮೂಹದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
ಕಲಾವಿದನ ಕೈಚಳಕದಲ್ಲಿ ತಯಾರಾದ ಮೂರ್ತಿ
ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರು, ನಿತ್ಯ ಸಂತ ಎಂದೆಲ್ಲ ಖ್ಯಾತರಾಗಿ ನಾಡಿನ ಜನತೆಗೆ ತಮ್ಮ ಮೃದು ಧ್ವನಿಯ ಪ್ರವಚನದ ಮೂಲಕವೇ ಹತ್ತಿರವಾಗಿದ್ದರು. ಆದರೆ ಇದೀಗ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಪರಮಾತ್ಮನಲ್ಲಿ ಲೀನವಾಗಿದ್ದಾರೆ. ಶ್ರೀಗಳ ನೆನಪಿನಲ್ಲಿ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, 11 ಕೆಜಿ ಜೇಡಿ ಮಣ್ಣಿನಲ್ಲಿ ಎರಡು ಅಡಿ ಎತ್ತರದ ಸಿದ್ದೇಶ್ವರರ ಕಲಾಕೃತಿಯನ್ನು ರಚಿಸಿ ಕಲಾನಮನ ಸಲ್ಲಿಸಿದ್ದಾರೆ.
ಕಲಾಕೃತಿ ತಯಾರಿಸುವ ಮೂಲಕ ಶ್ರದ್ಧಾಂಜಲಿ
ಸೋಮವಾರ ರಾತ್ರಿ ಶ್ರೀಗಳ ನಿಧನ ಸುದ್ದಿ ತಿಳಿದ ನಂತರ ಕಲಾವಿದ ಮಂಜುನಾಥ ಹಿರೇಮಠ ಅವರು, ಮಣ್ಣಿನಲ್ಲಿ ಈ ಕಲಾಕೃತಿ ರಚಿಸುವ ಮೂಲಕ ಸರಳತೆಯ ಸಾಕಾರ ಮೂರ್ತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳಂತೆಯೇ ಈ ಮಣ್ಣಿನ ಮೂರ್ತಿಯನ್ನು ಕಲಾವಿದ ಮಂಜುನಾಥ ಸಿದ್ಧಪಡಿಸಿದ್ದು, ಇದೀಗ ಈ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ.
ತಪೋವನದಲ್ಲಿ ತಂಗುತ್ತಿದ್ದ ಸಿದ್ದೇಶ್ವರ ಶ್ರೀಗಳು
ಇನ್ನು ಸಿದ್ದೇಶ್ವರ ಶ್ರೀಗಳು ಧಾರವಾಡಕ್ಕೆ ಭೇಟಿ ನೀಡಿದಾಗಲೆಲ್ಲ ತಪೋವನದಲ್ಲಿ ತಂಗುತ್ತಿದ್ದರು. ಮಹಾತಪಸ್ವಿ ಕುಮಾರೇಶ್ವರ ಸ್ವಾಮೀಜಿಗಳ ಜೀವಿತಾವಧಿಯಲ್ಲಿ ಅವರೊಂದಿಗೆ ಸಿದ್ದೇಶ್ವರ ಶ್ರೀಗಳು ನಿಕಟ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡಿದಾಗಲೆಲ್ಲ ಸಿದ್ದೇಶ್ವರ ಶ್ರೀಗಳು ತಪೋವನದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.
ಒಂದು ತಿಂಗಳ ಕಾಲ ಪ್ರವಚನ ನೀಡಿದ್ದ ಶ್ರೀಗಳು
ಶ್ರೀಗಳು ಲಿಂಗೈಕ್ಯರಾಗಿದ್ದರಿಂದ ಇದೀಗ ಈ ತಪೋವನದಲ್ಲಿ ನೀರವ ಮೌನ ಆವರಿಸಿದೆ. 2017ರಲ್ಲಿ ಒಂದು ತಿಂಗಳ ಕಾಲ ಪ್ರವಚನ ನೀಡಿದ್ದ ಶ್ರೀಗಳು, ತಪೋವನದಲ್ಲೇ ವಾಸವಾಗಿದ್ದರು. ತಪೋವನದ ಜ್ಞಾನ ಮಂದಿರದಲ್ಲೇ ಶ್ರೀಗಳು ವಾಸ ಮಾಡುತ್ತಿದ್ದರು. ತಪೋವನದಲ್ಲೇ ವಾಸ ಮಾಡುತ್ತಿದ್ದ ಶ್ರೀಗಳು ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ತಮಗೆ ಬೇಕಾದ ಆಹಾರವನ್ನೂ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ದಿವ್ಯ ಜ್ಯೋತಿಯೇ ಇಹಲೋಕದಿಂದ ಕಣ್ಮರೆಯಾಗಿದ್ದು, ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ತಪೋವನದ ಶಾಂತವೀರ ಸ್ವಾಮೀಜಿಗಳು ಸಿದ್ದೇಶ್ವರ ಶ್ರೀಗಳೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.