Shakti scheme effect: ಸಮಯಕ್ಕೆ ಸರಿಯಾಗಿ ಬಸ್ ಇಲ್ಲ, ಶಾಲೆಗೆ ಹೇಗೆ ಹೋಗೋದು?: ಕಲಘಟಗಿಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆ
ಧಾರವಾಡ, ಜೂನ್, 28: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಕ್ತಿಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಮಾತ್ರ ಬಸ್ಗಳ ಕೊರತೆಯಿಂದ ಶಾಲಾ ಮಕ್ಕಳು ಪ್ರನಿನಿತ್ಯವೂ ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೂ ಈ ಮಕ್ಕಳ ಗೋಳು ಕೇಳಲು ಯಾವ ಇದುವರೆಗೂ ಅಧಿಕಾರಿಗಳು ಮುಂದೆಬಂದಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ನಾವು ಶಾಲೆಗೆ ಬರಲು ಬಸ್ಸುಗಳಲ್ಲಿ ಹರಸಾಹಸ ಪಡುತ್ತಿದ್ದು, ಅದೆ ರೀತಿ ಮರಳಿ ಸಾಯಂಕಾಲ ಮನೆಗೆ ಹೋಗಲು ಬಸ್ಸುಗಳು ಇಲ್ಲದೆ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎಂದು ಮಕ್ಕಳು ಅಳುತ್ತಾ ತಮ್ಮ ಗೋಳನ್ನು ಹೆಳಿಕೊಂಡಿದ್ದಾರೆ. ಶಾಸಕರು ಹಾಗೂ ಸಚಿವರಾದಂತ ಸಂತೋಷ್ ಲಾಡ್ ಅವರ ಕ್ಷೇತ್ರದಲ್ಲಿ ಈ ರೀತಿ ಪರಿಸ್ಥಿತಿ ಬಂದೋದಗಿರುವುದು ವಿಪರ್ಯಾಸವಾಗಿದೆ. ಇನ್ನು ಕೂಡಲೇ ಸಚಿವರಾದ ಸಂತೋಷ್ ಲಾಡ್ ಸ್ಪಂದಿಸಿ ಮಕ್ಕಳ ಕಣ್ಣೀರು ಒರೆಸುತ್ತಾರಾ ಎಂದು ಕಾದುನೋಡಬೇಕಾಗಿದೆ.

ಬಸ್ ನಿಲ್ದಾಣದಲ್ಲಿ ಮಹಿಳೆಯರ ಪರದಾಟ
ಮತ್ತೊಂದೆಡೆ ಈ ಯೋಜನೆಯ ಪೂರ್ಣ ಮಾಹಿತಿ ಅರಿವಿನ ಕೊರತೆ ಹಾಗೂ ಕೆಲ ನಿರ್ಬಂಧದಿಂದ ಪಟ್ಟಣ ಪ್ರದೇಶಗಳಿಗೆ ಗುಳೆ ಹೊರಟ ಮಹಿಳೆಯರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ತಾಲೂಕು ಕೇಂದ್ರದಿಂದ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಪಡಿತರ ಚೀಟಿ, ಆಧಾರ್, ಚುನಾವಣಾ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿ ಹಿಡಿದು ಖುಷಿಯಿಂದ ಬಸ್ ಹತ್ತುತ್ತಿದ್ದಾರೆ. ಆದರೆ ಉಚಿತ ಪ್ರಯಾಣಕ್ಕೆ ಅಸಲಿ ಕಾರ್ಡ್ಗಳನ್ನೇ ತೋರಿಸಬೇಕು ಎಂಬ ನಿಯಮ ಕಾರ್ಮಿಕ ಮಹಿಳೆಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಅಸಲಿ ಕಾರ್ಡ್ ಇಲ್ಲದವರು ಬಸ್ ನಿಲ್ದಾಣಗಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಸಲಿ ಕಾರ್ಡ್ ತೋರಿಸಿ ಟಿಕೆಟ್ ಪಡೆಯಬೇಕು, ಇಲ್ಲವೇ ಬಸ್ನಿಂದ ಕೆಳಗೆ ಇಳಿಯುವಂತೆ ಕಂಡಕ್ಟರ್ಗಳು ಖಡಕ್ ಆಗಿ ಹೇಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಅಲ್ಲದೆ ಸರಿಯಾದ ದಖಲೆ ಇಲ್ಲ ಅಂತಾ ಹೇಳಿ ಮಾರ್ಗದ ಮಧ್ಯದಲ್ಲೇ ಇಳಿಸಿ ಹೋಗುತ್ತಿರುವ ಘಟನೆಗಳು ಕೂಡ ನಡೆದಿವೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧಡೆಗಳಿಂದ ಬರುವ ಬಸ್ಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರು ಇದ್ದು, ಹೆಚ್ಚುವರಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ನಿರಾಕರಣೆ ಮಾಡಲಾಗುತ್ತಿದೆ.
ಕಾರ್ಡ್ ನೀಡಿ ಪ್ರಯಾಣಿಸುವ ಕುಟುಂಬಗಳಿಗೆ ಅವರ ಲಗೇಜ್ ನೋಡಿ ಬೇರೆ ಬಸ್ಗಳಿಗೆ ಬನ್ನಿ ಎಂದು ವಾಪಾಸ್ ಕಳುಹಿಸಿದ ಘಟನೆಗಳು ಕೂಡ ನಡೆದಿವೆ. ಇಂತಹ ನಿಯಮಗಳಿಂದ ಅನೇಕ ಮಹಿಳೆಯರು ಬಸ್ ನಿಲ್ದಾಣದಲ್ಲೇ ಉಳಿದುಕೊಳ್ಳುವುದು ಅನಿವಾರ್ಯವಾಗಿದೆ. ಬೇರೆ ಬೇರೆ ವಿಭಾಗಗಳಿಂದ ರಯಚೂರು ಕಡೆಗೆ ಪ್ರಯಾಣಿಸುವ ಬಹುತೇಕ ಸಾರಿಗೆ ಬಸ್ಗಳಲ್ಲಿ ಪಾಸ್ ಹೊಂದಿದ ಶಾಲಾ ಕಾಲೇಜು ಮಕ್ಕಳನ್ನು ದೂರವಿಡುವ ದುರುದ್ದೇಶದಿಂದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳ ನಾಮಫಲಕ ಅಳವಡಿಸುತ್ತಿದ್ದಾರೆ ಎನ್ನುವ ಆರೋಪ ಕೆಳಿಬಂದಿವೆ.
ಹೊರ ರಾಜ್ಯಗಳಿಗೆ ತೆರಳುವ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿರುವುದರಿಂದ ಮಹಿಳೆಯರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಅವಿದ್ಯಾವಂತ, ಕೂಲಿ ಕಾರ್ಮಿಕ ಮಹಿಳೆಯರು ಕಾರ್ಡ್ ಒಯ್ದರೆ ಕೆಲಸ ಮಾಡುವ ವೇಳೆ ಕಳೆಯುತ್ತದೆ ಎಂಬ ಭಯದಿಂದ ಜೆರಾಕ್ಸ್ ಮಾಡಿಸಿಕೊಂಡು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನಿರ್ವಾಹಕರು ಮಹಿಳೆಯರನ್ನು ಬಸ್ಗೆ ಹತ್ತಿಸಿಕೊಳ್ಳದೆ ಹಾಗೆ ಹೋಗುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ವಿಚಾರಣೆಗೂ ಅವಕಾಶಗಳಿಲ್ಲ. ಯಾವ ಬಸ್ ಹೊರ ರಾಜ್ಯಕ್ಕೆ ತೆರಳುವ ಮಾಹಿತಿಯೂ ಗೊತ್ತಿಲ್ಲ. ಇಂತಹ ಸಮಸ್ಯೆಗಳಿಂದ "ಶಕ್ತಿ" ಯೋಜನೆ ಮಹಿಳೆಯರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಯಾವುದೇ ಬಸ್ ಇರಲಿ ಗಡಿ ಪ್ರದೇಶದತ್ತ ಜೆರಾಕ್ಸ್ ಪ್ರತಿ ಮೇಲೆ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.












Click it and Unblock the Notifications