ಧಾರವಾಡ; ಗ್ರಾಮಕ್ಕೆ ನುಗ್ಗಿದ ಮಳೆ ನೀರು, ಪಂಚಾಯಿತಿ ವಿರುದ್ಧ ಗರಂ
ಧಾರವಾಡ, ಮೇ 19: ಧಾರವಾಡದ ಕುಂದಗೋಳ ತಾಲ್ಲೂಕಿನ ಸಂಶಿ ಸಮೀಪದ ಯರೇಬೂದಿಹಾಳ ಗ್ರಾಮದಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಕ್ಕೆ ನೀರು ನುಗ್ಗಿದೆ. ನೀರು ಸರಾಗವಾಗಿ ಹೋಗುವ ರೀತಿಯಲ್ಲಿ ಪಂಚಾಯತಿ ಅಧಿಕಾರಿಗಳು ಕಾರ್ಯ ನಿರ್ವಹಿಸಿಲ್ಲ ಎಂದು ಯರೇಬುದಿಹಾಳ ಗ್ರಾಮಸ್ಥರು ಪಂಚಾಯತಿಗೆ ಮುತ್ತಿಗೆ ಹಾಕಿದ್ದರು.
ಎರಡು ದಿನದಿಂದ ಗ್ರಾಮಕ್ಕೆ ವಿದ್ಯುತ್ ಸ್ಥಗಿತವಾಗಿದ್ದು ವರ್ಷವಿಡಿ ಬಿತ್ತನೆಗಾಗಿ ಕೂಡಿಟ್ಟ ಬೀಜಗಳು, ಧಾನ್ಯಗಳು ನೀರುಪಾಲಾಗಿದೆ. ಅದೇ ರೀತಿ ಸುರಿದ ಮಳೆಗೆ ಶಾಲಾ-ಕಾಲೇಜುಗಳು ರಜೆ ನೀಡಿವೆ. ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಇನ್ನು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಗ್ರಾಮಸ್ಥರಿಗೆ ನೀರು ಸರಿಯಾಗಿ ಹರಿದುಹೋಗಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕಳೆದ ಎರಡು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕುಂದಗೋಳ ತಾಲೂಕು ಪಶುಪತಿಹಾಳ ಗ್ರಾಮದಲ್ಲಿ ಹೊಲಗಳಲ್ಲಿನ ನೀರು ಮನೆಗೆ ನುಗ್ಗುತ್ತಿದೆ. ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಆದ್ದರಿಂದ ಗ್ರಾಮದ ಹೊರವಲಯ ಸಂಪೂರ್ಣ ಜಲವೃತವಾಗಿದೆ. ಇನ್ನು ಗ್ರಾಮದ ಯಲ್ಲವ್ವ ಭೀಮಪ್ಪ ಡೊಳ್ಳಿನ ಸೇರಿದಂತೆ ಹಲವಾರು ಗ್ರಾಮಸ್ಥರ ಮನೆಗಳು ಕುಸಿದಿವೆ.

ಮಳೆಗೆ ಮನೆ ಕುಸಿತ; ನೋಡ ನೋಡುತ್ತಿದ್ದಂತೆ ಮನೆ ಗೋಡೆ ಕುಸಿದು ಬಿದ್ದಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಮುಖ್ಯ ಬಜಾರ್ ನಲ್ಲಿರುವ ಶರಣಯ್ಯ ಮಠದ ಎಂಬುವರ ಮನೆ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯ ಮುಂಭಾಗದಲ್ಲಿ ಸಾಕಷ್ಟು ಜನರು ಓಡಾಡುತ್ತಿದ್ದರು. ಸ್ಥಳೀಯರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.












Click it and Unblock the Notifications