ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಯಡವಟ್ಟು, ಬಿಕಾಂ ವಿದ್ಯಾರ್ಥಿಗಳಿಗೆ ಆಪತ್ತು
ಧಾರವಾಡ, ಡಿಸೆಂಬರ್, 09: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ಆಗುತ್ತಲೇ ಇರುತ್ತದೆ. ಇದೀಗ ಯುಜಿ ಪರೀಕ್ಷೆಯ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಬಿಕಾಂ ಕೋರ್ಸ್ನ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶದ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಯಡವಟ್ಟು ಮಾಡಿಕೊಂಡಿದ್ದು, ಇದೀಗ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ.
ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ: ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರ ಗೋಳು
ಕೋರ್ಸ್ ವಿಷಯ ಅಲ್ಲದ ಅಂಕಗಳ ಸೇರ್ಪಡೆ
ಬಿಕಾಂ ವಿದ್ಯಾರ್ಥಿಗಳ ಅಂತಿಮ ವರ್ಷದ ಒಟ್ಟಾರೆ ಪರೀಕ್ಷಾ ಫಲಿತಾಂಶಕ್ಕೆ ಕೋರ್ಸ್ ವಿಷಯ ಅಲ್ಲದ ಅಂಕಗಳನ್ನು ಸೇರ್ಪಡೆ ಮಾಡಿದೆ. ಕಡ್ಡಾಯ ಕನ್ನಡ ವಿಷಯದ ಅಂಕಗಳನ್ನು ಸೇರ್ಪಡೆ ಮಾಡುವ ಮೂಲಕ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಈ ರೀತಿಯ ಸುಮಾರು 15 ಸಾವಿರ ಅಂಕಪಟ್ಟಿಗಳನ್ನು ಮುದ್ರಣ ಮಾಡಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗ, ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ.
ತಪ್ಪು ಮಾಡಿದವರಿಗೆ ದಂಡ
ಯುಜಿ ವಿಭಾಗದಲ್ಲಿ ಮೊದಲು ಕನ್ನಡ ಕಲಿ ಎಂಬ ವಿಷಯವಿತ್ತು. ಅದನ್ನು ಈಗ ಕಡ್ಡಾಯ ಕನ್ನಡ ಎಂದು ಮಾಡಲಾಗಿದೆ. ಆದರೆ ಕಡ್ಡಾಯ ಕನ್ನಡ ಒಂದು ವಿಷಯ ಅಲ್ಲ. ಆದರೂ ಅದರ ಅಂಕಗಳನ್ನು ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಲಾಗಿದೆ. ಈ ತಪ್ಪು ಮಾಡಿದವರಿಗೆ ದಂಡ ವಿಧಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇನ್ನು ಅಂಕಪಟ್ಟಿ ವಿತರಣೆ ಮಾಡದೇ ಇರುವುದರಿಂದ ಎಲ್ಲವನ್ನೂ ಮತ್ತೊಮ್ಮೆ ಸರಿಪಡಿಸಿಕೊಳ್ಳಲಾಗುತ್ತಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಮಾಡುವ ಮೊದಲೇ ಈ ತಪ್ಪು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಇದೀಗ ಅಂಕಪಟ್ಟಿಯಲ್ಲಿ ಆದ ಈ ಯಡವಟ್ಟಿನಿಂದ ಪಾಸಿಂಗ್ ಸರ್ಟಿಫಿಕೇಟ್ನಲ್ಲೂ ಶೇಕಡಾ 5ರಷ್ಟು ವ್ಯತ್ಯಾಸ ಆಗಲಿದೆ. ಅದನ್ನೂ ಸರಿಪಡಿಸುವ ಕೆಲಸ ನಡೆದಿದಿದ್ದು, ಒಟ್ಟಾರೆ ಈ ತಪ್ಪಿನಿಂದಾಗಿ ಸಮಯ, ಹಣ ಎಲ್ಲವೂ ವ್ಯರ್ಥವಾದಂತಾಗಿದೆ.