ಪತಿಯ ಜೀವ ಬೇಡುತ್ತಾ ಅವಶೇಷಗಳೆದುರು ನಿಂತ ಗರ್ಭಿಣಿ, ಪತಿ ಬಂದಿದ್ದು ಶವವಾಗಿ
ಧಾರವಾಡ, ಮಾರ್ಚ್ 20: ನೋಡ ನೋಡುತ್ತಿದ್ದಂತೆ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಅವಶೇಷಗಳಡಿ ಎಷ್ಟು ಜನರ ಪ್ರಾಣ ಅಡಗಿದೆಯೋ ಯಾರಿಗೂ ತಿಳಿಯದು.
ಆದರೆ ಗರ್ಭಿಣಿಯೊಬ್ಬಳು ಮಾತ್ರ ಘಟನೆ ನಡೆದ ಸಮಯದಿಂದಲೂ ಅಲ್ಲೇ ನಿಂತಿದ್ದಳು. ಮನಸ್ಸಿನಲ್ಲೇನೋ ಆತಂಕ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದಳು. ಕಣ್ತುಂಬ ನೀರು ತುಂಬಿಕೊಂಡಿತ್ತು. ಆಕೆಯೇ ಜ್ಯೋತಿ ಹಿರೇಮಠ್.
ಆಕೆಯ ಪತಿ ಆಶಿತ್ ಹಿರೇಮಠ್ ಕೂಡ ಆ ಅವಶೇಷಗಳಡಿ ಸಿಲುಕಿದ್ದರು, ರಕ್ಷಣಾ ಕಾರ್ಯ ನಡೆಯುತ್ತಿದೆ. ಅಲ್ಲಿಯೇ ನಿಂತು ನನ್ನ ಗಂಡನನ್ನು ಈಗ ಹೊರಗೆ ಕರೆತರುತ್ತಾರೆ ಅವರನ್ನು ನೋಡಬೇಕು ಎಂದು ಗಟ್ಟಿ ಮನಸ್ಸಿನಿಂದ ಕಾಯುತ್ತಿದ್ದಳು.
ಚಿತ್ರಗಳು: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಭಾರೀ ಅನಾಹುತ
ಜೊತೆಗೆ ಮೂರ್ನಾಲ್ಕು ಬಾರಿ ಜಿಲ್ಲಾಸ್ಪತ್ರೆಗೆ ತೆರಳಿ ತನ್ನ ಗಂಡನನ್ನು ಕರೆತಂದಿದ್ದೀರಾ ಎಂದು ವಿಚಾರಿಸಿದ್ದಳು ಆದರೆ ಆಸ್ಪತ್ರೆ ವೈದ್ಯರು ಕೊಟ್ಟಿರುವ ಉತ್ತರ ಬೇಸರ ತಂದಿತ್ತು.

ತಡರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಯುತ್ತಲೇ ಇದೆ ಆಕೆ ಗಂಡನಿಗಾಗಿ ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದಳು. ಬೆಳಗಿನ ಜಾವವೇ ಮತ್ತೆ ಆ ಜಾಗಕ್ಕೆ ಬಂದು ಕಾಯುತ್ತಿದ್ದಳು, ಆದರೆ ಆಕೆಯ ಗಂಡ ಬದುಕಿ ಬರಲಿಲ್ಲ,.
ಬಂದಿದ್ದು ಆತನ ಶವ ಮಾತ್ರ, ಅದನ್ನು ನೋಡಿ ಆಕೆಯ ಹೃದಯ ಚೂರು ಚೂರಾಗಿದೆ. ಗರ್ಭಿಣಿಗೆ ಅದೆಂಥಾ ನೋವು ಕಾಡಿರಬಹುದು, ಗರ್ಭಿಣಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸಾಂತ್ವನ ಹೇಳಬಹುದು ಆದರೆ ಗಂಡನನ್ನು ಬದುಕಿಸಿಕೊಡಲಾದೀತೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ದುರ್ಘಟನೆಗೆ ಕಾರಣರಾದವರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ದೃಶ್ಯ ಮನಕಲಕುವಂತಿದೆ. ಇನ್ನೂ ಸಿಲುಕಿರುವ ಮಂದಿಯಾದರೂ ಬದುಕಿಬರಲಿ ಎನ್ನುವುದು ನಮ್ಮ ಪ್ರಾರ್ಥನೆ.












Click it and Unblock the Notifications