ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯ
ಧಾರವಾಡ, ಮೇ 02 : ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಮೇ 19ರಂದು ಉಪ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಕಾಂಗ್ರೆಸ್ನ ಸಿ.ಎಸ್.ಶಿವಳ್ಳಿ ಅವರು ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಮಾರ್ಚ್ 22 ರಂದು ಅಕಾಲಿಕವಾಗಿ ನಿಧನರಾದ ಪರಿಣಾಮ, ಉಪ ಚುನಾವಣೆ ಎದುರಾಗಿದೆ.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಪರಿಚಯ
ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಅವರಿಗೆ ಉಪ ಚುನಾವಣೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡ ಅವರು ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ 634 ಮತಗಳಿಂದ ಸೋಲು ಕಂಡಿದ್ದ ಎಸ್.ಐ.ಚಿಕ್ಕನಗೌಡ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಚಿಂಚೋಳಿ, ಕುಂದಗೋಳ ಉಪ ಚುನಾವಣೆ : ಸಿದ್ದರಾಮಯ್ಯ, ಖರ್ಗೆ ಪ್ರತಿಷ್ಠೆ
ಉತ್ತಮವಾದ ಕೃಷಿಭೂಮಿ ಹಾಗೂ ಒಕ್ಕಲುತನಕ್ಕೆ ಹೆಸರುವಾಸಿಯಾಗಿದೆ ಕುಂದಗೋಳ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಈ ತಾಲೂಕು ಅನೇಕ ಹೆಮ್ಮೆಯ ಪ್ರತಿಭೆಗಳನ್ನು ನೀಡಿದೆ. ಇಲ್ಲಿ ಬೆಳೆಯುವ ಕೆಂಪು ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಪ್ರಸಿದ್ಧಿಗಳಿಸಿದೆ.
ಉಪ ಚುನಾವಣೆ : ಕುಂದಗೋಳಕ್ಕೆ ಡಿ.ಕೆ.ಶಿವಕುಮಾರ್ ಉಸ್ತುವಾರಿ
ಮುಖ್ಯಮಂತ್ರಿಗಳನ್ನು ನೀಡಿದೆ
ಕುಂದಗೋಳ ಕ್ಷೇತ್ರ ನಾಡಿಗೆ ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಈ ತಾಲೂಕಿನ ಕಮಡೊಳ್ಳಿ ಗ್ರಾಮದ ಎಸ್.ಆರ್.ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 1957 ರಿಂದಲೂ ಕುಂದಗೋಳ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿದೆ. ಒಟ್ಟು 14 ಚುನಾವಣೆಗಳನ್ನು ಕಂಡಿದೆ.
1,89,281 ಮತದಾರರು
ಕುಂದಗೋಳ ತಾಲೂಕು ಹಾಗೂ ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಮತ್ತು ಛಬ್ಬಿ ಕಂದಾಯ ವೃತ್ತಗಳನ್ನು ಈ ಕ್ಷೇತ್ರ ಒಳಗೊಂಡಿದೆ. 1,89,281 ಮತದಾರರು ಕ್ಷೇತ್ರದಲ್ಲಿದ್ದಾರೆ. ಏಪ್ರಿಲ್ 16, 2019 ರ ಮಾಹಿತಿಯಂತೆ ಕ್ಷೇತ್ರದಲ್ಲಿ 97,457 ಪುರುಷ , 91,820 ಮಹಿಳೆಯರು ಹಾಗೂ 4 ತೃತೀಯ ಲಿಂಗಿಗಳು ಇದ್ದಾರೆ.
ಕಾಂಗ್ರೆಸ್ ಭದ್ರಕೋಟೆ
1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಕೆ. ಕಾಂಬಳಿ 15,819 ಮತಗಳನ್ನು ಪಡೆದು ಚುನಾಯಿತರಾಗಿದ್ದರು.1962ರ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಕೆ. ಕಾಂಬಳಿ 13,265 ಮತಗಳನ್ನು ಪಡೆದುಕೊಂಡು ಎರಡನೇ ಬಾರಿಗೆ ಚುನಾಯಿತರಾಗಿದ್ದರು. 1967ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಆರ್. ಬೊಮ್ಮಾಯಿ 20,291 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಕಾಂಗ್ರೆಸ್ ಬಿಜೆಪಿ ಎದುರಾಳಿ
1972ರ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ನ ಆರ್.ವಿ. ರಂಗನಗೌಡ 25,694 ಮತಗಳನ್ನು ಪಡೆದು ಜಯಗಳಿಸಿದರು.
1978ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಮ್.ಎಸ್. ಕಟಗಿ, 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಕುಬಿಹಾಳ ಕುಂದಗೋಳ ಕ್ಷೇತ್ರದಿಂದ ಗೆದ್ದರು.
ಜೆಡಿಎಸ್ಗೆ ಗೆಲುವು
1985ರ ಚುನಾವಣೆಯಲ್ಲಿ ಜನತಾಪಕ್ಷದ ಅಭ್ಯರ್ಥಿ ಬಿ.ಎ. ಉಪ್ಪಿನ 28,038 ಮತಗಳನ್ನು ಪಡೆದುಕೊಂಡು ಚುನಾಯಿತರಾಗಿದ್ದರು. 1989ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಗೋವಿಂದಪ್ಪ.ಎಚ್.ಜುಟ್ಟಲ 36,925 ಮತಗಳನ್ನು ಪಡೆದು ಜಯಗಳಿಸಿದರು 1994ರ ಚುನಾವಣೆಯಲ್ಲಿ ಜನತಾದಳದ ಎಂ.ಎಸ್. ಅಕ್ಕಿ ಜಯಗಳಿಸಿದರು.
ಸಿ.ಎಸ್.ಶಿವಳ್ಳಿ ಮೊದಲ ಗೆಲುವು
1999ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಎಸ್. ಶಿವಳ್ಳಿ 30,692 ಮತಗಳನ್ನು ಪಡೆದು ಮೊದಲ ಬಾರಿಗೆ ಜಯಗಳಿಸಿದ್ದರು. 2004ರ ಚುನಾವಣೆಯಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿ ಎಮ್.ಎಸ್.ಅಕ್ಕಿ 28,184 ಮತಗಳನ್ನು ಪಡೆದುಕೊಂಡು ಎರಡನೇ ಬಾರಿಗೆ ಚುನಾಯಿತರಾಗಿದ್ದರು. ಪಕ್ಷೇತರ ಅಭ್ಯರ್ಥಿ ಸಿ.ಎಸ್.ಶಿವಳ್ಳಿ ಸೋತಿದ್ದರು.
ಕ್ಷೇತ್ರದಿಂದ ಗೆದ್ದು ಸಚಿವರಾದರು
2008ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಸಿದ್ಧನಗೌಡ ಈಶ್ವರಗೌಡ ಚುನಾಯಿತರಾಗಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಸಿ.ಎಸ್.ಶಿವಳ್ಳಿ ಅವರು ಜಯಗಳಿಸಿದ್ದರು.