ನನಗೂ ಉಪ ಮುಖ್ಯಮಂತ್ರಿ, ಕೃಷಿ ಸಚಿವನಾಗುವ ಆಸೆ ಇದೆ- ಶಾಸಕ ಕೋನರೆಡ್ಡಿ
ಧಾರವಾಡ , ಮೇ 26: ನನಗೂ ಸಹ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿಯಾಗಬೇಕು ಎನ್ನುವ ಆಸೆಯಿದೆ. ಅವಕಾಶ ಸಿಕ್ಕಾಗ ಎಲ್ಲರಿಗೂ ಆಸೆ ಇರುತ್ತದೆ. ನನಗೂ ಕೃಷಿ ಸಚಿವನಾಗುವ ಆಸೆ ಇದೆ ಎಂದು ನವಲಗುಂದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಅಂದರೆ ನನ್ನನ್ನು ಸಹ ಪರಿಗಣಿಸಿ ನಮ್ಮ ಪಕ್ಷದ ವರಿಷ್ಠರಿಗೆ ಇದು ನನ್ನ ಮನವಿ ಎಂದರು. ಇನ್ನು ಪ್ರಮಾಣ ವಚನ ಸ್ವೀಕಾರ ಮಾಡಲು ಎಷ್ಟು ಜೊತೆ ಬಟ್ಟೆ ರೆಡ್ಡಿ ಮಾಡಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಬಳಿ ಹೊಸ ಡ್ರೆಸ್ ಯಾವಾಗಲೂ ಇರುತ್ತದೆ. ನಾನು ರೈತ ಯಾವ ಡ್ರೆಸ್ ಆದ್ರೆನು ಎಂದು ಉತ್ತರ ನೀಡಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಸಚಿವ ಸ್ಥಾನ ನೀಡಬೇಕು ಎನ್ನುವುದರ ಬಗ್ಗೆ ಮಾತನಾಡಿದ ಅವರು ಶೆಟ್ಟರ್ಗೆ ಸಚಿವ ಸ್ಥಾನ ನೀಡಬೇಕು, ಸಚಿವ ಸ್ಥಾನ ಕೊಟ್ಟರೆ ಏನು ತಪ್ಪಿಲ್ಲ ಅವರು ಹಿರಿಯರು ಮತ್ತು ಸಿಎಂ ಆಗಿದ್ದವರು. ಅವರಿಗೆ ಸರಿಸಮಾನವಾಗಿರುವ ಹುದ್ದೆ ನೀಡುವುದು ಸೂಕ್ತ ಎಂದರು.
ಮಾತು ಮುಂದುವರಿಸಿದ ಅವರು, ಐದು ಗ್ಯಾರಂಟಿ ಜಾರಿಗೆ ಮಾಡೇ ಮಾಡುತ್ತೇವೆ ಸ್ವಲ್ಪ ಕಾಲಾವಕಾಶ ಬೇಕು. ಐದು ಗ್ಯಾರಂಟಿ ಜಾರಿ ಆಗದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುವೆ. ಮಹದಾಯಿ ನೀರಿಗಾಗಿ ಬಿಜೆಪಿ ಹೇಳಿರುವ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಬಿಜೆಪಿ ಎಷ್ಟು ಸುಳ್ಳು ಹೇಳಿದ್ದಾರೆ ಎಷ್ಟು ಸತ್ಯ ಹೇಳಿದ್ದಾರೆ ಅಂತ ಸಮಾಲೋಚನೆ ಮಾಡಲಾಗುತ್ತಿದೆ ಎಂದರು.

ಮಹಾದಾಯಿ ವಿಚಾರವಾಗಿ ಬಿಜೆಪಿ ಯಾವುದೇ ಟೆಂಡರ್ ಕರೆದಿಲ್ಲ. ಕೇವಲ ನೋಟಿಸ್ ತೋರಿಸಲಾಗುತ್ತಿದೆ. ಅರಣ್ಯ ಇಲಾಖೆ ಯಾವುದೇ ಕ್ಲಿಯರೆನ್ಸ್ ನೀಡಿಲ್ಲ. ಭಜರಂಗದಳ ಬ್ಯಾನ್ ಮಾಡುವ ವಿಚಾರ ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನನ್ನದೇನಿದ್ದರು ರೈತರ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ. ನನ್ನ ಕ್ಷೇತ್ರದ ಅನುದಾನ ಬಗ್ಗೆ, ರಸ್ತೆಗಳ ಸುಧಾರಣೆ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿರುವೆ. ಅದರ ಬಗ್ಗೆ ದೊಡ್ಡ ದೊಡ್ಡವರು ಏನು ಮಾತನಾಡಿದ್ದಾರೆ ಅವರನ್ನು ಕೇಳಿ ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಪಟ್ಟ?
ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದುಕೊಂಡಿದೆ. ಕಲಘಟಗಿಯಲ್ಲಿ ಸಂತೋಷ ಲಾಡ್, ಧಾರವಾಡ ಗ್ರಾಮೀಣದಲ್ಲಿ ವಿನಯ್ ಕುಲಕರ್ಣಿ, ಹುಬ್ಬಳ್ಳಿ, ಧಾರವಾಡ ಪೂರ್ವ ಕ್ಷೇತ್ರದಲ್ಲಿ ಪ್ರಸಾದ ಅಬ್ಬಯ್ಯ ಹಾಗೂ ನವಲಗುಂದದಲ್ಲಿ ಎನ್.ಎಚ್.ಕೋನರಡ್ಡಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಧಾರವಾಡ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದರಿಂದ ಸಹಜವಾಗಿಯೇ ಜಿಲ್ಲೆಗೆ ಕೇವಲ ಒಂದೇ ಮಂತ್ರಿ ಸ್ಥಾನ ನೀಡಲಾಗುತ್ತದೆ. ಹೀಗಾಗಿ ಈ ಒಂದೇ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಮಂತ್ರಿಗಿರಿ ಒಲಿಯುತ್ತದೆ ಎಂಬುದೇ ಕುತೂಹಲದ ವಿಚಾರವಾಗಿದೆ.












Click it and Unblock the Notifications