ಕರ್ನಾಟಕದ ಮುಖ್ಯಮಂತ್ರಿಗೆ ಇದೆಂಥ ಸಂಕಷ್ಟ!
ಧಾರವಾಡ, ನ, 2 : ಕರ್ನಾಟಕದಲ್ಲಿ ಎಷ್ಟು ಸರ್ಕಾರಗಳು ಬದಲಾದರೂ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಶಾಶ್ವತವಾಗಿ ಉಳಿಸಿಕೊಂಡಿರುವ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎನ್ನುವ ಪದವನ್ನು ಚಂದ್ರು ಬಳಕೆ ಮಾಡಬಾರದು ಎಂದು ಸಂಘಟನೆಯೊಂದು ನಿರ್ಣಯ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮುಖ್ಯಮಂತ್ರಿ ಚಂದ್ರು ಅವರ ಹೆಸರಿನ ಹಿಂದಿರುವ ಮುಖ್ಯಮಂತ್ರಿ ಎಂಬ ಪದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಚಂದ್ರು ಇನ್ನು ಮುಂದೆ ಮುಖ್ಯಮಂತ್ರಿ ಚಂದ್ರು ಎಂಬ ಹೆಸರನ್ನು ಬಳಕೆ ಮಾಡಬಾರದು ಎಂದು ಸಂಘ ಒತ್ತಾಯಿಸಿದೆ. ಅಷ್ಟೆಅಲ್ಲ, ಈ ಕುರಿತು ನಿರ್ಣಯ ಮಂಡಿಸಿ, ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ಇದರಿಂದಾಗಿ ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ 'ಮುಖ್ಯಮಂತ್ರಿ' ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿರುವ ಚಂದ್ರು ಅವರ ಹೆಸರು ಹೊಸ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಎನ್ನುವ ಪದ ಸಂವಿಧಾನಬದ್ಧವಾಗಿ ರಾಜ್ಯದ ಅಧಿಕಾರ ನಡೆಸುವ ಮುಖ್ಯಮಂತ್ರಿಗೆ ಮಾತ್ರ ಬಳಕೆಯಾಗಬೇಕು ಎಂಬುದು ಕರ್ನಾಟಕ ವಿದ್ಯಾವರ್ಧಕ ಸಂಘದ ವಾದ.
ಕಲಾವಿದ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರು ಅವರು ರಂಗಭೂಮಿ ಮತ್ತು ಚಿತ್ರಗಳಲ್ಲಿ ನಟಿಸಿ ತಮ್ಮ ಹೆಸರಿನ ಮೊದಲು ಮುಖ್ಯಮಂತ್ರಿ ಎಂದು ಸೇರಿಸಿಕೊಂಡಿರುವುದು ಉಚಿತವಲ್ಲ. ಚಂದ್ರು ಅವರು ಇನ್ನು ಮುಂದೆ ತಮ್ಮ ಹೆಸರಿನ ಹಿಂದಿರುವ ಮುಖ್ಯಮಂತ್ರಿ ಎನ್ನುವ ಪದವನ್ನು ಬಳಕೆ ಮಾಡಬಾರದು ಎಂದು ಸಂಘ ಒತ್ತಾಯಿಸಿದೆ.
ಇದರಿಂದ ಕರ್ನಾಟಕದಲ್ಲಿ ಎಷ್ಟು ಸರ್ಕಾರಗಳು ಬದಲಾದರೂ ತಮ್ಮ ಮುಖ್ಯಮಂತ್ರಿ ಸ್ಥಾವನನ್ನು ಭದ್ರವಾಗಿ ಉಳಿಸಿಕೊಂಡಿದ್ದ ಮುಖ್ಯಮಂತ್ರಿ ಚಂದ್ರು ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಸರ್ಕಾರಕ್ಕೆ ಸದ್ಯ ಮುಖ್ಯಮಂತ್ರಿ ಹೆಸರಿನ ವಿರೋಧದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ಚಂದ್ರು ಅವರಿಂದ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳುತ್ತದೆಯೇ ಕಾದು ನೋಡಬೇಕು.
ಚಂದ್ರು ಮುಖ್ಯಮಂತ್ರಿಯಾಗಿದ್ದು ಹೇಗೆ : ಸದ್ಯ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಪ್ರಸಿದ್ಧವಾಗಿರುವ ಮುಖ್ಯಮಂತ್ರಿ ಚಂದ್ರು ಅವರ ಮೂಲ ಹೆಸರು ಚಂದ್ರಶೇಖರ್. ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಮುಖ್ಯಮಂತ್ರಿ ಚಂದ್ರು ಕಾರ್ಯ ನಿರ್ವಹಿಸುತ್ತಿದ್ದಾರೆ.
ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಚಂದ್ರಶೇಖರ್ ಒಮ್ಮೆ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಲೋಹಿತಾಶ್ವ ಅನಾರೋಗ್ಯಕ್ಕೆ ಒಳಗಾದದ್ದರಿಂದ ಮುಖ್ಯಮಂತ್ರಿ ಪಾತ್ರ ಮಾಡಬೇಕಾಗಿ ಬಂತು. ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ ಚಂದ್ರು ಅವರು ಮುಂದು ರಂಗಭೂಮಿಯಲ್ಲಿ ಮುಖ್ಯಮಂತ್ರಿ ಚಂದ್ರು ಎಂದೇ ಪ್ರಸಿದ್ಧರಾದರು. ನಂತರ ಸಿನಿಮಾ, ರಾಜಕೀಯ ರಂಗ ಪ್ರವೇಶಿಸಿ, ಅದೇ ಹೆಸರನ್ನು ಉಳಿಸಿಕೊಂಡಿದ್ದಾರೆ. (ಮುಖ್ಯಮಂತ್ರಿ ಚಂದ್ರು ಹಲ್ಲುಕಿತ್ತ ಹಾವಿನಂತಾಗಿದ್ದಾರೆ)












Click it and Unblock the Notifications