ಧಾರವಾಡದಲ್ಲಿ ನಾಪತ್ತೆಯಾಗಿದ್ದ ಮಗು ಚಿತ್ತೂರಿನಲ್ಲಿ ಪತ್ತೆ
ಧಾರವಾಡ, ನವೆಂಬರ್ 13 : ಧಾರವಾಡದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆ ಮತ್ತು 2 ವರ್ಷದ ಮಗುವನ್ನು ಪತ್ತೆ ಹಚ್ಚುವಲ್ಲಿ ಗುಡಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕುಂದಗೋಳ ತಾಲೂಕಿನ ಸಣ್ಣಹನಮಂತಪ್ಪ ಎಂಬುವವರು ಗುಡಗೇರಿ ಪೊಲೀಸ್ ಠಾಣೆಯಗೆ ಮಗು ಮತ್ತು ಮಹಿಳೆ ನಾಪತ್ತೆಯಾದ ಕುರಿತು ದೂರು ನೀಡಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರ ಮಾರ್ಗದರ್ಶನದಲ್ಲಿ ಧಾರವಾಡ ಗ್ರಾಮೀಣ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರಾಮನಗೌಡ ಹಟ್ಟಿ ಅವರ ನೇತೃತ್ವದಲ್ಲಿ ತನಿಖೆಗಾಗಿ ತಂಡವನ್ನು ರಚನೆ ಮಾಡಿದರು.

10/11/2018 ರಂದು ಕಾಣೆಯಾದ ಮಹಿಳೆ ಯಲ್ಲಮ್ಮ (26) ಕರ್ನಾಟಕದಲ್ಲಿ ಪತ್ತೆಯಾಗಲಿಲ್ಲ. ಆಕೆ ಆಂದ್ರಪ್ರದೇಶದ ತಿರುಪತಿಯಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ಪತ್ತೆ ಹಚ್ಚಲಾಯಿತು.
ತನಿಖಾ ತಂಡ ತಿರುಪತಿಗೆ ಹೋದಾಗ ಮಹಿಳೆ ಪತ್ತೆಯಾದಳು. ಆದರೆ, ಆಕೆ ಮಾನಸಿಕ ಅಸ್ವಸ್ಥಳಾಗಿದ್ದು, ಮಗು ಅವಳ ಬಳಿ ಇರಲಿಲ್ಲ. ಆದ್ದರಿಂದ, ಪೊಲೀಸರು 2 ವರ್ಷದ ಫಕಿರೇಶ ಸಣ್ಣಹನುಮಂತಪ್ಪ ಕಂಬಳಿಗಾಗಿ ಹುಡುಕಾಟ ಆರಂಭಿಸಿದರು.
ಮಗು ಚಿತ್ತೂರು ಜಿಲ್ಲೆಯ ಶಿಶು ವಿಹಾರದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಲ್ಲಿಗೆ ತೆರಳಿದ ಪೊಲೀಸರು ಮಗುವನ್ನು ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಕ್ಕೆ ಜನರು ಮತ್ತು ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ನವೀನ ಐ ಜಕ್ಕಲಿ ಪಿಎಸ್ಐ ಹಾಗೂ ಅವರ ವಿಷೇಶ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.












Click it and Unblock the Notifications