ಕೊಂದಗೋಳ: ಮಗುವಿನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಮುಸ್ಲಿಂ ಕುಟುಂಬ
ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದು ಮಗುವಿನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಗಮನ ಸೆಳೆದಿದೆ.
ಧಾರವಾಡ, ಫೆಬ್ರವರಿ, 01: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದು ಅರ್ಥಪೂರ್ಣವಾಗಿ ಮಗನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದೆ. ಆರಿಫ್ ಲಾಲಸಾಬ್ ನದಾಫ್ ಎನ್ನುವ ಬಾಲಕನ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸಹಾಯ ಹಸ್ತ ಚಾಚುವ ಮೂಲಕ ಮುಸ್ಲಿಂ ಕುಟುಂಬ ಮಾದರಿಯಾಗಿದೆ.
ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ನಶಿಸಿ ಹೋಗುತ್ತಿರುವ ಇಂದಿನ ದಿನಮಾನದಲ್ಲಿ ಮಗನ ಹುಟ್ಟುಹಬ್ಬದ ಪ್ರಯುಕ್ತ ತಂದೆ ಲಾಲಸಾಬ ನದಾಫ್, ಚಿಕ್ಕನರ್ತಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 25 ಕುರ್ಚಿ ದಾನ ಮಾಡುವ ಮೂಲಕ ಮಗನ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು.
ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ
ಅಂಗನವಾಡಿ ಕೇಂದ್ರದಲ್ಲೇ ಪುಟ್ಟ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮಕ್ಕಳ ಸಂತಸಕ್ಕೆ ಕಾರಣವಾದರು. ಹಲವು ವರ್ಷಗಳಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲದ್ದನ್ನು ಗಮನಿಸಿದ ಲಾಲಸಾಬ, ಈ ರೀತಿ ವಿನೂತನವಾಗಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೆ, ಉಳ್ಳವರು, ಧನಿಕರು ಇದೇ ರೀತಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಂತಹ ಸಂದರ್ಭಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಸಹಾಯ ಹಸ್ತ ಚಾಚಿದರೆ ಅದೆಷ್ಟೊ ಬಡ ಮಕ್ಕಳ ಶೈಕ್ಷಣಕ ಜೀವನಕ್ಕೆ ಸಹಾಯವಾಗುತ್ತದೆ ಅನ್ನುವುದನ್ನು ಲಾಲಸಾಬ ತೋರಿಸಿಸಿಕೊಟ್ಟಿದ್ದಾರೆ.
ಮಹದಾಯಿ ಜಲ ವಿವಾದದ ಬಗ್ಗೆ ಹುಬ್ಬಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?, ಇಲ್ಲಿದೆ ವಿವರ
ಮಗುವಿನ ಕುಟುಂಬಸ್ಥರ ವಿವರ
ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಅನ್ನಪೂರ್ಣ ಮಡಿವಾಳರ, ಅನುಸೂಯಾ, ಸಹಾಯಕಿ ದ್ಯಾಮಕ್ಕ ಮುಂದಿನಮಮನಿ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುಳಾ ರೊಟ್ಟಿಗವಾಡ, ಸರೋಜಾ ಪಾಟೀಲ ಹಾಗೂ ಸ್ಥಳೀಯರಾದ ದೇವಕ್ಕ ಬಡಿಗೇರ, ಬಸಮ್ಮ ಅಡರಕಟ್ಟಿ, ಶಾಂತಮ್ಮ ಮಠದ, ಮಂಜುನಾಥ್ ಶಾನವಾಡ, ದೇವಪ್ಪ ಶಾನವಾಡ, ಬಸವರಾಜ ಅರಳಿಕಟ್ಟಿ, ಪ್ರಕಾಳ ಬಿಳೆಬಾಳ, ಕಲ್ಮೇಶ ಬೆಳವಟಗಿ ಹಾಗೂ ಗ್ರಾಮದ ಜನರು ಮತ್ತು ನದಾಫ ಕುಟುಂಬದವರು ಹಾಜರಿದ್ದರು.