Shivaratri: ಕಾಶಿ ವಿಶ್ವನಾಥ ಮಾದರಿಯ ಶಿವಲಿಂಗಕ್ಕೆ ಮನಸೋತ ಭಕ್ತರು, ಕೇಂದ್ರ ಸಚಿವರಿಂದ ವಿಶೇಷ ಪೂಜೆ
ಹುಬ್ಬಳ್ಳಿ, ಫೆಬ್ರವರಿ 26: ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ವಾಣಿಜ್ಯ ನಗರಿ ಹುಬ್ಬಳ್ಳಿಯು ಬುಧವಾರ (ಫೆಬ್ರವರಿ 26) ಭಕ್ತಿ ಕೇಂದ್ರವಾಗಿ ಗಮನ ಸೆಳೆಯಿತು. ದೇಶಪಾಂಡೆ ನಗರದ ಜಿಮಖಾನಾ ಮೈದಾನವಂತೂ ಥೇಟ್ ಶ್ರೀ ಕಾಶಿ ವಿಶ್ವನಾಥೇಶ್ವರ ಸನ್ನಿಧಿಯಂತೆ ಕಂಗೊಳಿಸುತ್ತಿತ್ತು. ಕಾಶಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶಿವರಾತ್ರಿ ಮಹೋತ್ಸವದಲ್ಲಿ ಸಮ್ಮುಖದಲ್ಲಿ ಕಾಶಿ ವಿಶ್ವೇಶ್ವರ ದೇಗುಲದ ಮಾದರಿಯಲ್ಲೇ ಪ್ರತಿಷ್ಠಾಪಿಸಿದ ಜ್ಯೋತಿರ್ಲಿಂಗ ರುದ್ರಾಭಿಷೇಕ ನೆರವೇರಿಸಿ ಚಾಲನೆ ನೀಡಲಾಯಿತು. ಇಂದಿನ ಶಿವರಾತ್ರಿ ಅತ್ಯಂತ ವೈಭವದಿಂದ ಆಚರಿಸಲಾಯಿತು.

ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ನಡೆಯಿತು. ಈ ಕಾಶಿ ವಿಶ್ವನಾಥೇಶ್ವರ ಜ್ಯೋತಿರ್ಲಿಂಗಕ್ಕೆ ಅವರ ಇಂದು ಬೆಳಗ್ಗೆಯೇ ರುದ್ರಾಭಿಷೇಕ ಪೂಜೆ ನೆರವೇರಿಸಿ ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿದರು. ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ, ಹೂವಿನ ಹಾರ ಅರ್ಪಿಸಿ, ಕರ್ಪೂರದಾರತಿ ಬೆಳಗಿ ನಮಸ್ಕರಿಸಿದರು.
ಕಾಶಿ ಮಾದರಿಯ ಈ ಜ್ಯೋತಿರ್ಲಿಂಗಕ್ಕೆ ಮುಂಡಗೋಡ ಹಿರೇಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಮಂತ್ರೋಪದೇಶ ಸಹಿತ ರುದ್ರಾಭಿಷೇಕ ನೆರವೇರಿಸಿದ ಬಳಿಕ ಸಚಿವ ಪ್ರಲ್ಹಾದ ಜೋಶಿ ಅವರೇ ಖುದ್ದು ಮುಂದೆ ನಿಂತು ಶಿವಸದ್ಭಕ್ತರಿಗೆ ಪ್ರಸಾದ ಮತ್ತು ಪಂಚಮುಖಿ ರುದ್ರಾಕ್ಷಿ ವಿತರಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಪಾಲಿಕೆ ಹಿರಿಯ ಸದಸ್ಯ ವೀರಣ್ಣ ಸವಡಿ, ಮಾಜಿ ಶಾಸಕ ಅಶೋಕ ಕಾಟವೆ, ವಸಂತ ನಾಡಜೋಶಿ, ನಾರಾಯಣ ಜರತಾರಘರ ಹಾಗೂ ಕ್ಷಮತಾ ಸಂಸ್ಥೆ ಮತ್ತು ಬಿಜೆಪಿ ಮುಖಂಡರು, ಪದಾಧಿಕಾರಿಗಳು ಸಚಿವರೊಂದಿಗೆ ಈ ವಿಶೇಷ ಧಾರ್ಮಿಕ ಕೈಂಕರ್ಯದಲ್ಲಿ ಸಾಥ್ ನೀಡಿದರು.

ನಗರದಲ್ಲಿ ಎಲ್ಲೆಲ್ಲೂ ಶಿವ ಸ್ಮರಣೆ
ಹುಬ್ಬಳ್ಳಿಯಲ್ಲಿ ಅನೇಕ ಶಿವ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಇಂದು ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ, ಗೋಕುಲ ರಸ್ತೆಯ ಶಿವಪುರ ಕಾಲೊನಿಯ ಬೃಹತ್ ಶಿವನ ಮೂರ್ತಿ, ವಿಶ್ವೇಶ್ವರನಗರದ ವಿಶ್ವನಾಥ ದೇವಸ್ಥಾನ, ಉಣಕಲ್ನ ಬಸವೇಶ್ವರ ದೇಗುಲ, ಹಳೇ ಕೋರ್ಟ್ ವೃತ್ತದ ಸಾಯಿಮಂದಿರ ಸೇರಿದಂತೆ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿತು. ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಹಬ್ಬದ ನಿಮಿತ್ತ ಮೂರ್ತಿಗಳಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.
ಮಂಗಳವಾರ ತಡರಾತ್ರಿಯಿಂದ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. ಓಂ ನಮಃ ಶಿವಾಯ ಎಲ್ಲೆಡೆ ಅನುರಣಿಸುತ್ತಿತ್ತು.
ಭಕ್ತರು ದೇವಸ್ಥಾನಗಳಿಗೆ ಕುಟುಂಬದೊಂದಿಗೆ ತೆರಳಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಶಿವನ ಸ್ಮರಿಸುವ ಭಕ್ತಿಗೀತೆಗಳು, ಭಜನೆಗಳು ಹಾಗೂ ಹಾಡುಗಳು ಎಲ್ಲೆಡೆ ಕೇಳಿ ಬರುತ್ತಿತ್ತು. ಕೆಲ ದೇವಸ್ಥಾನದ ಆಡಳಿತ ಮಂಡಳಿಗಳು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಿದ್ದವು. ಸಂಜೆ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.












Click it and Unblock the Notifications