ಧಾರವಾಡದ ಗರಗ ಖಾದಿ ಕೇಂದ್ರಕ್ಕೆ ಶುಕ್ರದೆಸೆ: ಬಟ್ಟೆಯಷ್ಟೇ ಅಲ್ಲ, ರಾಷ್ಟ್ರಧ್ವಜ ತಯಾರಿಕೆಗೂ ಪರವಾನಿಗೆ
ಹುಬ್ಬಳ್ಳಿ, ಆಗಸ್ಟ್ 11: ಇಡೀ ದೇಶದಲ್ಲೇ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಸಂಯುಕ್ತ ಸಂಘದಲ್ಲಿ ಮಾತ್ರ ರಾಷ್ಟ್ರಧ್ವಜ ತಯಾರು ಮಾಡಲಾಗುತಿತ್ತು ಈಗ ಧಾರವಾಡದ ಗರಗ ಖಾದಿ ಕೇಂದ್ರಕ್ಕೂ ರಾಷ್ಟ್ರಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದೆ. ಈಗ ಗರಗ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಬಟ್ಟೆಯ ಜೊತೆಗೆ ರಾಷ್ಟ್ರಧ್ವಜ ಕೂಡ ತಯಾರು ಮಾಡಬಹುದಾಗಿದೆ.
ಇಡೀ ದೇಶದಲ್ಲಿ ಹಾರಾಡುವ ಖಾದಿಯ ತ್ರಿವರ್ಣ ಧ್ವಜದ ಬಟ್ಟೆ ತಯಾರಾಗುವುದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ. ಇಷ್ಟು ದಿನ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ಮಾತ್ರವೇ ತಯಾರಿಸುತ್ತಿದ್ದ ಗರಗ ಗ್ರಾಮದಲ್ಲೀಗ ತ್ರಿವರ್ಣ ಧ್ವಜ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ಇದಕ್ಕೆ ಅನುಮತಿ ಸಿಕ್ಕಿದ್ದೇ ಇದಕ್ಕೆ ಕಾರಣ. ಇದರಿಂದಾಗಿ ಗ್ರಾಮದ ಜನರಿಗೆ ತಮ್ಮೂರಿನ ಈ ಧ್ವಜದ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗಿದ್ದರೆ, ಅತ್ತ ತ್ರಿವರ್ಣ ಧ್ವಜ ತಯಾರಿಸುವ ಸಿಬ್ಬಂದಿಗೆ ಸಂತಸ ಇಮ್ಮಡಿಯಾಗಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ 1954ರಲ್ಲಿ ಖಾದಿ ಕೇಂದ್ರ ಸ್ಥಾಪನೆಯಾಗಿತ್ತು. ಅಂದಿನಿಂದಲೇ ಈ ಸಂಘ ರಾಷ್ಟ್ರ ಧ್ವಜಕ್ಕೆ ಬೇಕಾದ ಬಟ್ಟೆಯನ್ನು ನೇಯ್ದುಕೊಡುವ ಅಧಿಕೃತ ಸಂಸ್ಥೆಯ ಮಾನ್ಯತೆ ಪಡೆದುಕೊಂಡಿತ್ತು. ಬಟ್ಟೆಗೆ ಬೇಡಿಕೆ ಹೆಚ್ಚಾದಂತೆಲ್ಲ ಈ ಸಂಘದಲ್ಲಿ ದುಡಿಯುವವರ ಸಂಖ್ಯೆಯೂ ಬೆಳೆಯುತ್ತ ಹೋಗಿತ್ತು. ನಂತರ 1974ರಲ್ಲಿ ಈ ಸಂಘವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ, ಅಮ್ಮಿನಬಾವಿಯಲ್ಲಿಯೂ ಬಟ್ಟೆ ನೇಯ್ಗೆ ಆರಂಭಿಸಲಾಗಿತ್ತು. ಆದರೆ ಇಲ್ಲಿನ ಬಟ್ಟೆಯಲ್ಲಿ ರಾಷ್ಟ್ರಧ್ವಜ ತಯಾರಾಗುತ್ತಿತ್ತಾದರೂ ಯಾವತ್ತೂ ಸಹ ಗರಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಿಸಲು ಅಧಿಕೃತ ಅನುಮತಿ ಲಭಿಸಿರಲಿಲ್ಲ.
ಇಲ್ಲಿ ಬಟ್ಟೆ ತಯಾರಿಸಿ ಮುಂಬೈನಲ್ಲಿರೋ ಖಾದಿ ಸಂಘಕ್ಕೆ ರವಾನಿಸಲಾಗುತ್ತಿತ್ತು. ಅಲ್ಲಿ ತ್ರಿವರ್ಣ ಧ್ವಜ ತಯಾರಾಗಿ, ಅಲ್ಲಿಂದ ರಾಷ್ಟ್ರದ ವಿವಿಧ ಕಡೆಗಳಿಗೆ ರವಾನೆಯಾಗುತ್ತಿತ್ತು. ಹೀಗಾಗಿ ಗರಗ ಖಾದಿ ಸಂಘದವರು ರಾಷ್ಟ್ರ ಧ್ವಜದ ಜೊತೆಗೆ ಬೇರೆ ಬೇರೆ ಖಾದಿ ಉತ್ಪನ್ನಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಆದರೆ ತಾವು ಕೂಡ ಸ್ವತಂತ್ರವಾಗಿ ಧ್ವಜ ತಯಾರಿಸಬೇಕು ಎನ್ನುವ ಬಯಕೆ ಬಹಳ ದಿನಗಳಿಂದಲೇ ಇತ್ತು. ಅದೀಗ ಕೂಡಿ ಬಂದಿದೆ.
ಕಳೆದ ತಿಂಗಳು ಕೇಂದ್ರ ಖಾದಿ ಆಯೋಗ ಮತ್ತು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ಅನುಮತಿ ಸಿಕ್ಕಿದ್ದು, ಇಲ್ಲಿಯೇ ಈಗ ಬಟ್ಟೆಗೆ ಬಣ್ಣ ಹಾಕುವುದಷ್ಟೇ ಅಲ್ಲ, ಇಲ್ಲಿಯೇ ಧ್ವಜ ತಯಾರಿಸಿ ಬೇಡಿಕೆಗೆ ಅನುಗುಣವಾಗಿ ರವಾನೆ ಮಾಡಲಾಗುತ್ತಿದೆ. ಇದರಿಂದಾಗಿ ಕೇಂದ್ರದ ಸಿಬ್ಬಂದಿಯಲ್ಲಿ ಸಾಕಷ್ಟು ಖುಷಿ ಕಂಡು ಬರುತ್ತಿದೆ.

ಈ ಸಂಘಕ್ಕೆ ಒಂದು ಕಾಲಕ್ಕೆ ಬೇಡಿಕೆ ಇದ್ದಾಗ 450 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಾಲಿಸ್ಟರ್ ಧ್ವಜಗಳ ಬಳಕೆಗೂ ಕೇಂದ್ರ ಸರಕಾರ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಹೋರಾಟ ಮಾಡಬೇಕಾಗಿತ್ತು. ಆದರೆ ಇದೇ ಸಂಘಕ್ಕೆ ಈಗ ಮತ್ತೆ ಬೇಡಿಕೆ ಬಂದಿದೆ.
ಇದೀಗ ಇಲ್ಲಿಯೇ ಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದ್ದಕ್ಕೆ ನಿತ್ಯವೂ ಧ್ವಜ ತಯಾರಿಕೆಯ ಕೆಲಸ ಭರದಿಂದ ಸಾಗಿದೆ. ಇದೀಗ ಆಗಸ್ಟ್ 15 ಸಮೀಪಿಸಿರೋದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಇದೆ. ಇದೀಗ 2 ಅಡಿ ಅಗಲ 3 ಅಡಿ ಉದ್ದದ ಧ್ವಜ ತಯಾರಿಕೆಗೆ ಮಾತ್ರ ಅನುಮತಿ ಸಿಕ್ಕಿದ್ದು, ಆ ಗಾತ್ರದ ಧ್ವಜಗಳ ತಯಾರಿ ಭರದಿಂದ ಸಾಗಿದೆ. ಇದರಿಂದಾಗಿ ಸಂಘದಲ್ಲಿ ಈಗ ಮತ್ತೆ ಸಂಚಲನ ಶುರುವಾಗಿದ್ದು, ಕಳೆದ ವರ್ಷ ಸಂಕಷ್ಟದಲ್ಲಿದ್ದ ಸಂಸ್ಥೆ ಅಂಗಳದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
ರಾಷ್ಟ್ರಧ್ವಜ ತಯಾರಿಸಬೇಕಾದರೆ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಅವುಗಳೆಲ್ಲವನ್ನೂ ಪಾಲಿಸಿದರಷ್ಟೇ ಅನುಮತಿ ಸಿಗುತ್ತದೆ. ಇದುವರೆಗೂ ಧ್ವಜದ ಬಟ್ಟೆಯನ್ನಷ್ಟೇ ತಯಾರಿಸುತ್ತಿದ್ದ ಸಂಸ್ಥೆಯಲ್ಲೀಗ ತಿರಂಗಾ ಅರಳುತ್ತಿದೆ. ಇದರಿಂದಾಗಿ ಸಹಜವಾಗಿ ಸಿಬ್ಬಂದಿಗೆ ಖುಷಿಯಾಗಿದೆ. ಇನ್ನು ಮುಂದೆ ಗರಗ ಖಾದಿ ಸಂಘದಲ್ಲಿ ತಯಾರಾಗೋ ಧ್ವಜಗಳು ರಾಷ್ಟ್ರದಾದ್ಯಂತ ಹಾರಾಡಲು ಸಿದ್ಧವಾಗಿರುವುದು ಸಂತಸದ ವಿಚಾರವೇ ಸರಿ.
ಸಂಘದ ಅಧ್ಯಕ್ಷ ಈಶ್ವಪ್ಪ ಇಟಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಯಾರ ಸಹಾಯ ಪಡೆಯದೇ ಇದೀಗ ರಾಷ್ಟ್ರಧ್ವಜ ತಯಾರು ಮಾಡುವುದನ್ನು ಕಲಿತಿದ್ದೇವೆ.ಇದುವರೆಗೂ ನಾವು ಧ್ವಜಕ್ಕೆ ಬೇಕಾಗಿದ್ದ ಖಾದಿ ಬಟ್ಟೆಯನ್ನಷ್ಟೇ ತಯಾರಿಸುತ್ತಿದ್ದೆವು. ಆದರೆ ಇದೀಗ ಅದೇ ಬಟ್ಟೆಯಿಂದ ನಮ್ಮ ಹೆಮ್ಮೆಯ ರಾಷ್ಟ್ರಧ್ವಜವನ್ನು ಕೂಡ ತಯಾರಿಸುತ್ತಿದ್ದೇವೆ. ಇಲ್ಲಿನ ನಮ್ಮ ಸಿಬ್ಬಂದಿಯೇ ಎಲ್ಲವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೀಡಿರುವ ಸೂಚನೆ ಪ್ರಕಾರವೇ ಉತ್ತಮ ಗುಣಮಟ್ಟದ ಖಾದಿ ಧ್ವಜವನ್ನು ತಯಾರಿಸುತ್ತಿದ್ದೇವೆ. ಇದೀಗ ನಮ್ಮ ಕೇಂದ್ರದಲ್ಲಿ ತಯಾರಾದ ಧ್ವಜಗಳು ರಾಷ್ಟ್ರಾದ್ಯಂತ ಹಾರಾಡುತ್ತವೆ ಎನ್ನುವುದನ್ನು ನೆನೆಪಿಸಿಕೊಂಡರೆ ಖುಷಿಯಾಗುತ್ತದೆ ಎಂದರು.
ಇದೀಗ ನಮ್ಮೂರಲ್ಲಿಯೇ ರಾಷ್ಟ್ರಧ್ವಜ ತಯಾರಾಗುತ್ತಿರುವುದು ನಮಗೆಲ್ಲ ಹೆಮ್ಮೆ ತಂದಿದೆ. ಇದರ ಹಿಂದೆ ಸಾಕಷ್ಟು ಜನರ ಶ್ರಮ ಹಾಗೂ ಪ್ರಯತ್ನವಿದೆ. ರಾಷ್ಟ್ರಧ್ವಜ ತಯಾರು ಮಾಡುವುದು ಅಂದರೆ ಅದು ನಿಜಕ್ಕೂ ತಪಸ್ಸು ಇದ್ದಂತೆ. ಕಳೆದ ವರ್ಷ ಪ್ಲಾಸ್ಟಿಕ್ ಧ್ವಜಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದಾಗ ಇಲ್ಲಿನ ಖಾದಿ ಸಂಘಕ್ಕೆ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಇನ್ನೇನು ಈ ಸಂಘದ ಕಥೆ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಇದೀಗ ತಿರಂಗಾ ತಯಾರಿಸಲು ಇದಲ್ಲಿಯೇ ಅನುಮತಿ ಸಿಕ್ಕಿದ್ದು ಮತ್ತೆ ಜೀವ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಗಾತ್ರದ ಧ್ವಜ ತಯಾರಿಕೆಯೂ ಇಲ್ಲಿ ನಡೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications