ಪಿಸ್ತೂಲ್ ಮಾರಾಟ: ವಿಜಯಪುರದ ಶಿಕ್ಷಕ ಹುಬ್ಬಳ್ಳಿ ಪೊಲೀಸರ ಬಲೆಗೆ
ಹುಬ್ಬಳ್ಳಿ, ಮೇ 12: ನಗರದ ನವನಗರ ಪೊಲೀಸ್ ಠಾಣೆಯ ಪೊಲೀಸರು ವಿಜಯಪುರದ ಮೂಲದ ಇಬ್ಬರನ್ನು ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಗುರುವಾರ ಬಂಧಿಸಲಾಗಿದೆ.
ಬಂಧಿತರು ನಗರದ ರಾಷ್ಟ್ರೀಯ ಹೆದ್ದಾರಿಯ ಭೈರಿದೇವರಕೊಪ್ಪದ ದರ್ಗಾ ಬಳಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುವಾಗ ಸಿಕ್ಕಿದ್ದಾರೆ. ಬಂಧಿತರನ್ನು ವಿಜಯಪುರದ ಖಾಸಗಿ ಶಾಲೆಯ ಶಿಕ್ಷಕ ಅಫ್ಜರ್ ಅಲಿ ಬಾಬುಸಾಬ್ ಕೊಡಗಿ (28), ಕೆಎಸ್ಆರ್ ಟಿಸಿ ನೌಕರ ವಾಸೀಮ್ ಶೆರೇವಾಡ (23) ಗುರುತಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಪಾಂಡುರಂಗ ರಾಣಿ ತಿಳಿಸಿದ್ದಾರೆ.[ಹುಬ್ಬಳ್ಳಿ: ಓಲಾ, ಊಬರ್ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಚಾಲಕರು]

ಬಂಧಿತರಿಂದ 80 ಸಾವಿರ ರೂ. ಮೌಲ್ಯದ ಒಂದು ಪಿಸ್ತೂಲ್, ಮೂರು ಸಜೀವ ಗುಂಡುಗಳು ಮತ್ತು 25 ಸಾವಿರ ರೂ. ಮೌಲ್ಯದ ಒಂದು ಬೈಕ್ (ಕೆಎ28,ಎಸ್5044) ವಶಪಡಿಸಿಕೊಳ್ಳಲಾಗಿದೆ.
ಸಿಕ್ಕಿಬಿದ್ದಿದ್ದು ಹೀಗೆ : ಎಂದಿನಂತೆ ಭೈರಿದೇವರಕೊಪ್ಪದ ದರ್ಗಾ ಬಳಿ ಎಪಿಎಂಸಿ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ಹುಬ್ಬಳ್ಳಿ ಕಡೆಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಆರೋಪಿಗಳು ಪೊಲೀಸರನ್ನು ನೋಡಿ ಬೈಕ್ ತಿರುಗಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾರೆ.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ನಾಯಕ ಮತ್ತು ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ತಪಾಸಣೆ ನಡೆಸಿದಾಗ ಪಿಸ್ತೂಲ್ ಹಾಗೂ ಗುಂಡುಗಳು ಸಿಕ್ಕಿವೆ. ತಕ್ಷಣ ಠಾಣೆಗೆ ಕರೆದೊಯ್ಡು ವಿಚಾರಿಸಿದಾಗ ಬಂದೂಕು ಮಾರಾಟ ಮಾಡಲು ಬಂದಿರುವ ವಿಷಯವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಈ ಹಿಂದೆ ನಗರದ ಕೇಶ್ವಾಪುರ ಠಾಣೆಯ ಪೊಲೀಸರು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ನಗರದ ಇಬ್ಬರನ್ನು ಬಂಧಿಸಿದ್ದರು. ಪ್ರಕರಣದ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವ ಸಂಶಯ ವ್ಯಕ್ತವಾಗಿರುವುದರಿಂದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಆಯುಕ್ತ ಪಾಂಡುರಂಗ ರಾಣಿ ತಿಳಿಸಿದ್ದಾರೆ.












Click it and Unblock the Notifications