ಹುಬ್ಬಳ್ಳಿ ಜನರ ಭಕ್ತಿಭಾವದ ಮಜ್ಜನದಲ್ಲಿ ಮಿಂದೆದ್ದ ಶಿವ
ಹುಬ್ಬಳ್ಳಿ,ಮಾರ್ಚ್,07: ಇಡೀ ನಗರವೇ ಶಿವನ ಧ್ಯಾನದಲ್ಲಿ ಮಗ್ನವಾಗಿದೆ. ಎಲ್ಲೆಡೆ ಓಂ ನಮಃ ಶಿವಾಯ, ಶಿವಾಯ ನಮಃ ಮಂತ್ರಘೋಷಗಳು ಕೇಳಿ ಬರುತ್ತಿವೆ, ಶಿವನ ದೇವಾಲಯದಲ್ಲಿ ಹಲವು ಹೋಮ-ಹವನ ನಡೆಯುತ್ತಿವೆ. ಶಿವನ ಮೂರ್ತಿ, ಲಿಂಗಗಳು ಹಲವಾರು ಮಜ್ಜನಗಳಲ್ಲಿ ಮಿಂದೇಳುತ್ತಿವೆ.
ಶಿವನ ದೇವಾಲಯಗಳಲ್ಲಿ ಭಕ್ತರು ತುಂಬಿತುಳುಕುತ್ತಿದ್ದು, ದೇವಾಲಯಗಳಲ್ಲಿ ಶಿವನಿಗೆ ವಿವಿಧ ಹೂ, ಬಿಲ್ವಾಪತ್ರೆಗಳಿಂದ ಮಾಡಿದ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಕ್ಕಳು, ವೃದ್ಧರೂ ಪ್ರತಿಯೊಬ್ಬರು ಮಹಾಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಜಾಗರಣೆಯ ಪ್ರಯುಕ್ತ ಹಲವಾರು ದೇವಾಲಯಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.[ಶಿವರಾತ್ರಿ : ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ ಗೊತ್ತಾ?]
ಒಟ್ಟಿನಲ್ಲಿ ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬದ ಮುಂಜಾನೆಯಿಂದಲೇ ಪೂಜೆ ಪುನಸ್ಕಾರಗಳು ಆರಂಭವಾಗಿದ್ದವು. ಹಣ್ಣು-ಕಾಯಿ ಹಿಡಿದ ಜನರು ಸಾಲುಗಟ್ಟಿ ನಿಂತು ಶಿವನಿಗೆ ಪೂಜೆ ಸಲ್ಲಿಸಿದರು. ಬನ್ನಿ ಹುಬ್ಬಳ್ಳಿಯ ಶಿವರಾತ್ರಿ ಸಂಭ್ರಮ ಹೇಗಿದೆ ನೋಡೋಣ.
ಶಿವಲಿಂಗಕ್ಕೆ ಭಕ್ತರಿಂದ ಎಳನೀರು, ಹಾಲಿನ ಮಜ್ಜನ
ಹುಬ್ಬಳ್ಳಿಯ ಶಿವದೇವಾಲಯದಲ್ಲಿರುವ ಲಿಂಗಕ್ಕೆ ನೂರಾರು ಭಕ್ತರಿಂದ ಹಾಲು, ಎಳನೀರಿನ ಅಭಿಷೇಕ ನಡೆಯಿತು.
ಜನರನ್ನು ಸೆಳೆದ ಶ್ವೇತ ಶಿವಮೂರ್ತಿ
ಹುಬ್ಬಳ್ಳಿಯ ಶಿವಪುರ ಉದ್ಯಾನವನದ ಬಳಿ ಇರುವ ಶಿವನ ಮೂರ್ತಿಯು ಜನರನ್ನು ತನ್ನತ್ತ ಸೆಳೆಯುತ್ತಿದೆ. ಹೂವಿನ ಮಾಲೆ, ಬಣ್ಣದ ಬಣ್ಣದ, ಪುಟ್ಟ ಪುಟ್ಟ ಬಣ್ಣದ ದೀಪಗಳಿಂದ ಕಳೆಗಟ್ಟಿರುವ ಶ್ವೇತ ವರ್ಣದ ಶಿವಮೂರ್ತಿಗೆ ಜನರು ಪೂಜೆ ಸಲ್ಲಿಸಿ ಪುನೀತರಾದರು.
ಬಿಲ್ವಾಪತ್ರೆ, ಎಕ್ಕದ ಹೂವಿನ ಅಲಂಕಾರ
ಎಕ್ಕದ ಹೂವಿನ ಮಾಲೆ, ಸೇವಂತಿಗೆ, ಬಿಲ್ವಾಪತ್ರೆ ಹಾರ, ಗುಲಾಬಿ ಹೀಗೆ ನಾನಾ ಹೂವಿನ ಹಾರಗಳ ನಡುವೆ ಶಿವ ಕಂಗೊಳಿಸಿದ್ದು ಹೀಗೆ.
ಸಾಲುಗಟ್ಟಿ ನಿಂತ ಭಕ್ತರು
ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಶಿವನ ಮೂರ್ತಿಗೆ ಪೂಜೆ ಸಲ್ಲುವುದಗೋಸ್ಕರ ಮುಂಜಾನೆಯಿಂದಲೇ ಧಗೆಧಗೆ ಬಿಸಿಲನ್ನು ಲೆಕ್ಕಿಸದೆ ಸಾಲುಗಟ್ಟಿ ನಿಂತಿದ್ದರು.
ಶ್ರದ್ಧಾ ಭಕ್ತಿಯಿಂದ ಪೂಜೆ
ಹುಬ್ಬಳ್ಳಿ, ಧಾರವಾಡ ಜನರು ಬಹಳ ಶ್ರದ್ಧಾ ಭಕ್ತಿಯಿಂದ ಶಿವನಿಗೆ ತುಪ್ಪದ ಆರತಿ, ಕರ್ಪೂರ ದೀಪ ಬೆಳಗಿ ತಮ್ಮ ಭಕ್ತಿ ಪ್ರದರ್ಶಿಸಿದರು.