ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪ
ಧಾರವಾಡ, ಏ. 28: ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಸಚಿವ ದಿನೇಶ್ ಗುಂಡೂರಾವ್ ಮತ್ತು ಅವರ ಕುಟುಂಬ 720 ಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ದಿನೇಶ್ ಗುಂಡೂರಾವ್ ಮತ್ತು ಅವರ ಕುಟುಂಬ ಸದಸ್ಯರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದಾರೆ.
ಧಾಡವಾಡದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬ ಬೆಂಗಳೂರು ಉತ್ತರ ತಾಲೂಕಿನ ಜಾಲಹಳ್ಳಿಯ ನವರತ್ನ ಅಗ್ರಹಾರ ಬಳಿ 720 ಕೋಟಿ ಮೊತ್ತದ 64 ಎಕರೆ ಗೋಮಾಳ ಜಮೀನು ಕಬಳಿಕೆ ಮಾಡಿದೆ ಎಂದು ದಾಖಲೆ ಬಿಡುಗಡೆ ಮಾಡಿದರು.

ದಿನೇಶ್ ಗುಂಡೂರಾವ್ ಸಹೋದರರಾದ ರಾಜೇಶ್, ಮಹೇಶ ಹಾಗೂ ತಾಯಿ ವರಲಕ್ಷ್ಮಿ ಹೆಸರಿನಲ್ಲಿ 47.16 ಎಕರೆ ಜಮೀನು ಹಾಗೂ ದಿನೇಶ್ ಅವರ ಚಿಕ್ಕಮ್ಮ ಜಮುನಾ ಹೆಸರಿನಲ್ಲಿ 17.13 ಎಕರೆ ಗೋಮಾಳ ಜಮೀನು ಕಬಳಿಕೆ ಮಾಡಲಾಗಿದೆ ಎಂದು ದಾಖಲೆಗಳನ್ನು ನೀಡಿದರು.
ಗೋಮಾಳ ಜಮೀನು ಗುಳುಂ : ಬೆಂಗಳೂರು ಉತ್ತರ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ಕೆಂಗೇರಿ ಬಳಿ ಬಿ.ಎಂ. ಕಾವಲಹಳ್ಳಿಯಲ್ಲಿ ಅಕ್ರಮವಾಗಿ 18 ಎಕರೆ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ಅವರು ನಡೆಸಿರುವ ಅಕ್ರಮದಲ್ಲಿ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ನಿರ್ದಿಷ್ಟ ಉದ್ದೇಶಕ್ಕೆ ಇಟ್ಟ ಗೋಮಾಳ ಭೂಮಿ ಹಾಗೂ ಸಾಮೂಹಿಕ ಭೂಮಿಗಳನ್ನು ಸಕ್ರಮಗೊಳಿಸಿ ಕಾಣಿಕೆ ರೂಪದಲ್ಲಿ ಅರ್ಜಿದಾರರಿಗೆ ಕೊಟ್ಟು ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವುದು ಕಾನೂನು ಬಾಹಿರ ಎಂದು 2012ರ ನವೆಂಬರ್ ತಿಂಗಳಲ್ಲಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರು ಆದೇಶ ನೀಡಿದ್ದರು. ಆದರೆ, ಶ್ರೀನಿವಾಸ್ ಈ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದರು.
ಎರಡನೇ ಆರೋಪ : ಎಸ್.ಆರ್.ಹಿರೇಮಠ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಏ.16ರಂದು ಸುಮಾರು ರೂ. 120 ಕೋಟಿ ಬೆಲೆಬಾಳುವ 10 ಎಕರೆ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಆರೋಪವನ್ನು ಮಾಡಿದ್ದರು. ಭೂಮಿ ಒತ್ತುವರಿಯ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಭಾನುವಾರ ಮತ್ತೊಂದು ಆರೋಪವನ್ನು ಮಾಡಿದ್ದಾರೆ.












Click it and Unblock the Notifications