ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ
ಹುಬ್ಬಳ್ಳಿ, ಜೂನ್ 17 : ಧಾರವಾಡ ಜಿಲ್ಲಾ ಪಂಚಾಯಿತಿ ಬಿಪಿಪಿ ಸದಸ್ಯ ಯೋಗೇಶ ಗೌಡ ಅವರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಜೂನ್ 15ರ ಮುಂಜಾನೆ ಯೋಗೇಶ್ ಗೌಡ ಕೊಲೆ ನಡೆದಿತ್ತು.
ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರು ಈ ಕುರಿತು ಮಾಹಿತಿ ನೀಡಿದರು. ಹತ್ಯೆಗೆ ಸಂಬಂಧಿಸಿದಂತೆ ಬಸವರಾಜ ಮುತ್ತಗಿ (37), ವಿಕ್ರಂ ಬಳ್ಳಾರಿ (26), ವಿನಾಯಕ ಕಟಗಿ (34), ಕೀರ್ತಿಕುಮಾರ ಕುರಹಟ್ಟಿ (25), ಸಂದೀಪ್ ಅಲಿಯಾಸ್ ಸ್ಯಾಂಡಿ ಸವದತ್ತಿ (28) ಎಂಬುವವರನ್ನು ಬಂಧಿಸಲಾಗಿದೆ. [ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]

ಜಮೀನು ವಿವಾದದಿಂದಾಗಿ ಕೊಲೆ : ನಾಗೇಶ ಎಂಬುವವರಿಗೆ ಸೇರಿದ 40 ಎಕರೆ ಜಮೀನು ಧಾರವಾಡ ಬಳಿಯ ಬೆಳ್ಳಿಗಟ್ಟಿ ಗ್ರಾಮದಲ್ಲಿತ್ತು. ಇದರಲ್ಲಿ 25.8 ಎಕರೆ ನೋಟರಿಯಾಗಿತ್ತು. ಉಳಿದ ಜಾಗದಲ್ಲಿ 9 ಎಕರೆಯನ್ನು ಯೋಗೇಶ ಗೌಡ ಖರೀದಿಸಿದ್ದರು. [ಯೋಗೇಶಗೌಡ ಕೊಲೆ ಹಿಂದೆ ಕಾಣದ ಕೈ ಕೈವಾಡ]
ಆದರೆ, ಅದರೊಂದಿಗೆ 15 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದರು. ಇದೇ ಸಮಯದಲ್ಲಿ ಕನ್ನಡಪರ ಸಂಘಟನೆಯೊಂದರ ಮುಖ್ಯಸ್ಥ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ವಿನಯ ಕುಲಕರ್ಣಿ ಅವರ ಆಪ್ತನಾಗಿದ್ದ ಬಸವರಾಜ ಮುತ್ತಗಿ ನಾಗೇಶ ಅವರಿಂದ 5 ಎಕರೆ ಜಮೀನು ಖರೀದಿಸಿದ್ದ.

ತನ್ನ ಜಮೀನನ್ನು ಖರೀದಿಸಿದರೆ ಕೊಲೆ ಮಾಡುವುದಾಗಿ ಯೋಗೇಶ ಗೌಡ ಬಸವರಾಜ ಮುತ್ತಗಿಗೆ ಬೆದರಿಕೆ ಹಾಕಿದ್ದ. ಈ ಸೇಡಿನಿಂದಾಗಿ ಯೋಗೇಶ ಗೌಡನನ್ನು ಕೊಲೆ ಮಾಡಲಾಗಿದೆ.
ಬಸವರಾಜ ಮುತ್ತಗಿ ಅಪರಾಧ ಶಾಸ್ತ್ರದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದರೊಂದಿಗೆ ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡುತ್ತಿದ್ದ.












Click it and Unblock the Notifications