ಧಾರವಾಡಕ್ಕೆ ಶೀಘ್ರವೇ ಪ್ರತ್ಯೇಕ ಮಹಾನಗರ ಪಾಲಿಕೆ?
ಧಾರವಾಡ, ಡಿಸೆಂಬರ್ 13; ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು. ಎರಡೂ ನಗರಗಳು ಸೇರಿ ಒಂದು ಮಹಾನಗರ ಪಾಲಿಕೆ ಇದೆ. ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಬೇಡಿಕೆ ಇಡಲಾಗಿದೆ. ಇದಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಲಾಗುತ್ತದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಈ ಕುರಿತು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ ಗಮನ ಸೆಳೆದರು. ಶಾಸಕರು "ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಗತ್ಯವಿರುವ ಎಲ್ಲಾ ಮಾನದಂಡಗಳು ಪೂರ್ಣವಾಗಿದ್ದು, ಮಹಾನಗರ ಪಾಲಿಕೆ ರಚನೆಗೆ ಕ್ರಮವಹಿಸಿ ಆದೇಶ ಹೊರಡಿಸಬೇಕೆಂದು" ನಗರಾಭಿವೃದ್ಧಿ ಸಚಿವರನ್ನು ಒತ್ತಾಯಿಸಿದರು.

2ನೇ ಅತಿ ದೊಡ್ಡ ಪಾಲಿಕೆ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ನಮ್ಮ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರಪಾಲಿಕೆಯಾಗಿದೆ. ಹುಬ್ಬಳ್ಳಿ-ಧಾರವಾಡವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಹತ್ತಿರದಲ್ಲಿವೆ. ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಪ್ರದೇಶದಲ್ಲಿ ಕೈಗಾರಿಕೆ, ವಸತಿ ಹಾಗೂ ಶೈಕ್ಷಣಿಕ ಕ್ಷೇತ್ರದ ಎಲ್ಲಾ ಕ್ಷೇತ್ರಗಳು ಬೃದಾಕಾರವಾಗಿ ಬೆಳೆದಿವೆ ಎಂದು ಶಾಸಕರು ವಿವರಣೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿಲ್ಲ ಹಾಗೂ ಹಲವಾರು ಸಂಘಟನೆಗಳು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಬೇಕೆಂದು ಅಭಿಪ್ರಾಯಪಟ್ಟಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಧಾರವಾಡದ ಜನರ ಸರ್ವತೋಮುಖ ಅಭಿವೃದ್ಧಿ ಹಿತದೃಷ್ಟಿಯಿಂದ ಧಾರವಾಡ ಪ್ರತ್ಯೇಕ ಮಹಾನಗರಪಾಲಿಕೆಯನ್ನು ಸ್ಥಾಪಿಸುವಂತೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರ ಗಮನ ಸೆಳೆದರು.
ಸಚಿವ ಸುರೇಶ ಬಿ. ಎಸ್. ಮಾತನಾಡಿ, "ಹುಬ್ಬಳ್ಳಿ-ಧಾರವಾಡ ನಗರಗಳು ಅವಳಿ ನಗರವಾಗಿ ಗುರಿತಿಸಲ್ಪಟ್ಟಿದ್ದು, ಜಂಟಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಾಗಿ ಈಗಾಗಲೇ ಗುರುತಿಸಲ್ಪಟ್ಟಿವೆ. ಈ ಮಹಾನಗರ ಪಾಲಿಕೆಯು 202.3 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, 2011ರ ಜನಗಣತಿಯನ್ವಯ 9,43,788 ಜನಸಂಖ್ಯೆ ಹೊಂದಿದೆ ಹಾಗೂ ಇಲ್ಲಿನ ಜನಸಾಂದ್ರತೆಯನ್ನು ಪ್ರತಿ ಚದರ ಕಿ.ಮೀ.ಗೆ 4,665 ಆಗಿದೆ. ಒಂದು ನಗರ ಸ್ಥಳೀಯ ಸಂಸ್ಥೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು 2011ರ ಜನಸಂಖ್ಯೆಯು ಮಾನದಂಡವಾಗಿದ್ದು, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರಲ್ಲಿರುವ ಮಾನದಂಡಗಳನ್ನು ಪೂರೈಸುತ್ತಿರುವ ಬಗ್ಗೆ ಪರಿಶೀಲಿಸಿ, ಧಾರವಾಡ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತಿದೆ" ಎಂದು ಹೇಳಿದರು.
ಮಹಾನಗರ ಪಾಲಿಕೆ ರಚನೆಯ ಅರ್ಹತೆ: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ನಿಯಮ-3ರಲ್ಲಿ ತಿಳಿಸಿರುವಂತೆ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವ ಪ್ರದೇಶದ ಜನಸಂಖ್ಯೆ 3 ಲಕ್ಷಕ್ಕಿಂತ ಕಡಿಮೆ ಇರಬಾರದು. ಅಂತಹ ಪ್ರದೇಶದ ಜನಸಂಖ್ಯೆಯ ಜನಸಾಂದ್ರತೆಯು ಆ ಪ್ರದೇಶದ ಒಂದು ಚದರ ಕಿ.ಮೀ. ವಿಸ್ರ್ತೀಣಕ್ಕೆ 3,000 ಕ್ಕಿಂತ ಕಡಿಮೆ ಇರಬಾರದು.
ಹಿಂದಿನ ಜನಗಣತಿಯಲ್ಲಿ ಅಂತಹ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ರೂ. 6.00 ಕೋಟಿ ಅಥವಾ ವಾರ್ಷಿಕ ತಲಾ ಒಬ್ಬರಿಗೆ ರೂ. 200 ಗಳ ದರದಂತೆ ಲೆಕ್ಕಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆ ಇರಬಾರದು ಮತ್ತು ಅಂತಹ ಪ್ರದೇಶದಲ್ಲಿನ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣದಲ್ಲಿ ಶೇ. 50 ಕ್ಕಿಂತ ಕಡಿಮೆಯಿಲ್ಲದಿರುವುದನ್ನು ಪರಿಗಣಿಸಲಾಗುತ್ತದೆ.
ಈ ಎಲ್ಲಾ ಮಾನದಂಡಗಳನ್ನು ಪೂರೈಸುತ್ತಿರುವ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲು ಕ್ರಮಕೈಗೊಳ್ಳಲಾಗುವುದು. ಧಾರವಾಡ ಜಿಲ್ಲಾಧಿಕಾರಿಗಳು ಧಾರವಾಡ ನಗರವನ್ನು ಮಾತ್ರ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೂಕ್ತವೆಂದು ಗುರುತಿಸಿ, ಈ ಕುರಿತಂತೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಿದ್ದಲ್ಲಿ ಮತ್ತು ಪೌರಾಡಳಿತ ನಿರ್ದೇಶಕರಿಂದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರನ್ವಯ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯು ಸರ್ಕಾರದಲ್ಲಿ ಸ್ವೀಕೃತವಾದಲ್ಲಿ ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಸಚಿವರು ಹೇಳಿದರು.












Click it and Unblock the Notifications