ಹುಬ್ಬಳ್ಳಿ; ಉಕ್ರೇನ್ನಿಂದ ವಾಪಸ್ ಆದ ವಿದ್ಯಾರ್ಥಿನಿ ಸ್ವಾಗತಿಸಿದ ಸಿಎಂ
ಧಾರವಾಡ, ಮಾರ್ಚ್ 06; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿ ಉಕ್ರೇನ್ನಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ನಲ್ಲಿ ಕರ್ನಾಟಕದ ಇನ್ನೂ 200 ಜನರು ಸಿಲುಕಿದ್ದಾರೆ.
ಭಾನುವಾರ ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿ ಆಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿನಿಯನ್ನು ಬರಮಾಡಿಕೊಂಡರು. ಸಿಹಿ ತಿನ್ನಿಸಿ ಆಕೆಯನ್ನು ಬರಮಾಡಿಕೊಂಡು ಶುಭ ಹಾರೈಸಿದರು.
ಮಾರ್ಚ್ 2ರ ಬುಧವಾರ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಚೈತ್ರಾ ಗಂಗಾಧರ ಸಂಶಿ ನಿವಾಸಕ್ಕೆ ಭೇಟಿ ನೀಡಿದ್ದರು. ಭೇಟಿಯ ಸಂದರ್ಭದಲ್ಲಿಯೇ ತನ್ನ ಪಾಲಕರಿಗೆ ವೀಡಿಯೋ ಕರೆ ಮಾಡಿದ್ದ ಚೈತ್ರಾ ಸಂಶಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ವಿದ್ಯಾರ್ಥಿನಿಗೆ ಭರವಸೆ ತುಂಬಿದ್ದರು.

ಚೈತ್ರಾ ಸಂಶಿ ರೈಲಿನ ಮೂಲಕ ಪೋಲೆಂಡ್ ದೇಶದ ಗಡಿಗೆ ಆಗಮಿಸುತ್ತಿದ್ದರು. ಅಲ್ಲಿಂದ ಆಪರೇಷನ್ ಗಂಗಾ ವಿಶೇಷ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ್ದು, ಅಲ್ಲಿಂದ ಭಾನುವಾರ ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಚೈತ್ರಾ ಗಂಗಾಧರ ಸಂಶಿ, "ಉಕ್ರೇನ್ನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ" ಎಂದರು.
"ಯುದ್ಧ ಆರಂಭವಾದ ಬಳಿಕ ಆಹಾರಕ್ಕಾಗಿ ಪರದಾಟ ಆರಂಭವಾಯಿತು. ದಿನಕ್ಕೆ ಒಂದು ಹೊತ್ತು ಊಟ ಸಿಕ್ಕಿದರೆ ಅದೇ ಹೆಚ್ಚು ಎನ್ನುವ ಪರಿಸ್ಥಿತಿ ಬಂತು. ನೀರು, ಆಹಾರಕ್ಕಾಗಿ ಪರದಾಟ ಆರಂಭವಾಗಿದೆ" ಎಂದು ಹೇಳಿದರು.
"ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತೀಯರನ್ನೇ ಅತಿ ಹೆಚ್ಚಾಗಿ ರಕ್ಷಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಹೊರಗೆ ಬರಲು ನಾನು ಯೋಚಿಸಿದ್ದೆ. ಆದರೆ ನವೀನ್ ಸಾವಿನ ಬಳಿಕ ಆ ಯೋಚನೆ ಕೈ ಬಿಟ್ಟೆ" ಎಂದು ಚೈತ್ರಾ ತಿಳಿಸಿದರು.
200 ಜನರು ಸಿಲುಕಿದ್ದಾರೆ; "ಉಕ್ರೇನ್ನಲ್ಲಿ ಕರ್ನಾಟಕದ ಇನ್ನೂ 200 ಜನರು ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು, "ಉಕ್ರೇನ್ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದರು. ಅವರನ್ನು ಹಂತ ಹಂತವಾಗಿ ಕರೆತರಲಾಗುತ್ತಿದೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಬಹಳಷ್ಟು ನೆರವಾಗಿದ್ದಾರೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರೇ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ. ಉಕ್ರೇನ್ ಗಡಿಯಲ್ಲಿರುವ ನಾಲ್ಕೈದು ದೇಶಗಳ ಜೊತೆ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
"ಉಕ್ರೇನ್ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿಯ ನವೀನ್ ಮೃತದೇಹವನ್ನು ತರುವ ಪ್ರಯತ್ನ ಸಹ ನಡೆಯುತ್ತಿದೆ. ಯುದ್ಧದ ಸ್ಥಿತಿಯನ್ನು ನೋಡಿಕೊಂಡು ಮೃತದೇಹ ತರಲಾಗುತ್ತದೆ" ಎಂದು ಹೇಳಿದರು.
ಉಕ್ರೇನ್ನಲ್ಲಿ ಸಿಲುಕಿದ್ದ 84 ಜನರು ಶನಿವಾರ ನವದೆಹಲಿಗೆ ವಾಪಸ್ ಆದರು. ಈ ಮೂಲಕ ಕರ್ನಾಟಕದ 366 ಜನರು ಇದುವರೆಗೂ ಸುರಕ್ಷಿತವಾಗಿ ವಾಪಸ್ ಆದಂತೆ ಆಗಿದೆ.
ಶನಿವಾರ ದೆಹಲಿಗೆ ಆಗಮಿಸಿದ ನಾಲ್ಕು ವಿಮಾನಗಳಲ್ಲಿ 84 ಜನರು ಆಗಮಿಸಿದ್ದಾರೆ. ಫೆಬ್ರವರಿ 27ರಿಂದ ಶನಿವಾರದ ತನಕ 366 ಕರ್ನಾಟಕದ ಜನರು ವಾಪಸ್ ಆಗಿದ್ದಾರೆ.
ಫೆಬ್ರವರಿ 27ರಂದು 30 ಮಂದಿ, ಫೆಬ್ರವರಿ 28ರಂದು 7, ಮಾರ್ಚ್ 1ರಂದು 18, 2ರಂದು 31, ಮಾರ್ಚ್ 3ರಂದು 104 ಮತ್ತು ಮಾರ್ಚ್ 4ರಂದು 92 ಕರ್ನಾಟಕದವರು ಆಗಮಿಸಿದ್ದಾರೆ.












Click it and Unblock the Notifications