ಕೈ ತಪ್ಪಿದ ಸಚಿವ ಸ್ಥಾನ; ಅರವಿಂದ ಬೆಲ್ಲದ ಫೇಸ್ಬುಕ್ ಪೋಸ್ಟ್
ಧಾರವಾಡ, ಆಗಸ್ಟ್ 06; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆರಂಭವಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲು ಕೇಳಿ ಬಂದ ಹೆಸರು ಧಾರವಾಡ ಶಾಸಕ ಅರವಿಂದ ಬೆಲ್ಲದ. ಆದರೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಪಟ್ಟ ಕೈತಪ್ಪಿತ್ತು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಬೊಮ್ಮಾಯಿ ಸಂಪುಟದಲ್ಲಿ ಅರವಿಂದ ಬೆಲ್ಲದ ಸಚಿವರಾಗಿ ಬಹುಮುಖ್ಯ ಖಾತೆಯನ್ನು ಪಡೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಸಿಕಿಲ್ಲ.
ಅರವಿಂದ ಬೆಲ್ಲದ ಫೇಸ್ಬುಕ್ ಪೋಸ್ಟ್ ಹಾಕಿದ್ದು ರಾಜಕೀಯ ಬೆಳವಣಿಗೆ ಕುರಿತು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಪೋಸ್ಟ್ ಹಾಕಿರುವ ಶಾಸಕರು 'ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ' ಎಂದು ಹೇಳಿದ್ದಾರೆ.
'ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ & ಸಂಪುಟದ ಎಲ್ಲಾ ಸ್ನೇಹಿತರಿಗೂ ನಾನು ಶುಭಾಶಯ ಕೋರುತ್ತೇನೆ. ನರೇಂದ್ರ ಮೋದಿಜೀಯವರ ಕನಸಿನಂತೆ ಕರ್ನಾಟಕ ತನ್ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದು ಭಗವಂತ ಹಾಗೂ ತಮ್ಮಲ್ಲಿ ಪ್ರಾರ್ಥಿಸುತ್ತೇನೆ' ಎಂದು ಕರೆ ನೀಡಿದ್ದಾರೆ.

ಅರವಿಂದ ಬೆಲ್ಲದ ಫೇಸ್ಬುಕ್ ಪೋಸ್ಟ್
ಶಾಸಕರ ತಮ್ಮ ಪೋಸ್ಟ್ನಲ್ಲಿ
'ಆತ್ಮೀಯರೇ., ಧಾರವಾಡ-74 ಮತಕ್ಷೇತ್ರವನ್ನು ಕಳೆದ 2 ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ' ಎಂದು ಹೇಳಿದ್ದಾರೆ.

ಇದ್ಯಾವೂ ಅಡೆತಡೆಯಾಗುವುದಿಲ್ಲ
'ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸ್ಥಾನಮಾನ ಸಿಗದೇ ಇರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ನಾನು ಇದೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನನಗೆ ಇವ್ಯಾವೂ ಅಡೆತಡೆಯಾಗುವುದಿಲ್ಲ. ಶಾಸಕನಾಗಿ ಈ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ನನ್ನ ಕ್ಷೇತ್ರದಲ್ಲಿ ಸುಮಾರು 6000 ಪಕ್ಕಾ ಮನೆ ನಿರ್ಮಾಣ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ಸಹಕಾರದಿಂದ ಧಾರವಾಡದಲ್ಲಿ ಐಐಟಿ, ಐಐಐಟಿ ಪ್ರಾರಂಭಿಸಿದ್ದು, ಉನ್ನತ ಶಿಕ್ಷಣ ಕೇಂದ್ರ, ಹಲವು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಕಾರ್ಯಗತಗೊಳಿಸಿದ್ದೇನೆ' ಎಂದು ಶಾಸಕರು ಹೇಳಿದ್ದಾರೆ.

ಯಾರೂ ಪ್ರತಿಭಟನೆ ಮಾಡಬೇಡಿ
'ನನ್ನ ಅಥವಾ ನನ್ನ ಕುಟುಂಬದ ಮೇಲೆಯಾಗಲಿ ಇದುವರೆಗೆ ರಾಜಕೀಯ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆ ಬರದಂತೆ ನನ್ನನ್ನು ನೀವು ನಡೆಸಿಕೊಂಡಿದ್ದು ನನ್ನ ಸೌಭಾಗ್ಯವೇ ಸರಿ. ಶಾಸಕನಾಗಿ ಇನ್ನಷ್ಟು ನಿಮ್ಮ ಸೇವೆ ಮಾಡಲು ನಾನು ಸಿದ್ದನಿದ್ದೇನೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವ ಕಾಯಕದ ಜತೆಗೆ ನಾನು ನಂಬಿಕೊಂಡು ಬಂದ ಸಿದ್ಧಾಂತ, ಸ್ವಚ್ಚ & ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ದವಿದ್ದೇನೆ. ಅಲ್ಲದೇ, ಭ್ರಷ್ಟಾಚಾರಿಗಳ ವಿರುದ್ಧ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ನಂಬಿರುತ್ತೇನೆ. ಏನೇ ಬರಲಿ ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ. ಧಾರವಾಡ ಕ್ಷೇತ್ರ ಶಿಕ್ಷಣ ಕಾಶಿ, ಸುಸಂಸ್ಕೃತ ಕ್ಷೇತ್ರ. ಹೀಗಾಗಿ ನನಗೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಕೊರೋನಾ ಸಂದರ್ಭದಲ್ಲಿ ಯಾರೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಬಾರದೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ಶಾಸಕರು ಮನವಿ ಮಾಡಿದ್ದಾರೆ.
Recommended Video

ನಾವೆಲ್ಲರೂ ಶ್ರಮಿಸೋಣ
'ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ & ಸಂಪುಟದ ಎಲ್ಲಾ ಸ್ನೇಹಿತರಿಗೂ ನಾನು ಶುಭಾಶಯ ಕೋರುತ್ತೇನೆ. ನರೇಂದ್ರ ಮೋದಿಜೀಯವರ ಕನಸಿನಂತೆ ಕರ್ನಾಟಕ ತನ್ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದು ಭಗವಂತ ಹಾಗೂ ತಮ್ಮಲ್ಲಿ ಪ್ರಾರ್ಥಿಸುತ್ತೇನೆ. ಜೀವನದಲ್ಲಿ ಸೋಲು, ಗೆಲುವು ಶಾಶ್ವತವಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ. ಈಗಿರುವ ಸಂದರ್ಭದಲ್ಲಿ ಶಾಸಕನಾಗಿ, ನಿಮ್ಮೆಲ್ಲರ ಸ್ನೇಹಿತನಾಗಿ ಈ ಕ್ಷೇತ್ರದ ಕೆಲಸವನ್ನು ಮೊದಲಿನಂತೆ ಮಾಡಲು ನಾನು ಸದಾ ಸಿದ್ದನಿದ್ದೇನೆ' ಎಂದು ಶಾಸಕರು ಹೇಳಿದ್ದಾರೆ.












Click it and Unblock the Notifications