ಗೋಡ್ಸೆ ವಿಚಾರವಾದಿಗಳು ಕಲಬುರ್ಗಿ ಹಂತಕರು : ಹರಿಪ್ರಸಾದ್
ಧಾರವಾಡ, ಅಕ್ಟೋಬರ್, 03 : ಖ್ಯಾತ ಸಂಶೋಧಕ, ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಕೊಲೆ ಮಾಡಿದವರು ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಬೆಂಬಲಿಗರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಅವರು ಶನಿವಾರ ಧಾರವಾಡ ನಗರದಲ್ಲಿ ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಜ್ಯ ಸರಕಾರ ಹಂತಕರ ಪತ್ತೆಗಾಗಿ ಶ್ರಮಿಸುತ್ತಿದೆ, ಇದಕ್ಕಾಗಿ ಹಲವಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಸರಕಾರ ಹಂತಕರನ್ನು ಪತ್ತೆ ಹಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಗೆ ಸಮಯವಿಲ್ಲ : ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದೇಶ ಸುತ್ತಾಡಲು ಸಾಕಷ್ಟು ಸಮಯ ಸಿಗುತ್ತದೆ. ಆದರೆ ತಮ್ಮದೇ ದೇಶದ ರಾಜ್ಯಗಳ ಸಮಸ್ಯೆಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹರಿಪ್ರಸಾದ್ ಅವರು ವ್ಯಂಗ್ಯವಾಡಿದರು.
ಕಳಸಾ-ಬಂಡೂರಿ ಕುರಿತು : ಮಹದಾಯಿ ಮತ್ತು ಕಳಸಾ-ಬಂಡೂರಿ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಓರ್ವ ಜೋಕರ್ ಎಂದು ಹರಿಪ್ರಸಾದ ಇದೇ ಸಂದರ್ಭದಲ್ಲಿ ಹೇಳಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ತಪ್ಪು ಮಾಡಿದ್ದಾರೆ ಎಂದು ದೂಷಿಸಿರುವ ನಾಯ್ಡು, ಸುಮಾರು 18 ವರ್ಷಗಳಿಂದ ಕರ್ನಾಟಕದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಏಳ್ಗೆ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಈ ವಿಷಯದಲ್ಲಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಲು ಗೋವಾದವರೇ ಆದ ಮನೋಹರ ಪರಿಕ್ಕರ್ ಅಡ್ಡಿಯಾಗುತ್ತಿದ್ದಾರೆ ಎಂದೂ ಆರೋಪಿಸಿದರು.












Click it and Unblock the Notifications