ಏಪ್ರಿಲ್ 24ರಂದು ನಾಮಪತ್ರ ವಾಪಸ್: ಧಾರವಾಡದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ತವನಪ್ಪ ಅಷ್ಟಗಿ ಘೋಷಣೆ
ಧಾರವಾಡ, ಏಪ್ರಿಲ್, 23: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತವನಪ್ಪ ಅಷ್ಟಗಿ ನಾಳೆ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಮಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ. ನಮ್ಮ ಗೌರವಕ್ಕೆ ಧಕ್ಕೆ ಬರುವ ಕೆಲಸವನ್ನು ಈಗಿನ ಶಾಸಕರಾದ ಅಮೃತ ದೇಸಾಯಿ ಅವರು ಮಾಡಿದರು. ಆರು ಬಾರಿ ಸೋತವರನ್ನು ನಾವು ಶಾಸಕರನ್ನಾಗಿ ಮಾಡಿದ್ದೆವು. ತನು, ಮನ, ಧನದಿಂದ ಕಾರ್ಯಕರ್ತರೆಲ್ಲ ಸೇರಿ ಅವರನ್ನು ಆಯ್ಕೆ ಮಾಡಿದ್ದೆವು. ಆದರೆ, ಅಮೃತ ದೇಸಾಯಿ ಅವರು ಕಾರ್ಯಕರ್ತರನ್ನೂ ಕಡೆಗಣಿಸಿದರು ಎಂದು ಅಸಮಾಧಾನ ಹೊರಹಾಕಿದರು.

ಸತೀಶ್ ಜಾರಕಿಹೊಳಿ ಅವರು ಇಂದು ನಮ್ಮ ಮನೆಗೆ ಬಂದು ಮನವೊಲಿಸಿ ನಮಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಅವರು ಹೇಳಿದ್ದರಿಂದ ನಾನು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ನಾಳೆ (ಏಪ್ರಿಲ್ 24) ನಾಮಪತ್ರ ವಾಪಸ್ ಪಡೆಯುತ್ತೇನೆ.
ಬಿಜೆಪಿಯಲ್ಲಿ ಒಂದು ವಿಶ್ವಾಸದ ಮೇಲೆ ಇದ್ದೆ. ಆದರೆ, ಅಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ. ಸಾಮಾಜಿಕ ನ್ಯಾಯದ ವಿಶ್ವಾಸದಿಂದ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ವಿಧಿಸಿಲ್ಲ. ಆದ್ದರಿಂದ ಗೌರವ ಬಯಸಿ ಬಂದಿದ್ದೇನೆ. ಮೊದಲು ನಾನು ಕಾಂಗ್ರೆಸ್ನಲ್ಲೇ ಇದ್ದೆ. ಬಳಿಕ ಕೆಜೆಪಿ, ಬಿಜೆಪಿ ಸೇರ್ಪಡೆಗೊಂಡಿದ್ದೆ. ಈಗ ಮರಳಿ ಕಾಂಗ್ರೆಸ್ಗೆ ಗೂಡಿಗೆ ಸೇರ್ಪಡೆಗೊಂಡಿದ್ದೇನೆ ಎಂದರು.
ಉದ್ದೇಶಪೂರ್ವಕವಾಗಿ ಬಂಧನ
ಇನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಅವರನ್ನು ಉದ್ದೇಶ ಪೂರ್ವಕವಾಗಿ, ಗುಂಡಾ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ನನಗೆ ಬಂದು ಮಾಲಾರ್ಪಣೆ ಮಾಡಿದ್ದಕ್ಕೆ, ಆತನನ್ನು ಅರೆಸ್ಟ್ ಮಾಡಿದ್ದಾರೆಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇತ್ತೀಚೆಗಷ್ಟೇ ಆರೋಪಿಸಿದ್ದರು.
ನಗರದ ವಕೀಲರ ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಚೇತನ ಹಿರೇಕೆರೂರ ನನಗೆ ಬೆಂಬಲ ನೀಡುತ್ತಾನೆ ಎಂದು, ಈಗಲೇ ಆತನ ಮೇಲೆ ಗುಂಡಾ ಕಾಯ್ದೆ ಹಾಕಿ ಬಂಧನ ಮಾಡಿಸಿದ್ದಾರೆ. ಪಾಲಿಕೆ ಸದಸ್ಯನಾಗಿ ಜನರ ಸೇವೆ ಮಾಡುತ್ತ ಬರುತ್ತಿದ್ದ, ಇದನ್ನು ಸಹಿಸಲಾಗದೇ ಹೀಗೆ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆಂದು ಎಂದು ಜಗದೀಶ್ ಶೆಟ್ಟರ್ ಗರಂ ಆಗಿದ್ದರು.
ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಂಡಾ ಕಾಯಿದೆ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ.
ಈಗಾಗಲೇ ಜಿಲ್ಲೆಯಿಂದ ಸುಮಾರು ಹತ್ತು ಜನರನ್ನು ಗಡಿಪಾರು ಮಾಡಿದ್ದು, ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವ ಚೇತನ ಹಿರೆಕೇರೂರು ಪಾಲಿಕೆಯ ಚುನಾಯಿತ ಪ್ರತಿನಿಧಿಯೂ ಆಗಿದ್ದಾರೆ.
ಇನ್ನು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸುವ ರ್ಯಾಲಿಯಲ್ಲಿ ಭಾಗಿಯಾಗಿದ್ದ ಪಾಲಿಕೆ ಸದಸ್ಯನ ಬಂಧನವಾಗಿದೆ. ಗೂಂಡಾ ಕಾಯ್ದೆ ಅಡಿ ಚೇತನ ಹಿರೇಕೆರೂರನ್ನು ಬಂಧಿಸಿ ಬೆಳಗಾವಿಗೆ ಹಿಂಡಲಗಾ ಜೈಲ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ಇರುವುದು ಸತ್ಯ
ಜನ ಬೆಂಬಲ ಕಾಂಗ್ರೆಸ್ಗೆ ಇದೆ. ದಿನ ನಿತ್ಯ ನನಗೆ ದೂರವಾಣಿ ಕರೆ ಬರುತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಹೇಳುತ್ತಾರೆ. 40 ಪರ್ಸೆಂಟೇಜ್ ಸರ್ಕಾರ ಆರೋಪ ವಿಚಾರಕ್ಕೆ, ನಾನೂ ಸರ್ಕಾರದ ಭಾಗವಾಗಿದ್ದೆ. ಅಧಿವೇಶನದಲ್ಲಿ 40 ನಿಮಿಷ ಮಾತನಾಡಿದ್ದೆ. ನೇಮಕಾತಿ ವಿಚಾರದ ಕುರಿತು ಪ್ರಶ್ನೆ ಮಾಡಿದ್ದೆ, ಭ್ರಷ್ಟಾಚಾರ ಇತ್ಯಾದಿಗಳನ್ನೂ ಪ್ರಸ್ತಾಪಿಸಿದ್ದೇನೆ. ಭ್ರಷ್ಟಾಚಾರ ಇರುವುದು ಸತ್ಯ ಎಂದು ಜಗದೀಶ್ ಶೆಟ್ಟರ್ ಹೇಳಿದ್ದರು.












Click it and Unblock the Notifications