ರೈತರಿಗೆ ಮಾರಕವಾಗಿರುವ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ; ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಧಾರವಾಡ, ಸೆಪ್ಟೆಂಬರ್, 07: ಧಾರವಾಡ ಜಿಲ್ಲೆಯ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ನವಲಗುಂದ, ಅಣ್ಣಿಗೇರಿ ಭಾಗಗಳಲ್ಲಿ ರೈತರು ಬೆಳೆದ ಬೆಳೆಗಳು ಜಲಾವೃತವಾಗಿವೆ. ಭಾರಿ ಮಳೆಯಿಂದ ಈ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ರೈತರು ಹಾಗೂ ಜನಸಾಮಾನ್ಯರ ಬದುಕನ್ನೇ ಮುಳುಗಿಸುತ್ತಿವೆ. ಪ್ರತಿ ಬಾರಿ ಮಳೆ ಸುರಿದಾಗಲೂ ಈ ಹಳ್ಳಗಳು ಉಕ್ಕಿ ಹರಿದು ಅಪಾರ ಪ್ರಮಾಣದ ಬೆಳೆಗಳು ನಾಶ ಆಗುತ್ತಿವೆ. ಕೃಷಿ ಚಟುವಟಿಕೆ ಸೇರಿದಂತೆ ಇತರೆ ಕೆಲಸಕ್ಕೆ ಹೋದವರು ಜೀವಂತವಾಗಿ ಮರಳಿ ಬರುವುದೇ ಅನುಮಾನ ಎಂಬಂತೆ ಆತಂಕ ಮೂಡಿಸಿದೆ.
ಅದರಲ್ಲೂ ಬೆಣ್ಣೆ ಹಳ್ಳ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ರೈತರ ಬದುಕನ್ನೇ ಕಿತ್ತುಕೊಂಡುಬಿಟ್ಟಿದೆ. ನೆರೆ ಬಂದಾಗ ಜನರು ತ್ತರಿಸಿ ಬಿಡುತ್ತಾರೆ. ಮತ್ತೊಂದೆಡೆ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕೊಡುವ ಭರವಸೆಯನ್ನು ನೀಡಿ ಕಣ್ಮರೆ ಆಗಿ ಬಿಡುತ್ತಾರೆ.
ಇದುವರೆಗೂ ಯಾವುದೇ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಲ್ಲಿನ ಜನರು ಜನಪ್ರತಿನಿಧಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚಿಗೆ ನವಲಗುಂದ ತಾಲೂಕಿನ ತಡಹಾಳ ಹಾಗೂ ಇಂಗಳಹಳ್ಳಿ ಗ್ರಾಮ ಬಳಿ ಬೆಣ್ಣೆಹಳ್ಳದಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದರು. ತಡಹಾಳ ಗ್ರಾಮದ ಬಳಿ ಬೈಕ್ ಸವಾರ ಸದಾನಂದ ಮಾದರ ಕೊಚ್ಚಿ ಹೋಗಿದ್ದ. ನಂತರ ಆತನ ಶವ ಪತ್ತೆ ಆಗಿದೆ. ಮತ್ತೊಂದೆಡೆ ಇಂಗಳಹಳ್ಳಿ ಗ್ರಾಮದ ಬಳಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಆನಂದ ಹೊಸಗೌಡರ ಶವ ಇನ್ನು ಪತ್ತೆ ಆಗಿಲ್ಲ. ಇದೇ ಇಂಗಳಹಳ್ಳಿ ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಹಿನ್ನೀರಿನ ರಭಸಕ್ಕೆ 32 ಜನರು ಕೊಚ್ಚಹೋಗಿದ್ದರು. ಆದರೆ ಅವರು ಪ್ರಾಣವನ್ನು ಪಣಕ್ಕಿಟ್ಟು ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ಜನರ ಆರೋಪ?
ಅಷ್ಟೇ ಅಲ್ಲ ಇದೇ ವರ್ಷ ಸಾವಿರಾರು ಹೆಕ್ಟೇರ್ ಜಮೀನು ಜಲಾವೃತ ಆಗಿದ್ದು, ರೈತರು ಕಂಗಾಲಾಗಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಇದುವರೆಗೂ ಜಲಾವೃತ ಆದ ಬೆಳೆ ಮತ್ತು ಸಾವನ್ನಪ್ಪಿದ ಜೀವಗಳಿಗೆ ಲೆಕ್ಕವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಇತ್ತೀಚಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿ ನೀಡಿದ್ದರು. ಈ ಯೋಜನೆಗೆ ನೀರಾವರಿ ಮಂಡಳಿ ಒಪ್ಪಿಗೆ ನೀಡಿದೆ. ಇದನ್ನು ಸಂಪುಟ ಸಭೆಗೆ ತರುವಂತೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೇವೆ. ಮತ್ತೂಮ್ಮೆ ಅವರ ಗಮನಕ್ಕೆ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದರು. ಈಗಾಗಲೇ ಅಂದಾಜು 350 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪರಿಹಳ್ಳದ ಅಗಲೀಕರಣ ಹಾಗೂ ಸ್ವತ್ಛತಾ ಕಾರ್ಯಕ್ಕೆ ಕ್ರಿಯಾಯೋಜನೆ ಆಗಿದೆ. ಅದೇ ರೀತಿ ಬೆಣ್ಣೆಹಳ್ಳದ ಅಗಲೀಕರಣ, ಸ್ವತ್ಛತೆ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಒಂದೆರಡು ದಿನಗಳಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಅವರ ಗಮನಕ್ಕೆ ಇದನ್ನು ತರುವುದಾಗಿ ಹೇಳಿದ್ದರು.

ಜನಪ್ರತಿನಿಧಿಗಳ ವಿರುದ್ಧ ತಿರುಗಿಬಿದ್ದ ಜನರು
ಬೆಣ್ಣೆಹಳ್ಳ ಪ್ರವಾಹ ತಡೆ ನಿಟ್ಟಿನಲ್ಲಿ ಈಗಾಗಲೇ ಅಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆಗಳ ಎತ್ತರ ಹೆಚ್ಚಳ, ಕೆಲವೆಡೆ ಸೇತುವೆಗಳ ಅಗಲೀಕರಣ, ಹೂಳು ತೆಗೆಯುವುದು ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಳ್ಳದ ಅಗಲೀಕರಣ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಬೆಣ್ಣೆಹಳ್ಳ ಪಾತ್ರದ ಅತಿಕ್ರಮಣವೇ ಪ್ರವಾಹ ಸ್ಥಿತಿಗೆ ಕಾರಣ ಆಗುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಸಚಿವರೇ ನೀಡಿದ್ದರು. ಆದರೆ ಅವರೇ ಈ ಭಾಗದ ಪ್ರಭಾವಿ, ಕೇಂದ್ರ ಸಚಿವರು ಆಗಿದ್ದಾರೆ. ಒತ್ತುವರಿ ಮಾಡಿಕೊಂಡ ಬೆಣ್ಣೆ ಹಳ್ಳದ ಪ್ರದೇಶ ತೆರವು ಮಾಡಿ, ಹಳ್ಳದಲ್ಲಿ ಹುದುಗಿರುವ ಹೂಳನ್ನು ಎತ್ತಿದರೆ ಇದೇ ಶಾಶ್ವತ ಯೋಜನೆ ಆಗುತ್ತದೆ. ಯಾಕೆ ನೂರಾರು ಕೋಟಿ ಖರ್ಚು ಮಾಡಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ ಆಗಿದೆ.

ಜನಪ್ರತಿನಿಧಿಗಳ ವಿರುದ್ಧ ಭುಗಿಲೆದ್ದ ಜನಾಕ್ರೋಶ
ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರದೇಶವನ್ನು ಆಡಳಿತ ರೂಢ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು, ಸ್ಥಳೀಯವಾಗಿ ಪ್ರಾಬಲ್ಯ ಹೊಂದಿದವರು ಒತ್ತುವರಿ ಮಾಡಿಕೊಂಡಿದ್ದರೆ ಎಂದು ಜನರ ಆರೋಪ ಆಗಿದೆ. ಈ ಎರಡು ಹಳ್ಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾರಿಗೂ ಆಸಕ್ತಿ ಇಲ್ಲದಂತಾಗಿದೆ. ಏಕೆಂದರೆ ಇದು ಕೆಲ ಅಧಿಕಾರಿಗಳ, ಜನಪ್ರತಿನಿಧಿಗಳ ಪಾಲಿಗೆ ಚಿನ್ನದ ಮೊಟ್ಟೆ ಹಳ್ಳಗಳು ಆಗಿವೆ. ಈ ಹಿಂದೆ ವಿನಯ್ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂದರ್ಭದಲ್ಲಿ ನೂರು ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದರು. ಅದು ಎಲ್ಲಿ ಹೋಯಿತು ಎನ್ನುವುದೇ ಇನ್ನು ಪ್ರಶ್ನೆ ಆಗಿಯೇ ಉಳಿದಿದೆ. ಇತ್ತೀಚಿಗೆ ತುಪ್ಪರಿ ಹಳ್ಳದಿಂದ ಹರಿದು ಹೋಗುವ ನೀರನ್ನು ಬಳಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದರು. ಇದು ಎಷ್ಟರ ಮಟ್ಟಿಗೆ ಜಾರಿ ಆಗುತ್ತದೆ ಎಂಬುದು ಕೇಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಹಳ್ಳಗಳ್ಳಿಗೆ ಸೇರುವ 1.5 ಟಿಎಂಸಿ ನೀರಿನ ಸದ್ಬಳಕೆ
ನವಲಗುಂದ ತಾಲೂಕಿನ ತುಪ್ಪರಿಹಳ್ಳ, ಬೆಣ್ಣಿಹಳ್ಳಕ್ಕೆ ಸೇರುವ ಸುಮಾರು 1.5 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆ ಮೂಲಕ ಮೊರಬ, ಶಿರಕೋಳ, ಬ್ಯಾಹಟ್ಟಿ, ಸುಳ್ಳ ಹಾಗೂ ತಿರ್ಲಾಪುರ ಗ್ರಾಮಗಳ ಸುಮಾರು 10 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬ್ಯಾಹಟ್ಟಿಯಲ್ಲಿ ಚಾಲನೆ ನೀಡಿದ್ದಾರೆ. ಇತ್ತೀಚಿಗೆ ಬ್ಯಾಹಟ್ಟಿ ಗ್ರಾಮದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡದ ಸಚಿವರು, ಡ್ರೋನ್ ಸಮೀಕ್ಷೆ ಕಾರ್ಯ ವೈಖರಿಯ ಬಗ್ಗೆ ಏತ ನೀರಾವರಿ ನಕ್ಷೆ ವೀಕ್ಷಣೆಯನ್ನು ಮಾಡಿದ್ದರು. ಕೃಷಿಯಲ್ಲಿ ಹೊಸ ಸಂಚಲನ ಸೃಷ್ಟಿಸಿ ಪ್ರವಾಹದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ರೈತ ಸಮುದಾಯಕ್ಕೆ ಅನುಕೂಲ ಮಾಡುವ ಸದುದ್ದೇಶದಿಂದ 10 ಸಾವಿರ ಹೆಕ್ಟೇರ್ ನೀರಾವರಿಗೆ ಗ್ರೀನ್ ಸಿಗ್ನಲ್ ಕೊಟ್ಟಂತಾಗಿದೆ ಎಂದು ತಿಳಿಸಿದ್ದರು. ಆದರೆ ಇದುವರೆಗೆ ಯಾವುದೇ ಯೋಜನೆಗಳು ಸರಿಯಾಗಿ ಜಾರಿ ಆಗುತ್ತಿಲ್ಲ ಎನ್ನುವುದು ಅಲ್ಲಿನ ಸ್ಥಳೀಯರ ಆರೋಪ ಆಗಿದೆ.












Click it and Unblock the Notifications