ಹನುಮಂತಪ್ಪ ಭೇಟಿಗೆ ಕಾದು ಕುಳಿತಿದ್ದಾರೆ ಕುಟುಂಬ ಸದಸ್ಯರು
ಧಾರವಾಡ, ಫೆಬ್ರವರಿ 10 : ಸಿಯಾಚಿನ್ನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಯೋಧನ ಕುಟುಂಬದವರು ದೆಹಲಿಗೆ ತಲುಪಿದ್ದು, ಇಂದು ಹನುಮಂತಪ್ಪ ಅವರನ್ನು ನೋಡಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ದೇಶಾದ್ಯಂತ ಹನುಮಂತಪ್ಪ ಕೊಪ್ಪದ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿಯೂ ಗ್ರಾಮಸ್ಥರೆಲ್ಲಾ ಒಂದಾಗಿ ಯೋಧನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. [ಹನುಮಂತಪ್ಪ ಹುಟ್ಟೂರಿನಲ್ಲಿ ಗ್ರಾಮಸ್ಥರ ಪ್ರಾರ್ಥನೆ]

ಒನ್ ಇಂಡಿಯಾ ಜೊತೆ ಮಾತನಾಡಿದ ಹನುಮಂತಪ್ಪ ಕೊಪ್ಪದ ಅವರ ಸಂಬಂಧಿಕರಾದ ರಮೇಶ್ ಕೊಪ್ಪದ ಅವರು, 'ಹನುಮಂತಪ್ಪ ಅವರು ಬದುಕಿದ್ದಾರೆ ಎಂಬುದು ಒಂದು ಪವಾಡ, ಮತ್ತೊಂದು ಪವಾಡ ನಡೆಯಲಿ ಅವರು ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ' ಎಂದು ಹೇಳಿದ್ದಾರೆ. [ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]
'ಹನುಮಂತಪ್ಪ ಅವರು ಕಾಣೆಯಾಗಿದ್ದಾರೆ ಎಂಬ ಸುದ್ದಿ ತಿಳಿದ ದಿನವೇ ಗ್ರಾಮಸ್ಥರೆಲ್ಲರೂ ಆತಂಕಗೊಂಡಿದ್ದರು. ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೆವು. ಮಂಗಳವಾರ ಅವರು ಬದುಕಿದ್ದಾರೆ ಎಂಬ ಸುದ್ದಿ ಕೇಳಿ ಗ್ರಾಮಸ್ಥರೆಲ್ಲ ಸಂತಸಗೊಂಡಿದ್ದೇವೆ' ಎಂದು ರಮೇಶ್ ಕೊಪ್ಪದ ತಿಳಿಸಿದ್ದಾರೆ. [ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ]
ಹನುಮಂತಪ್ಪ ಅವರ ತಾಯಿ ಬಸಮ್ಮ ಮತ್ತು ಪತ್ನಿ ಮಹಾದೇವಿ ಮತ್ತು ಅವರ ಹನುಮಂತಪ್ಪ ಅವರ ಸಹೋದರ ದೆಹಲಿಗೆ ತೆರಳಿದ್ದು, ಆಸ್ಪತ್ರೆಯಲ್ಲಿ ಅವರನ್ನು ನೋಡಲು ಕಾದು ಕುಳಿತಿದ್ದಾರೆ. ಧಾರವಾಡದಲ್ಲಿರುವ ಸಂಬಂಧಿಕರು ದೆಹಲಿಯಲ್ಲಿರುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ.












Click it and Unblock the Notifications